ಬಿಳಿಗಿರಿರಂಗನ ಬೆಟ್ಟದಲ್ಲಿ ಯೋಗ ಗುರು ಬಾಬಾ ರಾಮದೇವ್
ಚಾಮರಾಜನಗರ, ಜುಲೈ 23: ಪ್ರಸಿದ್ಧ ಯೋಗ ಗುರು, ಪತಂಜಲಿ ಖ್ಯಾತಿಯ ಬಾಬಾರಾಮದೇವ್ ಗಡಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಅಚಾನಕ್ ಭೇಟಿ ನೀಡಿದ್ದ ಅವರು ಬಳಿಕ ಶ್ರೀ ಬಿಳಿಗಿರಿರಂಗನಾಥಸ್ವಾಮಿಯ ದರ್ಶನಪಡೆದು ಕೆಲ ಕಾಲ ಅಲ್ಲಿಯೇ ಸಮಯ ಕಳೆದರು.
ಆ ನಂತರ ವಿವೇಕಾನಂದ ಗಿರಿಜನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಗಿರಿಜನರ ಆರೋಗ್ಯ ಹಾಗೂ ಪರಿಸ್ಥಿತಿ ಅವಲೋಕಿಸಿದರಲ್ಲದೆ ಒಂದಷ್ಟು ಮಾಹಿತಿಯನ್ನು ಪಡೆದುಕೊಂಡರು. ಆದಾದ ಬಳಿಕ ನಿರ್ಮಲಾನಂದಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿ ಮೂರು ಎಕರೆ ಪ್ರದೇಶದಲ್ಲಿ ನಿರ್ಮಿಸಲಿರುವ ಯೋಗ ಹಾಗೂ ಧ್ಯಾನ ಕೇಂದ್ರದ ಜಾಗವನ್ನು ವೀಕ್ಷಿಸಿದರು.

ಇದಾದ ನಂತರ ಅಲ್ಲಿಂದ ಕೆ.ಗುಡಿಯಲ್ಲಿ ಸಫಾರಿಗೆ ತೆರಳಿ ವನ್ಯ ಜೀವಿಗಳ ಸಹಜ ಜೀವನ ಶೈಲಿಯನ್ನು ಅಧ್ಯಯನ ಮಾಡಿದರು. ತದ ನಂತರ ಯಳಂದೂರು ಮಾರ್ಗವಾಗಿ ಬೆಂಗಳೂರಿನ ಕಡೆಗೆ ತೆರಳಿದರು. ಬೆಂಗಾಲು ಪಡೆಯೊಂದಿಗೆ ಬಿಗಿ ಬಂದೋಬಸ್ತ್ನಲ್ಲಿ ಬಂದಿದ್ದರಾದರೂ ಅವರು ಬರುತ್ತಾರೆ ಎಂಬ ಮಾಹಿತಿಯೇ ಇರಲಿಲ್ಲ.

ಆದರೆ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಣಿಸಿಕೊಂಡ ವೇಳೆ ಅಲ್ಲಿದ್ದ ಭಕ್ತರು ಅವರನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು. ಅವರೊಂದಿಗೆ ಒಂದಷ್ಟು ಶಿಷ್ಯರಿದ್ದರು.












Click it and Unblock the Notifications