ರೈತ ಪರ ಪ್ರತಿಭಟನೆ; ಸಾಮಾಜಿಕ ಕಾರ್ಯಕರ್ತೆ ನೊದೀಪ್ ಕೌರ್ಗೆ ಜಾಮೀನು
ಚಂಡೀಗಢ, ಫೆಬ್ರವರಿ 26: ಸುಲಿಗೆ ಹಾಗೂ ಕೊಲೆ ಯತ್ನದ ಆರೋಪದಲ್ಲಿ ಜನವರಿಯಲ್ಲಿ ಬಂಧಿತರಾಗಿದ್ದ ದಲಿತ ಕಾರ್ಮಿಕ ಹಕ್ಕುಗಳ ಹೋರಾಟಗಾರ್ತಿ ನೊದೀಪ್ ಕೌರ್ಗೆ ಶುಕ್ರವಾರ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಜಾಮೀನು ನೀಡಿದೆ.
ನ್ಯಾಯಾಧೀಶ ಅವನೀಶ್ ಝಿಂಗನ್ ಅವರನ್ನೊಳಗೊಂಡ ನ್ಯಾಯಪೀಠ ನೊದೀಪ್ ಕೌರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, ಜಾಮೀನು ನೀಡಿದೆ. ನೊದೀಪ್ ಕೌರ್ ವೈದ್ಯಕೀಯ ಪರೀಕ್ಷಾ ವರದಿ ಸಲ್ಲಿಸುವಲ್ಲಿ ಪೊಲೀಸರು ವಿಫಲರಾಗಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಈಚೆಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನೊದೀಪ್ ಕೌರ್, ಕಾನೂನುಬಾಹಿರವಾಗಿ ತಮ್ಮನ್ನು ಬಂಧಿಸಲಾಗಿದೆ ಎಂದು ದೂರಿದ್ದರು. ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿಗೆ ವ್ಯಾಪಕ ಬೆಂಬಲ ಗಳಿಸಿದ ಕಾರಣ ಪೊಲೀಸರು ನನ್ನನ್ನು ಬಂಧಿಸಿದ್ದು, ನನಗೆ ತೀವ್ರವಾಗಿ ಥಳಿಸಿದ್ದಾರೆ. ಬಾಸುಂಡೆ ಬರುವಂತೆ ಥಳಿಸಿ ಹಿಂಸೆ ನೀಡಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ಆರೋಪಿಸಿದ್ದರು. ತಮಗೆ ವೈದ್ಯಕೀಯ ಪರೀಕ್ಷೆ ಕೂಡ ಮಾಡದೇ ಕ್ರಿಮಿನಲ್ ದಂಡ ಸಂಹಿತೆ ಸೆಕ್ಷನ್ 54 ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಿದ್ದರು.

ಈ ಆರೋಪ ಅಲ್ಲಗಳೆದಿದ್ದ ಹರಿಯಾಣ ಪೊಲೀಸರು, ಕೌರ್ ಪ್ರಚೋದನಕಾರಿ ಭಾಷಣ ಮಾಡಿದ್ದು, ಅದರಲ್ಲಿ ಪೊಲೀಸರ ಮೇಲೆ ದಾಳಿ ಮಾಡುವ ಕುರಿತು ಮಾತನಾಡಿದ್ದರು ಎಂದು ಹೇಳಿದ್ದರು.
ಜನವರಿ 12ರಂದು ಕೌರ್ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿ ಕಾರ್ಮಿಕರ ಬಾಕಿ ವೇತನ ಪಾವತಿಗೆ ಆಗ್ರಹಿಸಿದ್ದರು. ಅಲ್ಲಿಗೆ ಆಗಮಿಸಿದ್ದ ಪೊಲೀಸರು ಕೌರ್ ಮೇಲೆ ಹಲ್ಲೆ ನಡೆಸಿದ್ದು, ಸ್ಥಳದಲ್ಲಿ ಗಲಭೆ ಏರ್ಪಟ್ಟಿತ್ತು. ನಂತರ ಕೌರ್ ವಿರುದ್ಧ ಕೊಲೆ ಯತ್ನ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ನಡೆಸಿದ ಆರೋಪಗಳಲ್ಲಿ ಹರಿಯಾಣದ ಕರ್ನಲ್ ಕಾರಾಗೃಹದಲ್ಲಿರಿಸಿದ್ದರು.












Click it and Unblock the Notifications