ಗುಂಡ್ಲುಪೇಟೆ: ಆಧಾರ್ ತಿದ್ದುಪಡಿಗಾಗಿ ರಾತ್ರಿಯೇ ಸೇವಾ ಕೇಂದ್ರದ ಮುಂದೆ ಠಿಕಾಣಿ ಹೂಡಿದ ಮಹಿಳೆಯರು
ಚಾಮರಾಜನಗರ, ಜುಲೈ, 27: ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ತಿದ್ದುಪಡಿ ಮಾಡಿಸಲು ಸೇವಾಕೇಂದ್ರಗಳ ಮುಂದೆ ಜನಜಾತ್ರೆಯೇ ಸೇರುತ್ತಿದೆ. ಈ ಹಿನ್ನೆಲೆ ಜನಸಂದಣಿಯಿಂದ ತಪ್ಪಿಸಿಕೊಳ್ಳಲು ಕೆಲವರು ರಾತ್ರಿಯೇ ಸೇವಾಕೇಂದ್ರದ ಮುಂದೆ ಮಲಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದಲೂ ನಿತ್ಯ ಸೇವಾಕೇಂದ್ರಕ್ಕೆ ಬಂದರೂ ಟೋಕನ್ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಹಲವರು ತಾಲೂಕು ಕಚೇರಿಗೆ ಬುಧವಾರ ರಾತ್ರಿಯೇ ಬಂದು ಮಲಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಚೆನ್ನಾಜಮ್ಮ, ಸಿದ್ದಮ್ಮ, ನೇನೆಕಟ್ಟೆ ಗ್ರಾಮದ ಮಾಲೇಗೌಡ, ಬೆಟ್ಟಗೌಡನಹುಂಡಿ ಗ್ರಾಮದ ಬೆಳ್ಳಿಬಸವೇಗೌಡ ಎಂಬವವರು ಶಾಲು ಹೊದ್ದು ಬಂದು ಮಲಗಿದ್ದು, ಇಂದು ಬೆಳಗ್ಗೆ ಟೋಕನ್ ಪಡೆಯಲು ಹರಸಾಹಸ ಪಟ್ಟಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ಗೆ ಫೋನ್ ನಂಬರ್, ಪಡಿತರ ಕಾರ್ಡ್ಗಳಲ್ಲಿ ಯಜಮಾನಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬ್ಯಾಂಕ್ ವಿವರ, ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಸೇವಾಕೇಂದ್ರದ ಮುಂದೆ ನಿತ್ಯ ಜನಜಾತ್ರೆಯೇ ಬಂದು ಸೇರುತ್ತಿದೆ. ಟೋಕನ್ಗಾಗಿ ಕೆಲವರು ರಾತ್ರಿಯೇ ಬಂದು ಸೇವಾ ಕೇಂದ್ರದ ಮುಂದೆ ಮಲಗುತ್ತಿದ್ದಾರೆ.
ನಮ್ಮ ಗ್ರಾಮದಿಂದ ಪಟ್ಟಣಕ್ಕೆ ಬೆಳ್ಳಂಬೆಳಗ್ಗೆ ಬಸ್ ಇಲ್ಲ. 8 ಗಂಟೆ ನಂತರ ಬರುವ ಬಸ್ನಲ್ಲಿ ಗುಂಡ್ಲುಪೇಟೆಗೆ ಆಗಮಿಸುವ ವೇಳೆಗೆ ಆಧಾರ್ ಸೇವಾ ಕೇಂದ್ರದ ಮುಂದೆ ನೂರಾರು ಮಂದಿ ಜಮಾಯಿಸಿ ಕ್ಯೂನಲ್ಲಿ ನಿಂತಿರುತ್ತಾರೆ. 4 ದಿನದಿಂದ ನಾವು ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ತಾಲೂಕು ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ರಾತ್ರಿ ಇಲ್ಲಿಯೇ ಮಲಗುತ್ತಿದ್ದೇವೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಅಲ್ಲದೆ ಬೆಳಗ್ಗೆ ಕ್ಯೂನಲ್ಲಿ ಮೊದಲನೆಯವರಾಗಿ ನಿಂತು ಟೋಕನ್ ಪಡೆದುಕೊಂಡು ಆಧಾರ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುತ್ತೇವೆ ಎಂದು ಆಧಾರ್ ಸೇವಾ ಕೇಂದ್ರದ ಬಳಿ ಮಲಗಿದ್ದ ಮಹಿಳೆಯರು ಅಳಲು ತೋಡಿಕೊಂಡರು.












Click it and Unblock the Notifications