ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಪುತ್ಥಳಿ ಅನಾವರಣ
ಚಾಮರಾಜನಗರ, ಸೆಪ್ಟೆಂಬರ್, 12:ಒಳ್ಳೆಯ ತನ ಮಾತ್ರ ಶಾಶ್ವತ ಎಂಬುದಕ್ಕೆ ಗೋಪಿನಾಥಂ ಸಾಕ್ಷಿ ಆಗಿದೆ. ಕಾಡನ್ನು ಕಡಿದು, ಜನರನ್ನು ಕೊಂದಿದ್ದ ವ್ಯಕ್ತಿ ನಾಶವಾಗುತ್ತಿದ್ದರೆ, ಮತ್ತೊಂದೆಡೆ ಜನರ ಕಲ್ಯಾಣಕ್ಕೆ ದುಡಿದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರು ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಹನೂರು ತಾಲೂಕಿನ ಕಾಡುಗಳ್ಳ, ದಂತಚೋರ ವೀರಪ್ಪನ್ ಹುಟ್ಟೂರಾದ ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ಅನಾವರಣಗೊಂಡಿದೆ. ಗೋಪಿನಾಥಂ ಗ್ರಾಮದ ಜನರು ವೀರಪ್ಪನ್ ವಂಚನೆಯಿಂದ ಬಲಿಯಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.
ಪಿ.ಶ್ರೀನಿವಾಸ್ ಅವರೇ ಮಾರಿಯಮ್ಮ ದೇವಾಲಯವನ್ನು ದೇಗುಲವನ್ನು ಕಟ್ಟಿಸಿದ್ದು, ಅವರ ಸಾವಿನ ಬಳಿಕ ದೇವಾಲಯದಲ್ಲಿ ಶ್ರೀನಿವಾಸ್ ಅವರಿಗೇ ಮೊದಲ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಚಾಮರಾಜನಗರ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್ ಗೋಪಿನಾಥಂಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರೂಪಾಯಿ ನೀಡಲು ಬಂದಿದ್ದರು. ಆಗ ಗ್ರಾಮಸ್ಥರು ನಮಗೆ ಹಣ ಬೇಡ, ಡಿಎಫ್ಒ ಪಿ.ಶ್ರೀನಿವಾಸ್ ಅವರ ಪುತ್ಥಳಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಚಾಮರಾಜನಗರ: ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯದಲ್ಲಿ ಅದ್ದೂರಿ ಗೌರಿ ಹಬ್ಬ
ಪಿ.ಶ್ರೀನಿವಾಸ್ ಅವರ ಪುತ್ಥಳಿ ನಿರ್ಮಾಣಕ್ಕೆ ಪಟ್ಟು
ಗ್ರಾಮಸ್ಥರ ಒತ್ತಾಯದಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಪಿ.ಶ್ರೀನಿವಾಸ್ ಅವರ ಪ್ರತಿಮೆ ನಿರ್ಮಿಸಲು ಒಪ್ಪಿದ್ದಾರೆ. ನಂತರ ಪಿ.ಶ್ರೀನಿವಾಸ್ ಅವರ ಎರಡು ಅಡಿಯ ಕಂಚಿನ ಪುತ್ಥಳಿಯನ್ನು ಅವರು ಮಾಡಿಸಿಕೊಟ್ಟಿದ್ದಾರೆ. ದೇಗುಲ ಮುಂಭಾಗದಲ್ಲಿ ಮಂಟಪ ನಿರ್ಮಿಸಿ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ ಸೆಪ್ಟೆಂಬರ್ 12 , 1954 ರಲ್ಲಿ ಪಿ.ಶ್ರೀನಿವಾಸ್ ಅವರು ಜನಿಸಿದರು. ವೀರಪ್ಪನ್ ಸೆರೆ ಸಲುವಾಗಿ ಕಾರ್ಯಾಚರಣೆಗೆ ನೇಮಕಗೊಂಡಿದ್ದರು.
ಶರಣಾಗತಿ ನಾಟಕವಾಡಿ ತಪ್ಪಿಸಿಕೊಂಡಿದ್ದ ವೀರಪ್ಪನ್
ವೀರಪ್ಪನ್ ನನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆ ತರುತ್ತೇನೆಂಬ ನಂಬಿಕೆಯಿಂದ ಕಾರ್ಯಾಚರಣೆಯಲ್ಲಿ ದಕ್ಷತೆ ಮೆರೆದಿದ್ದರು. 1980ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿ ವೀರಪ್ಪನ್ ನನ್ನು ಬಂಧಿಸಿದ್ದ ಪೊಲೀಸರು, ಅರಣ್ಯಾಧಿಕಾರಿ ಆಗಿದ್ದ ಪಿ.ಶ್ರೀನಿವಾಸ್ಗೆ ಒಪ್ಪಿಸಿದ್ದರು. ವೀರಪ್ಪನ್ಗೆ ಚಾಮರಾಜನಗರ ತಾಲೂಕಿ ಬೂದಿಪಡಗ (ರಂಗಸಂದ್ರ) ಗೆಸ್ಟ್ಹೌಸ್ನಲ್ಲಿ ಮೂರು ದಿನ ವಿಚಾರಣೆ ನಡೆಸಲಾಗಿತ್ತು. ಈ ನಡುವೆ ಗೆಸ್ಟ್ಹೌಸ್ನಿಂದ ವೀರಪ್ಪನ್ ಪರಾರಿ ಆಗಿದ್ದ. ವೀರಪ್ಪನ್ನ ಹಲವು ಸಹಚರರು ಶರಣಾಗತರಾಗಿದ್ದರು.
ವೀರಪ್ಪನ್ ಶರಣಾಗತಿಯ ನಾಟಕವಾಡಿ, 1991 ನವೆಂಬರ್ 10ರಂದು ಎರಕೆಯಂ ಹಳ್ಳದ ಸಮೀಪ ಪಿ.ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಂದು ಹಾಕಿದ್ದ. ಅವರು ವೀರಪ್ಪನ್ ಕ್ರೌರ್ಯಕ್ಕೆ ಸಿಲುಕಿ ಹುತಾತ್ಮರಾಗಿ 31 ವರ್ಷ ಕಳೆದರೂ, ಗ್ರಾಮದ ಜನರು ಮಾರಿಯಮ್ಮ ದೇವಾಲಯದಲ್ಲಿ ಶ್ರೀನಿವಾಸ್ ಅವರ ಭಾವಚಿತ್ರ ಇಟ್ಟು ಪೂಜಿಸುತ್ತಾರೆ. ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಇವರ ಭಾವಚಿತ್ರದ ಆಹ್ವಾನ ಪತ್ರಿಕೆಗಳೇ ಮನೆ -ಮನೆ ಸೇರುತ್ತವೆ.
ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಶ್ರೀನಿವಾಸ್
ಪಿ.ಶ್ರೀನಿವಾಸ್ ಅವರು ಗೋಪಿನಾಥಂನ ಬಡಜನರಿಗೆ ಸುಮಾರು 40 ಮನೆ ನಿರ್ಮಿಸಿ ಕೊಟ್ಟಿದ್ದರು. ಕಾಡಂಚಿನ ಜನರಿಗೆ ವೈದ್ಯಕೀಯ ಸೇವೆ, ಕುಡಿಯುವ ನೀರು, ರಸ್ತೆ, ಸಾರಿಗೆ ಸಂಪರ್ಕವನ್ನು ಸ್ವಂತ ಹಣದಲ್ಲಿ ಕಲ್ಪಿಸಿ ಕೊಟ್ಟಿದ್ದರು. ವೀರಪ್ಪನ್ ನೆಲೆಸಿದ್ದ ಕಾಡಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯದ ಉಪ ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಿ, ಜಾಗೃತಿ ಮೂಡಿಸುವ ಮೂಲಕ ಅರಣ್ಯ ಸಂಪತ್ತು, ವನ್ಯಜೀವಿಗಳನ್ನು ಉಳಿಸುವ ಕಾರ್ಯವನ್ನು ಮಾಡಿದ್ದರು. ಸ್ನೇಹಿತರು ಹಾಗೂ ಬಂಧುಗಳಿಂದಲೂ ಹಣ ಸಂಗ್ರಹಿಸಿ ಅನೇಕ ಜನಹಿತ ಸೇವೆಗೆ ವಿನಿಯೋಗಿಸಿದ್ದರು.
ಶ್ರೀನಿವಾಸ್ ಹೆಸರು ಮಾತ್ರ ಶಾಶ್ವತವಾಗಿ ಉಳಿವು
1992ರಲ್ಲಿ ಶ್ರೀನಿವಾಸ್ ಅವರಿಗೆ ಉನ್ನತ ನಾಗರಿಕ ಶೌರ್ಯ ಪ್ರಶಸ್ತಿ ಆದ 'ಕೀರ್ತಿಚಕ್ರ'ವನ್ನು ರಾಷ್ಟ್ರಪತಿಗಳು ಮರಣೋತ್ತರವಾಗಿ ಪ್ರದಾನ ಮಾಡಿದರು. 2020ರ ಸೆಪ್ಟೆಂಬರ್ 11ರಂದು ನಡೆದ ಅರಣ್ಯ ಹುತಾತ್ಮರ ದಿನದಂದು ಎರಕೆಯಂ ಹಳ್ಳದಲ್ಲಿ ಶ್ರೀನಿವಾಸ್ ಅವರ ಸ್ಮಾರಕ ಉದ್ಘಾಟನೆಗೊಂಡಿತು. ಶ್ರೀನಿವಾಸ್ ಮಡಿದ ಸ್ಥಳವೂ ಇದೀಗ ಅರಣ್ಯ ಇಲಾಖೆಯ ಪಾಲಿಗೆ ಪುಣ್ಯಭೂಮಿ ಆಗಿದ್ದು, ಇಂದಿಗೂ ಪ್ರತಿವರ್ಷ ಗಣ್ಯರಿಂದ ಗೌರವ ನಮನ ಸಲ್ಲಿಸಲಾಗುತ್ತಿದೆ. ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನು ಇಡಲಾಗಿದೆ. ಗೋಪಿನಾಥಂನಲ್ಲಿ ವೀರಪ್ಪನ್ ನೆನಪು ಅಳಿದರೂ ಶ್ರೀನಿವಾಸ್ ಅವರ ಹೆಸರು ಮಾತ್ರ ಶಾಶ್ವತವಾಗಿ ಉಳಿದಿದೆ.
ಪಿ.ಶ್ರೀನಿವಾಸ್ ಅವರ ಪುತ್ಥಳಿ ಅನಾವರಣಗೊಂಡಿದ್ದು, ಪಿಸಿಸಿಎಫ್ ವಿಜಯಕುಮಾರ್ ಗೊಗೀ, ಹಿರಿಯ ಅರಣ್ಯಾಧಿಕಾರಿಗಳಾದ ಮನೋಜ್ ಕುಮಾರ್, ಉಪೇಂದ್ರ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ್ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಕಟ್ಟಿರುವ ಯುವಪಡೆ ಗ್ರೀನ್ ವಾರಿಯರ್ಸ್ ತಂಡ ಸಕ್ರಿಯವಾಗಿ ಪಾಲ್ಗೊಂಡಿತ್ತು.