ಬಂಡೀಪುರದಲ್ಲಿ ರೈಲ್ವೆ ಕಂಬಿ ಹತ್ತಲು ಕಾಡಾನೆ ಸರ್ಕಸ್!
ಚಾಮರಾಜನಗರ, ನವೆಂಬರ್ 21: ಒಂದೆರಡು ವರ್ಷಗಳ ಹಿಂದೆ ಬರದಿಂದಾಗಿ ನೀರು ಮತ್ತು ಆಹಾರ ಅರಸುತ್ತಾ ನಾಡಿನತ್ತ ಮುಖ ಮಾಡಿದ್ದ ಕಾಡಾನೆಗಳು ಇದೀಗ ಮಳೆಯಾಗಿ ಅರಣ್ಯದಲ್ಲಿ ಮೇವಿಗೆ ಕೊರತೆಯಿಲ್ಲದಿದ್ದರೂ ನಾಡಿನತ್ತ ಬರಲು ಹವಣಿಸುತ್ತಿರುವುದು ಸಾಮಾನ್ಯವಾಗಿದೆ. ಇದಕ್ಕೆ ಬಂಡೀಪುರದ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಅರಣ್ಯದಂಚಿನಲ್ಲಿ ಕಾಡಾನೆಯೊಂದು ರೈಲ್ವೆ ಕಂಬಿಯನ್ನೇ ಹತ್ತಲು ಯತ್ನಿಸಿರುವ ದೃಶ್ಯ ನಿದರ್ಶನವಾಗಿದೆ.
Recommended Video
ಕೆಲವೆಡೆ ರೈತರ ಜಮೀನಿಗೆ ಈಗಾಗಲೇ ಕಾಡಾನೆಗಳು ಲಗ್ಗೆಯಿಟ್ಟು ಫಸಲನ್ನು ತಿಂದು ತುಳಿದು ನಾಶಪಡಿಸಿವೆ. ಜತೆಗೆ ಫಸಲಿನ ರುಚಿ ನೋಡಿರುವ ಅವು ಆಗಿಂದಾಗ್ಗೆ ರೈತರ ಜಮೀನಿನತ್ತ ಮುಖ ಮಾಡುತ್ತಲೂ ಇವೆ. ಬಂಡೀಪುರದ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ತಡೆಗಟ್ಟುವ ಸಲುವಾಗಿ ಅರಣ್ಯ ಇಲಾಖೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಂದಕ ನಿರ್ಮಿಸಿ ಸೋಲಾರ್ ಬೇಲಿಗಳನ್ನು ಅಳವಡಿಸಿದ್ದರೂ ನಿರ್ವಹಣೆ ಕೊರತೆಯಿಂದ ಕಾಡಾನೆಗಳು ಕಾಡಿನಿಂದ ನಾಡಿಗೆ ಬರುವುದು ತಪ್ಪಿಲ್ಲ.
ಸೌದೆ ಕಡಿಯಲು ಕಾಡಿಗೆ ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ
ಕೆಲವೆಡೆ ರೈಲ್ವೆ ಕಂಬಿಗಳನ್ನು ಅಡ್ಡಲಾಗಿ ಅಳವಡಿಸಲಾಗಿದೆ. ಈ ಕಂಬಿಗಳನ್ನು ದಾಟಿ ಬರಲು ಸಾಧ್ಯವಾಗದೆ ಕೆಲವು ಕಾಡಾನೆಗಳು ಅಲ್ಲಿಯೇ ಬೀಡು ಬಿಟ್ಟು ಹೇಗಾದರೂ ಮಾಡಿ ಹೊರ ದಾಟಲೇಬೇಕೆಂದು ಶತ ಪ್ರಯತ್ನಿಸುತ್ತಿವೆ.
ಅದರಲ್ಲೂ ಓಂಕಾರ ವಲಯ ವ್ಯಾಪ್ತಿಯ ಹೊಸಪುರ ಶ್ರೀಕಂಠಪುರ ಸಮೀಪದಲ್ಲಿ ಪ್ರತಿನಿತ್ಯ ಕಾಡಾನೆಗಳು ರೈಲ್ವೆ ಕಂಬಿಯನ್ನು ನುಸುಳಿ ಹೊರ ಬರಲು ವ್ಯರ್ಥ ಪ್ರಯತ್ನ ನಡೆಸುತ್ತಲೇ ಇದ್ದು, ಈ ಪೈಕಿ ಗಂಡಾನೆಯೊಂದು ರೈಲ್ವೆ ಕಂಬಿ ಹತ್ತಿ ದಾಟಲು ಯತ್ನಿಸಿರುವ ದೃಶ್ಯ ಇದೀಗ ವೈರಲ್ ಆಗಿದೆ. ಹೇಗಾದರು ಮಾಡಿ ಅಡ್ಡಲಾಗಿರುವ ರೈಲ್ವೆ ಕಂಬಿ ದಾಟಿ ಹೋಗಲೇ ಬೇಕೆಂದು ಪಣತೊಟ್ಟ ಕಾಡಾನೆ ದಾಟಲು ಕಸರತ್ತು ಮಾಡುತ್ತಿದ್ದ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಸೆರೆಹಿಡಿದ್ದಾರೆ.