ಕಾವೇರಿ ರಭಸಕ್ಕೆ ಕೊಚ್ಚಿಹೋದ ಭರಚುಕ್ಕಿ ಬಳಿಯ ವೆಸ್ಲಿ ಸೇತುವೆ
ಚಾಮರಾಜನಗರ, ಜುಲೈ 16 : ಕಾವೇರಿ ಧುಮ್ಮಿಕ್ಕಿ ಹರಿದ ಪರಿಣಾಮ ನೀರಿನ ರಭಸಕ್ಕೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಬಳಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ವೆಸ್ಲೀ ಸೇತುವೆ ಕೊಚ್ಚಿ ಹೋಗಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ಭರಚುಕ್ಕಿಗೆ ತೆರಳುವ ಮಾರ್ಗ ಮಧ್ಯೆ ಸುಮಾರು ಎರಡು ಶತಮಾನದ ಹಿಂದೆ ಕಲ್ಲುಕಂಬದಿಂದ ವೆಸ್ಲೀ ಸೇತುವೆಯನ್ನು ನಿರ್ಮಿಸಲಾಗಿತ್ತು. ಈ ಸೇತುವೆ ಮೇಲೆ ಸಾರ್ವಜನಿಕರು, ಪ್ರವಾಸಿಗರು ನಡೆದುಕೊಂಡು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಇದು ಶಿಥಿಲಾವಸ್ಥೆಯಲ್ಲಿತ್ತು.
45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!
ಈ ನಡುವೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಕಾವೇರಿ ಧುಮ್ಮಿಕ್ಕಿ ಹರಿದ ಪರಿಣಾಮ ನೀರಿನ ರಭಸಕ್ಕೆ ಸೇತುವೆಗೆ ಹಾನಿಯಾಗುವ ಲಕ್ಷಣ ಕಂಡು ಬಂದಿದ್ದರಿಂದ ಸೇತುವೆ ಮೇಲೆ ಅಡ್ಡಾಡುವುದಕ್ಕೆ ನಿರ್ಬಂಧ ಹೇರಲಾಗಿತ್ತು.
ಸೋಮವಾರ ಸಂಜೆ ಕಾವೇರಿ ಮತ್ತು ಕಬಿನಿ ನದಿಯಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ಶಿಥಿಲವಾಗಿದ್ದ ವೆಸ್ಲೀ ಸೇತುವೆ ನೀರಿನ ರಭಸಕ್ಕೆ ಕುಸಿದು ಕೊಚ್ಚಿಹೋಗಿದೆ. ಶತಮಾನದಷ್ಟು ಹಳೆಯದಾದ ಸೇತುವೆ ಇತಿಹಾಸದ ಪುಟ ಸೇರಿದೆ.
ಜುಲೈನಲ್ಲಿಯೇ ಕರ್ನಾಟಕದ ಜಲಾಶಯಗಳು ಭರ್ತಿ
ಹಾಗೆ ನೋಡಿದರೆ ಈ ವೆಸ್ಲೀ ಸೇತುವೆ ಮೇಲೆ ನೂರಾರು ಮಂದಿ ಪ್ರವಾಸಿಗರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು, ಅಲ್ಲದೆ ಹಲವಾರು ಚಲನಚಿತ್ರಗಳಲ್ಲಿ ಸೇತುವೆಯನ್ನು ಚಿತ್ರೀಕರಣ ಮಾಡಿದ್ದು ಇದೀಗ ಸೇತುವೆ ಕೇವಲ ನೆನಪಾಗಿದೆ.
ಈ ನಡುವೆ ವೆಸ್ಲೀ ಸೇತುವೆ ಬಳಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರಿಂದ ಪ್ರವಾಸಿಗರು ಅಲ್ಲಿಗೆ ತೆರಳದ ಕಾರಣದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.