ಜಪಾನ್ನಿಂದ ಬಂದ ಟೆಕ್ಕಿ ನೋಡಿ ಗಾಬರಿಯಾದ ಯಡಕುರಿಯ ಗ್ರಾಮಸ್ಥರು
ಚಾಮರಾಜನಗರ, ಮಾರ್ಚ್ 19: ಕೊರೊನಾ ಭೀತಿಯಲ್ಲಿದ್ದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಬಳಿಯಿರುವ ಯಡಕುರಿಯದ ಜನ ಮತ್ತಷ್ಟು ಗಾಬರಿಗೊಂಡಿದ್ದಾರೆ. ಇದಕ್ಕೆ ಕಾರಣವಾಗಿರುವುದು ಜಪಾನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಇಲ್ಲಿಗೆ ಮರಳಿರುವುದು.
ಯಡಕುರಿಯ ದ್ವೀಪದ ವಾಸಿ ಯೋಗೇಶ್ ಜಪಾನ್ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೆ ತಂದೆ ತಾಯಿಯನ್ನು ನೋಡಲು ಸ್ವಗ್ರಾಮಕ್ಕೆ ಆಗಮಿಸಿದ್ದರು. ಜಪಾನ್ನಿಂದ ಬಂದಿರುವ ಟೆಕ್ಕಿಯ ಬಗ್ಗೆ ಗ್ರಾಮಸ್ಥರು ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ವೈದ್ಯರ ತಂಡ ಹಾಗೂ ಪೊಲೀಸರು ಯುವಕನ ಮನೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.
ಟೆಕ್ಕಿಯ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತಾಲೂಕು ವೈದ್ಯಾಧಿಕಾರಿ ಗೋಪಾಲ್ ವರದಿ ಬರುವವರೆಗೂ ಹೊರಗೆ ಬಾರದಂತೆ ಟೆಕ್ಕಿಗೆ ಖಡಕ್ ಸೂಚನೆ ನೀಡಿದ್ದಾರೆ.

ಆದರೆ ಟೆಕ್ಕಿಯ ಆಗಮನದಿಂದ ಯಡಕುರಿಯದ ಗ್ರಾಮಸ್ಥರು ಮಾತ್ರ ಆತಂಕಗೊಂಡಿದ್ದು ಆ ಕಡೆ ಸುಳಿಯುತ್ತಿಲ್ಲ. ಸದ್ಯ ಟೆಕ್ಕಿ ಯೋಗೇಶ್ ಮೇಲೆ ತೀವ್ರ ನಿಗಾವಹಿಸಿರುವ ತಾಲೂಕು ಆಡಳಿತ ಮನೆಯಲ್ಲಿಯೇ ನಿಗಾಘಟಕದಲ್ಲಿರಿಸಿದ್ದು, ಪ್ರಯೋಗಾಲಯದಿಂದ ವರದಿಗಾಗಿ ಕಾಯುತ್ತಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕವಷ್ಟೆ ಯೋಗೇಶ್ ಗೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ.












Click it and Unblock the Notifications