ಹೊಸ ಕಾಯ್ದೆ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ
ಚಂಡೀಗಢ, ಮಾರ್ಚ್.02: ಹರಿಯಾಣದ ಕಾರ್ಮಿಕರು ವಲಸೆ ಹೋಗುವುದನ್ನು ತಡೆಯಬೇಕು. ರಾಜ್ಯದ ವಿದ್ಯಾವಂತರಿಗೆ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಮಹತ್ವದ ಕಾಯ್ದೆಯೊಂದಕ್ಕೆ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಮಂಗಳವಾರ ಅನುಮೋದನೆ ನೀಡಿದ್ದಾರೆ.
ಹರಿಯಾಣದ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಹುದ್ದೆಗಳನ್ನು ಮೀಸಲಿರಿಸಿದ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ ಬೆನ್ನಲ್ಲೇ ಮಸೂದೆಯು ಕಾಯ್ದೆಯಾಗಿ ಪರಿವರ್ತನೆಯಾಗಿದೆ ಎಂದು ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ತಿಳಿಸಿದ್ದಾರೆ.
ಸಿಹಿ ಸುದ್ದಿ: ಕನ್ನಡಿಗರಿಗೆ 75% ಉದ್ಯೋಗ ಮೀಸಲಾತಿಗೆ ಶೀಘ್ರದಲ್ಲೇ ಆದೇಶ
ರಾಜ್ಯದ ಸ್ಥಳೀಯ ಯುವಕರ ಪಾಲಿಗೆ ಇಂದು ಮಹತ್ವದ ಮತ್ತು ಸಂತೋಷದಾಯಕ ದಿನವಾಗಿದೆ. ಹರಿಯಾಣದ ಸ್ಥಳೀಯ ಯುವಕರು ಖಾಸಗಿ ವಲಯದಲ್ಲಿ ಶೇ.75ರಷ್ಟು ಮೀಸಲಾತಿ ಪಡೆದುಕೊಂಡಿದ್ದಾರೆ. ಖಾಸಗಿ ಕಂಪನಿಗಳು, ಸೊಸೈಟಿಗಳು ಮತ್ತು ಟ್ರಸ್ಟ್ಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಡಿಸಿಎಂ ದುಷ್ಯಂತ್ ಚೌತಾಲಾ ಹೇಳಿದ್ದಾರೆ.
2020ರಲ್ಲಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ:
ಹರಿಯಾಣದಲ್ಲಿ ಖಾಸಗಿ ವಲಯದ ಕಂಪನಿಗಳಲ್ಲೂ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ರಚಿಸಿದ ಮಸೂದೆಯನ್ನು 2020ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಮಸೂದೆಗೆ ಮಂಗಳವಾರ ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರು ಅಂಕಿತ ಹಾಕುವ ಮೂಲಕ ಅನುಮೋದನೆ ನೀಡಿದ್ದಾರೆ.
ಹರಿಯಾಣ ಚುನಾವಣೆ ವೇಳೆ ಜೆಜೆಪಿ ಆಶ್ವಾಸನೆ:
ಹರಿಯಾಣ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಖಾಸಗಿ ಕಂಪನಿಗಳಲ್ಲೂ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ನೀಡುವುದಾಗಿ ದುಷ್ಯಂತ್ ಚೌತಾಲಾ ಅವರ ನೇತೃತ್ವದ ಜನನಾಯಕ್ ಜನತಾ ಪಕ್ಷವು ಆಶ್ವಾಸನೆ ನೀಡಿತ್ತು. 90 ಸ್ಥಾನಗಳಲ್ಲಿ 10 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ ಜೆಜೆಪಿಯು ಬಿಜೆಪಿ ಜೊತೆಗೆ ಸೇರಿಕೊಂಡು ಮೈತ್ರಿ ಸರ್ಕಾರವನ್ನು ರಚಿಸಿತು. ಇದೀಗ ತನ್ನ ಚುನಾವಣಾ ಆಶ್ವಾಸನೆಗೆ ಸಂಬಂಧಿಸಿದ ಕಾನೂನು ಜಾರಿಗೊಳಿಸಿದೆ.