ಚಾಮರಾಜನಗರ; ಊರೂರು ಸುತ್ತುತ್ತಿದೆ ಒಂಟಿ ಸಲಗ, ಜನರಿಗೆ ಭೀತಿ
ಚಾಮರಾಜನಗರ,ಜೂ 25: ಕಳೆದ ಮೂರು ದಿನಗಳ ಹಿಂದೆ ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ನಿತ್ಯ ಒಂದಲ್ಲ ಒಂದೂರಿಗೆ ಲಗ್ಗೆ ಇಟ್ಟು ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಚಾಮರಾಮನಗರ ಸಮೀಪದ ದೊಡ್ಡಕೆರೆ, ಬೂದಿತಿಟ್ಟದಲ್ಲಿ ಕಾಣಿಸಿಕೊಂಡು ಜಮೀನುಗಳಲ್ಲಿ ಓಡಾಡಿದ್ದ ಕಾಡಾನೆ ಬಳಿಕ ಸಿಮ್ಸ್ನ ಎಡಬೆಟ್ಟದ ಹಿಂಭಾಗ ಕಾಣಿಸಿಕೊಂಡಿತ್ತು. ಶುಕ್ರವಾರ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮಾರುಕಟ್ಟೆ ಸಮೀಪದ ತೆಂಗಿನಕೆರೆ ಹತ್ತಿರ ಇಡಿ ದಿನ ಬೀಡು ಬಿಟ್ಟಿತ್ತು.
ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಕಾಡಾನೆಯು ಕಳೆದ ಮೂರು ದಿನದಿಂದ ದಾರಿತಪ್ಪಿ ತೆರಕಣಾಂಬಿ ಪಶ್ಚಿಮದ ಕೆರೆಯಂಗಳದಲ್ಲಿ ನೀರಿನಿಂದ ಆಚೆ ಆನೆ ಬೀಡು ಬಿಟ್ಟಿದ್ದು, ಮೇವು, ನೀರಿನ ಲಭ್ಯತೆ ಜನರ ಗಲಾಟೆ ಹಿನ್ನೆಲೆಯಲ್ಲಿ ಸಲಗ ಅಲ್ಲಲ್ಲೇ ಓಡಾಡಿಕೊಂಡಿತ್ತು.

ಬಳ್ಳಾರಿ ಜಾಲಿ ನಡುವೆ ಸಣ್ಣ ಕಾಲು ದಾರಿಯಲ್ಲಿ ಕೆರೆಯ ಪಶ್ಚಿಮ ಭಾಗಕ್ಕೆ ಹೋಗಲು ಮಾತ್ರ ಸ್ಥಳವಕಾಶ ಇತ್ತು. ಅಲ್ಲದೇ ಕೆರೆಯ ಸುತ್ತಲೂ ಬೆಳಗಿನಿಂದ ಸಂಜೆ ತನಕ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದ ಕಾರಣ ಆನೆಯನ್ನು ಕಾಡಿಗಟ್ಟುವ ಕಾರ್ಯ ಸಾಧ್ಯವಾಗಲಿಲ್ಲ.
80 ಮಂದಿ ಕಾರ್ಯಾಚರಣೆ; ಗುಂಡ್ಲುಪೇಟೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಡಾ. ಲೋಕೇಶ್, ಎನ್. ಪಿ. ನವೀನ್ ಕುಮಾರ್ ಇತರೆ ಅಧಿಕಾರಿಗಳು, ನೌಕರರು, ವಿಶೇಷ ಹುಲಿ ಸಂರಕ್ಷಣಾ ದಳದ 80 ರಷ್ಟು ಮಂದಿ ಸ್ಥಳದಲ್ಲೇ ಬೀಡುಬಿಟ್ಟು ವೆಂಕಟರಮಣಸ್ವಾಮಿ ದೇವಾಲಯ ಸಂರಕ್ಷಿತ ಅರಣ್ಯದ ಮೂಲಕ ಹತ್ತಿರವಿರುವ ಕುಂದಕೆರೆ ಅರಣ್ಯ ವಲಯಕ್ಕೆ ಕಾಡಾನೆ ಹೋಗುವಂತೆ ಮಾಡಲು ಯೋಜನೆ ರೂಪಿಸಿದ್ದರು.

ಆದರೆ ಶನಿವಾರ ಬೆಳಗ್ಗೆ ತೆರಕಣಾಂಬಿ ಕೆರೆಯಂಗಳದಿಂದಲೂ ಆನೆ ಪರಾರಿಯಾಗಿ ವೀರನಪುರ ಸಮೀಪಕ್ಕೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸದ್ಯ, ವೀರನಪುರದಲ್ಲಿ ಆನೆ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ತೆರಳಿದ್ದಾರೆ. ಆನೆ ಸಂಚಾರದಿಂದ ಜನರು ಆತಂಕಗೊಂಡಿದ್ದಾರೆ.











Click it and Unblock the Notifications