ಕಾಂಗ್ರೆಸ್ಸಿಗರು ಬೇಕಿದ್ದರೆ 'ಪಪ್ಪು' ಹೆಸರು ಸೇರಿಸಿಕೊಳ್ಳಿ: ಹರಿಯಾಣ ಸಚಿವ ಅಣಕ
ನವದೆಹಲಿ, ಮಾರ್ಚ್ 19: 'ಮೇ ಭೀ ಚೌಕಿದಾರ್' ಆಂದೋಲನವನ್ನು ಬಿಜೆಪಿ ಅಭಿಮಾನಿಗಳು ವ್ಯಾಪಕವಾಗಿ ನಡೆಸುತ್ತಿದ್ದಾರೆ. ಪಕ್ಷದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಪದವನ್ನು ಸೇರಿಸಿಕೊಂಡಿದ್ದಾರೆ. ಬಿಜೆಪಿ ಬೆಂಬಲಿಗರಲ್ಲಿ ಇದು ಖುಷಿ ನೀಡಿದ್ದರೆ, ವಿರೋಧಿಗಳು ಈ ಆಂದೋಲನವನ್ನು ಟೀಕೆಗೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.
'ಚೌಕಿದಾರ್' ಆಂದೋಲನವನ್ನು ಟೀಕಿಸುತ್ತಿರುವ ವಿರೋಧಿಗಳಿಗೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಹರಿಯಾಣ ಸಚಿವ ಅನಿಲ್ ವಿಜ್ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಅವರು, ಬೇಕಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಹೆಸರಿನ ಮುಂದೆ 'ಪಪ್ಪು' ಎಂದು ಸೇರಿಸಿಕೊಳ್ಳಲಿ. ಇದಕ್ಕೆ ಬಿಜೆಪಿಯ ಅಭ್ಯಂತರವೇನೂ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
'ನಾವು ನಮ್ಮ ಹೆಸರಿನ ಮುಂದೆ #ಚೌಕಿದಾರ್ ಎಂಬುದನ್ನು ಸೇರಿಸಿದ್ದೆವು. ಅದರ ಬಗ್ಗೆ ನಿಮಗೆ ಸಮಸ್ಯೆಗಳುಂಟಾಗಿವೆ. ನೀವು ಕೂಡ ನಿಮ್ಮ ಹೆಸರಿನ ಮುಂದೆ #ಪಪ್ಪು ವಿಶೇಷಣವನ್ನು ಸೇರಿಸಿಕೊಳ್ಳಿ. ನಾವು ಆಕ್ಷೇಪವೇನೂ ಮಾಡುವುದಿಲ್ಲ' ಎಂದು ವಿಜ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಇತರೆ ಮುಖಂಡರು, 'ಚೌಕಿದಾರ್ ಚೋರ್ ಹೈ' ಎಂದು ಟೀಕಿಸಿದ್ದಾರೆ.
ಇದನ್ನೇ ಪ್ರಚಾರವನ್ನಾಗಿ ಬಳಸಿಕೊಂಡಿರುವ ಪ್ರಧಾನಿ ಮೋದಿ, 'ಮೈಭೀ ಚೌಕಿದಾರ್' ಎಂಬ ಹೆಸರು ಸೇರಿಸಿಕೊಳ್ಳುವ ಆಂದೋಲನವನ್ನು ಆರಂಭಿಸಿದ್ದರು. ಈ ಆಂದೋಲನ ಆರಂಭವಾದ ಬಳಿಕ ಅಮಿತ್ ಶಾ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಮತ್ತು ಅಭಿಮಾನಿಗಳು ತಮ್ಮ ಹೆಸರಿನ ಮುಂದೆಯೂ ಚೌಕಿದಾರ್ ವಿಶೇಷಣವನ್ನು ಸೇರಿಸಿಕೊಂಡಿದ್ದಾರೆ.












Click it and Unblock the Notifications