ಚಾಮರಾಜನಗರದಲ್ಲಿ ಕಲ್ಲು ಎತ್ತಿಹಾಕಿ ಮಹಿಳೆಯ ಕೊಲೆ
ಚಾಮರಾಜನಗರ, ಸೆಪ್ಟೆಂಬರ್ 1: ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ತಾಲೂಕಿನ ಮುತ್ತಿಗೆ ಗ್ರಾಮದ ಸಮೀಪ ನಡೆದಿದೆ. ಕೊತ್ತಲವಾಡಿ ಗ್ರಾಮದ ಜ್ಯೋತಿ (33) ಕೊಲೆಗೀಡಾದವರು. ಈಕೆಗೆ ಗುರುಸ್ವಾಮಿ ಎಂಬುವರೊಂದಿಗೆ ವಿವಾಹವಾಗಿತ್ತು.
ಕೊಲೆಗೀಡಾದ ಮಹಿಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ತಂಗಿಯ ಮಗಳು ಎಂದು ಗುರುತಿಸಲಾಗಿದೆ. ಮುತ್ತಿಗೆ ಪಾಳ್ಯ ಗ್ರಾಮದ ಸಮೀಪವಿರುವ ಜೋಳದ ಬಯಲಲ್ಲಿ ಶವವು ಬಿದ್ದಿದ್ದು, ದುಷ್ಕರ್ಮಿಗಳು ಮುಖಕ್ಕೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ತಿಂಗಳಾಂತ್ಯಕ್ಕೆ ಹುಬ್ಬಳ್ಳಿಯಲ್ಲಿ ಅಪರಾಧಗಳ ಸರಮಾಲೆ]
ಜಮೀನಿಗೆ ಹೋದ ರೈತ ಸಾವು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ರೈತರೊಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪವಿರುವ ಆನಿವಾಳು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತಿಮ್ಮೇಗೌಡರ ಮಗ ಕರಿಗೌಡ (46) ಸಾವನ್ನಪ್ಪಿದ ದುರ್ದೈವಿ. ತನ್ನ ಜಮೀನಿನಲ್ಲಿ ತಂಬಾಕು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಅಸ್ವಸ್ಥಗೊಂಡಿದ್ದು, ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯವಷ್ಟರಲ್ಲಿ ಮೃತಪಟ್ಟಿದ್ದಾರೆ.[ಗುಂಡ್ಲುಪೇಟೆ ಬೆಟ್ಟಗಳಲ್ಲಿ ಎಗ್ಗಿಲ್ಲದ ಯಕ್ಕಾ, ರಾಜ, ರಾಣಿ ಆಟ!]
ಮೃತ ಕರಿಗೌಡರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಗೆ ಒಂದೂವರೆ ಎಕರೆಯಷ್ಟು ಕೃಷಿ ಜಮೀನಿದ್ದು, ಪಿರಿಯಾಪಟ್ಟಣದ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಎರಡೂವರೆ ಲಕ್ಷ ರು. ಸಾಲ ಮಾಡಿದ್ದರು. ಈ ಬಗ್ಗೆ ಮೃತರ ಪತ್ನಿ ಪ್ರೇಮ ಬೆಟ್ಟದಪುರ ಪೊಲೀಸರಿಗೆ ದೂರು ನೀಡಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ನಂತರ ವಾರಸುದಾರರಿಗೆ ಶವವನ್ನು ಹಸ್ತಾಂತರಿಸಲಾಯಿತು.[ಕೋಟಿಯ ಆಸೆಗೆ ಲಕ್ಷ ಕಳೆದುಕೊಂಡ ಉಪ್ಪಿನಂಗಡಿ ವ್ಯಾಪಾರಿ]
ಬಾಲಕಾರ್ಮಿಕ ಪತ್ತೆ: ಟಿಬೆಟಿಯನ್ ರೆಸ್ಟೋರೆಂಟ್ ನಲ್ಲಿ ಬಾಲಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿರುವ ಮುಮ್ಮಸ್ ಹಾಟ್ ದಿ ಲೇಖ್ ರೆಸ್ಟೋರೆಂಟ್ ನಲ್ಲಿ ಬಿಹಾರ ಮೂಲದ ಸಂಜಯ್ ಎಂಬುವರ ಮಗ ಕೆಲಸ ಮಾಡುತ್ತಿದ್ದ. ಕಾರ್ಮಿಕ ಇಲಾಖೆಯ ನಿರೀಕ್ಷಕ ಕೆ.ಪಿ.ವರುಣ್ ಕುಮಾರ್ ಮಾತನಾಡಿ, ಸೂರಜ್ ನನ್ನು 7 ದಿನಗಳ ಹಿಂದೆ ಈತನ ಚಿಕ್ಕಪ್ಪ ರೆಸ್ಟೋರೆಂಟ್ ನಲ್ಲಿ ಸೇರಿಸಿ ಹೋಗಿದ್ದಾರೆ ಎಂದಿದ್ದಾರೆ.[ಬಾಲಕನ ಮೇಲೆ ಅತ್ಯಾಚಾರ: ಮಹಿಳೆ ವಿರುದ್ಧ ಪೋಕ್ಸೋ ಕೇಸು]
ಮುಂದಿನ 2 ದಿನಗಳಲ್ಲಿ ಬಾಲಕನ ಚಿಕ್ಕಪ್ಪ ಬರಲಿದ್ದು, ಆತನನ್ನು ಪತ್ತೆ ಹಚ್ಚಿ ಬಾಲಕನ ಬಗ್ಗೆ ವಿವರ ಪಡೆಯಲಾಗುವುದು. ಆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವೊಂದರಲ್ಲಿ ಉಳಿಸಲಾಗಿದೆ. ವಿವರ ಪಡೆದ ನಂತರ ಬಾಲಕನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.












Click it and Unblock the Notifications