ಪಕ್ಷದ ಸಹೋದ್ಯೋಗಿ ಸೇರಿದಂತೆ ಎಲ್ಲಾ ಬಾದಲ್ಗಳನ್ನು ಸೋಲಿಸಿ ಎಂದ ಕಾಂಗ್ರೆಸ್ ಅಭ್ಯರ್ಥಿ!
ಚಂಡೀಗಢ, ಫೆಬ್ರವರಿ 19: ನಾಳೆ ಪಂಜಾಬ್ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ನಡೆದಿದೆ. ನಿನ್ನೆಯೇ ಪ್ರಚಾರವನ್ನು ಕೊನೆ ಮಾಡಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನದಂದು, ಮುಕ್ತಸರ್ ಜಿಲ್ಲೆಯ ಗಿಡ್ಡರ್ಬಾಹಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ. ಎಲ್ಲಾ ಬಾದಲ್ಗಳನ್ನು ನಾನು ಸೋಲಿಸಿ ಎಂದು ಹೇಳುವ ಮೂಲಕ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ.
ರಾಜ್ಯದ ಹಣಕಾಸು ಸಚಿವರೂ ಆಗಿರುವ ತಮ್ಮ ಸಹೋದ್ಯೋಗಿ ಕಾಂಗ್ರೆಸ್ನ ಮನ್ಪ್ರೀತ್ ಸಿಂಗ್ ಬಾದಲ್ ಸೇರಿದಂತೆ ಎಲ್ಲ ಬಾದಲ್ಗಳನ್ನು ಅವರು ಎಲ್ಲಿಂದ ಸ್ಪರ್ಧಿಸಿದರೂ ಸೋಲಿಸಬೇಕೆಂದು ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಜನರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನದಂದು ಶುಕ್ರವಾರ ಸಂಜೆ ಗಿಡ್ಡರ್ಬಹಾ ಮಾರುಕಟ್ಟೆಯಲ್ಲಿ ಜನತೆಯನ್ನು ಉದ್ದೇಶಿ ಮಾತನಾಡುವ ವೇಳೆ ಈ ವಿವಾದವನ್ನು ಸೃಷ್ಟಿ ಮಾಡಿದ್ದಾರೆ.
"ಇದು ಬಾದಲ್ಗಳಿಗೆ, ಎಲ್ಲಾ ಬಾದಲ್ಗಳಿಗೆ ಸಂದೇಶ, ಬಟಿಂಡಾ ವಾಲಾ ಬಾದಲ್ (ಮನ್ಪ್ರೀತ್ ಸಿಂಗ್ ಬಾದಲ್) ಮತ್ತು ಲಂಬಿ ವಾಲಾ ಬಾದಲ್ (ಪ್ರಕಾಶ ಸಿಂಗ್ ಬಾದಲ್) ಅವರಿಗೆ ಸಂದೇಶವಾಗಿದೆ. ಅವರು ಫಿಕ್ಸಿಡ್ ಗೇಮ್ನಲ್ಲಿ ತೊಡಗಿದ್ದಾರೆ. ಬಟಿಂಡಾದಲ್ಲಿ ಕಾಂಗ್ರೆಸ್ ಜೊತೆಗಿದ್ದು, ಇಲ್ಲಿ ಅಕಾಲಿಗಳ ಜೊತೆಗಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಬಯಲಿಗೆಳೆಯಬೇಕು," ಎಂದು ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಹೇಳಿದ್ದಾರೆ.

ವಾರಿಂಗ್ ಅವರು ಸೆಪ್ಟೆಂಬರ್ 2021 ರಲ್ಲಿ ಚನ್ನಿ ಸರ್ಕಾರದಲ್ಲಿ ಪಂಜಾಬ್ನ ಸಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ವಾರಿಂಗ್ ತನ್ನ ಪ್ರಚಾರವನ್ನು ಕೊನೆಗೊಳಿಸುವ ಮೊದಲು ಗುಂಪನ್ನು ಉದ್ದೇಶಿಸಿ ಮಾತನಾಡುವಾಗ 3 ನಿಮಿಷಗಳ ಕಾಲ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದರು. "ಇಂತಹ ಜನರು ಜನಸಾಮಾನ್ಯರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ಬಾದಲ್ಗಳು ಎಲ್ಲೇ ಸ್ಪರ್ಧಿಸಿದರೂ ಅವರನ್ನು ಸೋಲಿಸಿ," ಎಂದಿದ್ದಾರೆ.
ಬಾದಲ್ಗಳಿಗೆ ಸವಾಲೆಸೆದ ವಾರಿಂಗ್: ಇದೇ ಮೊದಲಲ್ಲ
"ನಾನು ಎಲ್ಲಾ ಬಾದಲ್ಗಳಿಗೆ ಸವಾಲು ಹಾಕುತ್ತೇನೆ, ನಾನು ದೊಡ್ಡ ಅಂತರದಿಂದ ಗೆದ್ದಾಗ ಅದು ನಿಮ್ಮ ಮುಖದ ಮೇಲೆ ದೊಡ್ಡ ಹೊಡೆತ ಬಿದ್ದಂತೆ," ಎಂದು ಕೂಡಾ ವಾರಿಂಗ್ ಹೇಳಿದ್ದಾರೆ. ಇನ್ನು ಮನ್ಪ್ರೀತ್ ಬಾದಲ್ ವಿರುದ್ಧ ವಾರಿಂಗ್ ಮಾತನಾಡಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅವರು ಶಿರೋಮಣಿ ಅಕಾಲಿ ದಳ (ಎಸ್ಎಡಿ) ನಾಯಕ ಸರೂಪ್ ಚಂದ್ ಸಿಂಗ್ಲಾ ಅವರ ಪೋಸ್ಟ್ ಅನ್ನು ಮರು ಟ್ವೀಟ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಎಸ್ಎಡಿ ನಾಯಕ ಸರೂಪ್ ಚಂದ್ ಸಿಂಗ್ಲಾ, ಬಟಿಂಡಾ ಥರ್ಮಲ್ ಪ್ಲಾಂಟ್ ಮುಚ್ಚಲ್ಪಟ್ಟ ನಂತರವೂ ಅದರ ಭೂಮಿಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಮನ್ಪ್ರೀತ್ ಬಾದಲ್ ವಿರುದ್ಧವಾಗಿ ಆರೋಪ ಮಾಡಿದ್ದರು.
ವಾರಿಂಗ್ ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಈ ವಿಷಯದ ಬಗ್ಗೆ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು. ನಂತರ ಮನ್ಪ್ರೀತ್ ತನ್ನ ಕ್ಷೇತ್ರವಾದ ಗಿಡ್ಡರ್ಬಾಹಾದಲ್ಲಿ ಅಕಾಲಿಗಳಿಗೆ ಸಹಾಯ ಮಾಡುತ್ತಿದ್ದಾನೆ ಮತ್ತು ಆದ್ದರಿಂದ ಸುಖಬೀರ್ ಸಿಂಗ್ ಬಾದಲ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಶಾಮೀಲಾಗಿದ್ದಾರೆ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.
ಜನವರಿ 31 ರಂದು, ನಾಮಪತ್ರ ಸಲ್ಲಿಸಿದ ನಂತರ, ಬಟಿಂಡಾ ಗ್ರಾಮಾಂತರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಹರ್ವಿಂದರ್ ಸಿಂಗ್ ಲಡ್ಡಿ ಅವರು ಮನ್ಪ್ರೀತ್ ಬಾದಲ್ ಅವರು ಎಸ್ಎಡಿಯ ಇತರ ಬಾದಲ್ಗಳೊಂದಿಗೆ ಸಂಪರ್ಕ ಹೊಂದಿದ್ದು ಲಡ್ಡಿ ಮತ್ತು ವಾರಿಂಗ್ ಅವರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications