ಪಂಜಾಬಿನಲ್ಲಿ ಬಿಜೆಪಿ ಬಾವುಟ ಹಿಡಿದು ಪ್ರಧಾನಿ ಮೋದಿಗೆ ಧಿಕ್ಕಾರ!
ಚಂಡೀಗಢ, ಜನವರಿ 7: ಪಂಜಾಬ್ಗೆ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ವೈಫಲ್ಯದ ಘಟನೆ ನಡೆದು ಎರಡು ದಿನಗಳೇ ಕಳೆದಿವೆ. ಫಿರೋಜ್ಪುರ ರಾಷ್ಟ್ರೀಯ ಹೆದ್ದಾರಿ ಬಳಿ 20 ನಿಮಿಷ ಪ್ರಧಾನಿ ಕಾರು ಸಿಲುಕಿಕೊಂಡ ಸಂದರ್ಭದಲ್ಲಿ ನಡೆದ ಘಟನೆ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕಳೆದ ಜನವರಿ 5ರಂದು ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿತ್ತು. ಈ ವೇಳೆ ಬಿಜಿಪಿ ಬಾವುಟ ಹಿಡಿದ ಕೆಲವು ಜನರು ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗುತ್ತಾ ಕಾರಿಗೆ ಅಡ್ಡ ಹಾಕಲು ಪ್ರಯತ್ನಿಸಿದ್ದಾರೆ.
ಬಿಜೆಪಿ ಧ್ವಜವನ್ನು ಹಿಡಿದುಕೊಂಡ ಗುಂಪು, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಪ್ರಧಾನಿಯವರ ಕಪ್ಪು ಟೊಯೊಟಾ ಫಾರ್ಚುನರ್ ಕಾರಿನ ಹತ್ತಿರ ನಿಂತು "ಬಿಜೆಪಿ ಜಿಂದಾಬಾದ್" ಎಂದು ಘೋಷಣೆ ಕೂಗುತ್ತಿರುವುದನ್ನು ವೀಡಿಯೋದಲ್ಲಿ ಕಾಣುತ್ತಿದೆ. ವಿಶೇಷ ರಕ್ಷಣಾ ಗುಂಪು (SPG) ಸಿಬ್ಬಂದಿ ಭದ್ರತಾ ಕವಚವನ್ನು ರೂಪಿಸುವುದರ ಮೂಲಕ ಕಾರು ದೂರಕ್ಕೆ ಸಾಗುತ್ತದೆ. ಪ್ರಧಾನಿ ಮೋದಿ ಫಿರೋಜ್ಪುರದಲ್ಲಿ ರ್ಯಾಲಿಗೆ ಚಾಲನೆ ನೀಡುತ್ತಿದ್ದಾಗ ಅವರ ಬೆಂಗಾವಲು ವಾಹನವು ಫ್ಲೈಓವರ್ನ ಮಧ್ಯದಲ್ಲಿ ಸಿಕ್ಕಿಬಿದ್ದಿದ್ದು, ಪ್ರತಿಭಟನಾನಿರತ ರೈತರು ಮಾರ್ಗವನ್ನು ತಡೆದಿದ್ದರು.

ಪ್ರಧಾನಮಂತ್ರಿ ಕಾರಿನ ಬಳಿ ಹೋಗುವ ಯತ್ನ
ಇದೇ ಪ್ರತಿಭಟನಾ ಮೆರವಣಿಗೆಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಸಂಚಾರ ಸ್ಥಗಿತದಿಂದ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಪ್ರಧಾನಿಯವರ ಬೆಂಗಾವಲು ಪಡೆ ಕೂಡ ಮೇಲ್ಸೇತುವೆಯಲ್ಲಿದೆ ಎಂದು ತಿಳಿದಾಗ, ಪ್ರತಿಭಟನಾನಿರತರು ಪ್ರಧಾನಿ ಕಾರಿಗೆ ಹತ್ತಿರವಾಗಲು ಪ್ರಯತ್ನಿಸಿದರು. ಪ್ರಧಾನಮಂತ್ರಿ ಭದ್ರತೆಯಲ್ಲಿ ಭಾರಿ ವೈಫಲ್ಯ ಇರುವುದಕ್ಕೆ ಅಂದು ದೊಡ್ಡ ಸಾಕ್ಷ್ಯ ಸಿಕ್ಕಂತಾಯಿತು.

ಪಂಜಾಬ್ ಚುನಾವಣಾ ಕೆಸರೆರಚಾಟಕ್ಕೆ ಎಡೆ
ಪಂಜಾಬ್ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಘಟನೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರ ನಡುವೆ ರಾಜಕೀಯ ಪ್ರೇರಿತ ವಾಕ್ಸಮರ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ಈ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆಗೆ ಆದೇಶಿಸಿವೆ. ಪ್ರಧಾನಮಂತ್ರಿ ಸಂಚಾರ ಮಾರ್ಗದ ಬಗ್ಗೆ ಮೊದಲೇ ಸೂಚನೆ ನೀಡಿದ್ದರೂ ಸಹ, ರಾಜ್ಯ ಸರ್ಕಾರ ಮತ್ತು ಪೊಲೀಸರು ಭದ್ರತಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಹೆಲಿಕಾಪ್ಟರ್ ಬದಲಿಗೆ ರಸ್ತೆ ಮಾರ್ಗ ಸಂಚಾರ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳ ಕುರಿತು ಕೊನೆಕ್ಷಣದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಪಂಜಾಬ್ ಸರ್ಕಾರ ಆರೋಪಿಸಿದೆ. ವಿಧಾನಸಭೆ ಚುನಾವಣಾ ಪ್ರಚಾರದ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ತೆರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಾಯುಮಾರ್ಗದ ಬದಲಿಗೆ 111 ಕಿಲೋ ಮೀಟರ್ ದೂರದ ದಾರಿಯನ್ನು ರಸ್ತೆ ಮಾರ್ಗದ ಮೂಲಕ ಸಂಚರಿಸಲು ತೀರ್ಮಾನಿಸಲಾಯಿತು ಎಂದು ರಾಜ್ಯ ಸರ್ಕಾರ ಹೇಳಿದೆ.

ನರೇಂದ್ರ ಮೋದಿ ಭದ್ರತಾ ವೈಫಲ್ಯದ ಬಗ್ಗೆ ತನಿಖೆಗೆ ಸಮಿತಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ಗೃಹ ಸಚಿವಾಲಯವು ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ತ್ರಿಸದಸ್ಯ ಸಮಿತಿಯು ಸಂಪುಟ ಸಚಿವಾಲಯದ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ, ಗುಪ್ತಚರ ಬ್ಯೂರೋ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಮತ್ತು ವಿಶೇಷ ರಕ್ಷಣಾ ಗುಂಪಿನ ಇನ್ಸ್ಪೆಕ್ಟರ್ ಜನರಲ್ ಎಸ್ ಸುರೇಶ್ ನೇತೃತ್ವ ವಹಿಸಲಿದ್ದಾರೆ. "ಸಮಿತಿಗೆ ಆದಷ್ಟು ಬೇಗ ವರದಿ ಸಲ್ಲಿಸಲು ಸೂಚಿಸಲಾಗಿದೆ," ಎಂದು MHA ಹೇಳಿಕೆ ತಿಳಿಸಿದೆ. ಈ ಹಿನ್ನೆಲೆ ಶುಕ್ರವಾರ ಫಿರೋಜ್ ಪುರ ಮತ್ತು ಮೊಗಾ ರಾಷ್ಟ್ರೀಯ ಹೆದ್ದಾರಿಗೆ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications