ನವಜೋತ್ ಸಿಂಗ್ ಸಿಧು ರಾಜೀನಾಮೆ ವಾಪಸ್; ಹೈಡ್ರಾಮಕ್ಕೆ ತೆರೆ!
ಚಂಡೀಗಢ್, ಅಕ್ಟೋಬರ್ 15; ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿನ ಗೊಂದಲಗಳಿಗೆ ತೆರೆ ಬಿದ್ದಂತೆ ಕಾಣುತ್ತಿದೆ. ನವಜೋತ್ ಸಿಂಗ್ ಸಿಧು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ವಾಪಸ್ ಪಡೆಯಲಿದ್ದಾರೆ.
ಶುಕ್ರವಾರ ನವದೆಹಲಿಯಲ್ಲಿ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾದರು. ರಾಜ್ಯ ಕಾಂಗ್ರೆಸ್ನಲ್ಲಿನ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದರು. ನವಜೋತ್ ಸಿಂಗ್ ಸಿಧು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಪಕ್ಷದಲ್ಲಿ ಗೊಂದಲಗಳು ಬಗೆಹರಿಯಲಿವೆ.
He (Sidhu) shared his concerns with Rahul Gandhi. We have told him that his concerns will be taken care of here. He assured Rahul Gandhi that he has withdrawn his resignation and he will resume his duties as the PCC president: AICC in charge for Punjab, Harish Rawat pic.twitter.com/aHY168jclZ
— ANI (@ANI) October 15, 2021
ನವದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ ನವಜೋತ್ ಸಿಂಗ್ ಸಿಧು, "ನಾನು ನನ್ನ ಕಾಳಜಿಯನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದೇನೆ. ಎಲ್ಲವೂ ಬಗೆಹರಿಯಲಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ: ನವಜೋತ್ ಸಿಂಗ್
ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಮಾತನಾಡಿ, "ನವಜೋತ್ ಸಿಂಗ್ ಸಿಧು ತಮ್ಮ ಕಾಳಜಿಗಳನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದೇನೆ ಎಂದು ಅವರು ರಾಹುಲ್ ಗಾಂಧಿಗೆ ಭರವಸೆ ನೀಡಿದ್ದಾರೆ" ಎಂದು ಹೇಳಿದರು.
ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಪರ ಎಂದ ಸಿಧು!
ನವಜೋತ್ ಸಿಂಗ್ ಸಿಧು ಈ ವರ್ಷದ ಜುಲೈನಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡಿದ್ದರು. ಬಳಿಕ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೊತೆ ಅಸಮಾಧಾನ ಉಂಟಾಗಿತ್ತು.
ಕಾಂಗ್ರೆಸ್ ಬಿಕ್ಕಟ್ಟು: ಪಂಜಾಬ್ ಮತ್ತು ಛತ್ತೀಸ್ಗಢ ಮಧ್ಯೆ ಒಂದೇ ಒಂದು ಸಾಮ್ಯತೆ!?
ಪಂಜಾಬ್ ಕಾಂಗ್ರೆಸ್ನಲ್ಲಿನ ಬೆಳವಣಿಗೆ ಹೈಕಮಾಂಡ್ ನಾಯಕರಿಗೆ ಸಂಕಷ್ಟ ತಂದಿತ್ತು. ವರಿಷ್ಠರು ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ಪಡೆದಿದ್ದರು. ಪಂಜಾಬ್ನ 16ನೇ ಮುಖ್ಯಮಂತ್ರಿಯಾಗಿ ಚರಣ್ಜಿತ್ ಸಿಂಗ್ ಚನ್ನಿ ಅಧಿಕಾರ ಸ್ವೀಕಾರ ಮಾಡಿದ್ದರು.
ಸೆಪ್ಟೆಂಬರ್ 28ರಂದು ನವಜೋತ್ ಸಿಂಗ್ ಸಿಧು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರವನ್ನು ಬರೆದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು.
ರಾಜೀನಾಮೆ ಪತ್ರದಲ್ಲಿ ಅವರು ಹಲವು ವಿಚಾರದಲ್ಲಿ ರಾಜಿಯಾಗಿದ್ದು, ಇದೇ ಕಾರಣಕ್ಕೆ ವ್ಯಕ್ತಿತ್ವದಲ್ಲಿ ಕುಸಿತ ಉಂಟಾಗುತ್ತಿದೆ. ಪಂಜಾಬ್ ರಾಜ್ಯದ ಭವಿಷ್ಯ ಮತ್ತು ಪಂಜಾಬ್ನ ಕಲ್ಯಾಣದಲ್ಲಿ ಯಾವುದೇ ಕಾರಣಕ್ಕೂ ರಾಜಿ ಯಾಗುವುದಿಲ್ಲ ಎಂದು ಬರೆದಿದ್ದರು.
ಗುರುವಾರ ನವಜೋತ್ ಸಿಂಗ್ ಸಿಧು ಮಾಧ್ಯಮಗಳ ಜೊತೆ ಮಾತನಾಡಿ, "ಪಕ್ಷದ ಅಧ್ಯಕ್ಷರು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಅವರು ಕೈಗೊಳ್ಳುವ ತೀರ್ಮಾನ ಪಂಜಾಬ್ ಒಳಿತಿಗಾಗಿಯೇ ಆಗಿರುತ್ತದೆ" ಎಂದು ಹೇಳಿದ್ದರು.
ನವಜೋತ್ ಸಿಂಗ್ ಸಿಧು ಗುರುವಾರವೇ ದೆಹಲಿಗೆ ತೆರಳಿದ್ದು, ಎಐಸಿಸಿ ಪ್ರಧಾನ ಕಾರ್ಯರ್ಶಿಗಳಾದ ಕೆ. ಸಿ. ವೇಣುಗೋಪಾಲ್, ಹರೀಶ್ ರಾವತ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗಲೇ ರಾಜ್ಯ ಕಾಂಗ್ರೆಸ್ನ ಬಿಕ್ಕಟ್ಟು ಶಮನಗೊಳ್ಳುವ ಸೂಚನೆ ಸಿಕ್ಕಿತ್ತು.
ಸೆಪ್ಟೆಂಬರ್ 28ರಂದು ಸಿಧು ರಾಜೀನಾಮೆ ನೀಡಿದರೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅದನ್ನು ಒಪ್ಪಿರಲಿಲ್ಲ. ಸಿಧು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿರಲೂ ಇಲ್ಲ. ಶುಕ್ರವಾರ ಅವರು ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ.
ಪ್ರಸ್ತುತ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವಿದೆ. 2022ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಕ್ಷದಲ್ಲಿನ ಗೊಂದಲ ಬಗೆಹರಿಸದಿದ್ದರೆ ಚುನಾವಣೆಯಲ್ಲಿ ಕಷ್ಟವಾಗಲಿದೆ ಎಂಬುದು ಹೈಕಮಾಂಡ್ ನಾಯಕರಿಗೂ ತಿಳಿದಿತ್ತು. ಅಂತಿಮವಾಗಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ವರಿಷ್ಠರು ಮುಂದಾಗಿದ್ದಾರೆ.