ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ: ಮಾನವೀಯತೆ ಆಧಾರದಲ್ಲಿ ಜಾಮೀನು
ಚಾಮರಾಜನಗರ, ಡಿಸೆಂಬರ್ 20: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಮಂಗಳವಾರ ಬೆಳಗ್ಗೆ ಮೈಸೂರಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜ್ಞಾನಪ್ರಕಾಶ್(68) ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಕಾಡುಗಳ್ಳನ ಮುಖ್ಯ ಸಹಚರಾರಾಗಿದ್ದರು. ಭಯಾನಕ ಎನಿಸುವ 'ಪಾಲಾರ್ ಬಾಂಬ್ ಸ್ಫೋಟ' ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಜ್ಞಾನಪ್ರಕಾಶ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ, ಸುಪ್ರೀಂ ಕೋರ್ಟ್ 2014ರಲ್ಲಿ ಗಲ್ಲು ಶಿಕ್ಷೆ ಬದಲಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಹುಲಗಿನ ವೆಂಕಟರಮಣ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚಿರತೆ ಪ್ರತ್ಯಕ್ಷ
68 ವರ್ಷದ ಜ್ಞಾನಪ್ರಕಾಶ್ 29 ವರ್ಷಗಳಿಂದ ಜೈಲಿನಲ್ಲೇ ಇದ್ದು, ಕಳೆದ ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ಆಧಾರದ ಮೇಲೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಬಿಡುಗಡೆಗೆ ಅನುಮತಿಸಿತ್ತು. ಮಂಗಳವಾರ ಬೆಳಗ್ಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಜ್ಞಾನಪ್ರಕಾಶ್ ಕುಟುಂಬ ಸೇರಿಕೊಂಡಿದ್ದಾರೆ.
ತಮ್ಮ ಜೈಲಿನ ವಸ್ತುಗಳು ಹಾಗೂ ಹಲಸಿನ ಗಿಡದ ಸಸಿಯೊಂದಿಗೆ ಜೈಲಿನಿಂದ ಹೊರ ಬಂದ ಜ್ಞಾನಪ್ರಕಾಶ್ ಅವರನ್ನು ನೋಡಿ ಕುಟುಂಬಸ್ಥರು ಭಾವುಕರಾದರು.
ಜ್ಞಾನಪ್ರಕಾಶ್ ಯಾರು..? ಆತನ ಹಿನ್ನೆಲೆ ಏನು..?
ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿರುವ ಜ್ಞಾನಪ್ರಕಾಶ್, 1993ರಲ್ಲಿ ನಡೆದ ಪಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್ ಹಾಗೂ ಮಾದಯ್ಯ ಜೊತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯವು 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ, ಸುಪ್ರೀಂ ಕೋರ್ಟ್ 2014ರಲ್ಲಿ ಗಲ್ಲು ಶಿಕ್ಷೆ ಬದಲಿಸಿ ಜೀವಾವಧಿ ಶಿಕ್ಷೆ ನೀಡಿತ್ತು.
ಪ್ರಕರಣದಲ್ಲಿ ಭಾಗಿಯಾಗಿದ್ದ ವೀರಪ್ಪನ್ 2004 ರಲ್ಲಿ ಎನ್ಕೌಂಟರ್ನಲ್ಲಿ ಮೃತಪಟ್ಟರೆ, ಶಿಕ್ಷೆ ಅನುಭವಿಸುತ್ತಿದ್ದ ಸೈಮನ್, ಬಿಲವೇಂದ್ರನ್ ಜೈಲಿನಲ್ಲಿ ಮೃತಪಟ್ಟಿದ್ದಾರೆ. ಇನ್ನು ಜ್ಞಾನಪ್ರಕಾಶ್ ಜೊತೆ ಮಾದಯ್ಯ ಕೂಡ ಶಿಕ್ಷೆ ಅನುಭವಿಸುತ್ತಿದ್ದರು.
ಶ್ವಾಸಕೋಸ ಕ್ಯಾನ್ಸರ್ನಿಂದ ಬಳಲುತ್ತಿದ್ದ ಜ್ಞಾನಪ್ರಕಾಶ್ಗೆ ಜಾಮೀನು ನೀಡುವಂತೆ ವಿಕ್ರಂ ಹಾಗೂ ಭಾರತಿ ಎನ್ನುವವರು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಸದ್ಯ ಜ್ಞಾನಪ್ರಕಾಶ್ಗೆ ಜಾಮೀನು ಸಿಕ್ಕಿದ್ದು, ಕೊನೆಯ ದಿನಗಳಲ್ಲಿ ಕುಟುಂಬಸ್ಥರೊಡನೆ ಸಮಯ ಕಳೆಯಲು ಹಾಗೂ ಚಿಕಿತ್ಸೆಗಾಗಿ ಕೋರ್ಟ್ ಅನುಮತಿ ನೀಡಿದೆ ಎಂದು ಭಾವುಕರಾದರು.