ದೇವರ ಹೆಸರಲ್ಲಿ ಚಿಲ್ಲರೆ ರಾಜಕೀಯ ಮಾಡಿದವರು ಹೆಚ್ಚು ಕಾಲ ಉಳಿಯಲ್ಲ: ಸೋಮಣ್ಣ ಹೀಗೆ ಹೇಳಿದ್ದು ಯಾರಿಗೆ?
ಚಾಮರಾಜನಗರ, ಮಾರ್ಚ್, 26: ತಮ್ಮ ಊರಿನ ದೇಗುಲಕ್ಕೆ ರಥ ನಿರ್ಮಾಣ ಹಾಗೂ ಜೀರ್ಣೋದ್ಧಾರ ಮಾಡದಿದ್ದರೇ "ಗೋ ಬ್ಯಾಕ್ ಸೋಮಣ್ಣ" ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದ ಚಾಮರಾಜನಗರ ತಾಲೂಕಿನ ಚನ್ನಪ್ಪನಪುರ, ಅಮಚವಾಡಿ ಗ್ರಾಮಸ್ಥರೊಂದಿಗೆ ಇಂದು (ಮಾರ್ಚ್ 26) ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸಭೆ ನಡೆಸಿದರು.
ಸಭೆ ಆರಂಭದಿಂದಲೇ ಸಚಿವ ವಿ.ಸೊಮಣ್ಣನವರು ವಿಜಯೇಂದ್ರ ಆಪ್ತ ಹಾಗೂ ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ರುದ್ರೇಶ್ ಹೆಸರೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆದರು. "ಬೆಂಗಳೂರಿನಿಂದ ಬಂದವರು ಬೋರ್ಡ್ ತಂದು ಕೊಟ್ಟರೂ ನೀವು ಹಿಡಿದುಕೊಂಡಿದ್ದೀರಿ. ಆದರೆ ಸುಳ್ಳುಗಾರ ಸೋಮಣ್ಣ ಎಂದು ಹೇಳಲು ನಿಮಗೆ ಮನಸಾದರೂ ಹೇಗೆ ಬಂತು. ಕೆಲ ಕಳ್ ನನ್ನ ಮಕ್ಕಳು, ತರ್ಲೆಗಳು ಮಾತು ಕಟ್ಟಿಕೊಂಡು ನನಗೆ ಉಗಿದಿದ್ದೀರಿ," ಎಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು.

ದೇವರ ಹೆಸರಿನಲ್ಲಿ ಚಿಲ್ಲರೆ ರಾಜಕೀಯ ಮಾಡಬಾರದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರು ಹೆಚ್ಚು ದಿನ ಉಳಿಯುವುದಿಲ್ಲ. 45 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ಇಷ್ಟು ಅವಮಾನ ಆಗಿರಲಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ 400 ವರ್ಷ ಪುರಾತನವಾದ ವೀರಭದ್ರೇಶ್ವರ ಸ್ವಾಮಿ ದೇಗುಲವಿದೆ. ಈ ಐತಿಹಾಸಿಕ ದೇವಾಲಯ ಶಿಥಿಲಗೊಂಡಿದ್ದು ರಥವೂ ಕೂಡ ಹಾಳಾಗಿದೆ. ಗ್ರಾಮಕ್ಕೆ ಸಚಿವ ಸೋಮಣ್ಣ ಬಂದಿದ್ದ ವೇಳೆ ದೇಗುಲ ಜೀರ್ಣೋದ್ಧಾರ ಮಾಡಲು ಕ್ರಮ ವಹಿಸುತ್ತೇನೆ. ಜೊತೆಗೆ ರಥ ಮಾಡಿಸಿಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು.

ಅಸಮಾಧಾನ ವ್ಯಕ್ತಪಡಿಸಿದ ಸೋಮಣ್ಣ
ಆದರೆ, ಸುತ್ತಮುತ್ತಲಿನ ಗ್ರಾಮದ ಒಟ್ಟು 24 ಕೋಮುಗಳ ಮುಖಂಡರು ಸೋಮಣ್ಣ ಅವರನ್ನು ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವೇಳೆ ಅಸೌಜನ್ಯದಿಂದ ನಡೆದುಕೊಂಡು ತಿರಸ್ಕಾರದಿಂದ ಕಂಡರು ಎಂಬುದು ಗ್ರಾಮಸ್ಥರ ಆಕ್ರೋಶವಾಗಿತ್ತು. ಇದರಿಂದಾಗಿ ಗೋ ಬ್ಯಾಕ್ ಸೋಮಣ್ಣ ಎಂದು ಚಳವಳಿ ನಡೆಸಲಾಗುವುದು ಎಂದು ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಸೋಮಣ್ಣ ಇಂದು ಗ್ರಾಮಸ್ಥರ ಸಭೆ ನಡೆಸಿ ತಮ್ಮ ನೋವು ತೋಡಿಕೊಳ್ಳುವುದಲ್ಲದೆ, ವಿರೋಧಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದರು
ಫಲಾನುಭವಿಗಳ ಸಮಾವೇಶ ನಡೆಸಿದ ಸೋಮಣ್ಣ
ಹಳೇ ಮೈಸೂರು ಭಾಗದ ಚುನಾವಣಾ ಉಸ್ತುವಾರಿ ಪಡೆದಿರುವ ವಸತಿ ಸಚಿವ ಸೋಮಣ್ಣ ಮತಬೇಟೆ ಅಖಾಡಕ್ಕೆ ಇಳಿದಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಿದರು.
ಗುಂಡ್ಲುಪೇಟೆ ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಫಲಾನುಭವಿಗಳ ಸಮಾವೇಶ ಆಯೋಜನೆ ಮಾಡಲಾಗಿದ್ದು, ಜಿಲ್ಲಾದ್ಯಂತ ಆಯ್ಕೆಯಾಗಿದ್ಧ ಫಲಾನುಭವಿಗಳಿಗೆ ವಾಹನಗಳು ಸೇರಿದಂತೆ ಇತರೆ ಸಾಧನ ಸಲಕರಣೆಗಳನ್ನು ಸೋಮಣ್ಣ ವಿತರಣೆ ಮಾಡಿದರು.
ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಜನರ ಜೀವನವನ್ನು ಮೇಲ್ಪಂಕ್ತಿಗೆ ತೆಗೆದುಕೊಂಡು ಹೋಗಲು ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಈ ಮೂಲಕ ಯೋಜನೆಯ ಹಣ ಸೋರಿಕೆಯಾಗದೇ ಸಂಪೂರ್ಣವಾಗಿ ಜನರಿಗೆ ತಲುಪುತ್ತಿದೆ ಎಂದರು.
ಇನ್ನು, ಶಾಸಕ ಎನ್.ಮಹೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 90ರ ದಶಕದವರೆಗೆ ಪುರುಷ ಪ್ರಧಾನ ಯೋಜನೆಗಳನ್ನು ಹಾಕಿಕೊಂಡಿದ್ದವು. ಆದರೆ ಈಗ ಮೋದಿ ಸರ್ಕಾರ ಮಹಿಳಾ ಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕರ್ನಾಟಕ ಸರ್ಕಾರ ವಿವಿಧ 68 ಹೊಸ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದು, ಅದನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಒಟ್ಟಿನಲ್ಲಿ ಸಚಿವ ವಿ.ಸೋಮಣ್ಣ ಹಾಗೂ ಬಿಜೆಪಿ ಶಾಸಕರು ಫಲಾನುಭವಿಗಳ ಸಮಾವೇಶದ ಮೂಲಕ ಮತಬೇಟೆ ಆರಂಭಿಸಿದ್ದು, ಇದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications