ಚಾಮರಾಜನಗರದಲ್ಲಿ ಹಸುಗಳ ನಿಗೂಢ ಸಾವು: ಕಂಗಾಲಾದ ರೈತ
ಚಾಮರಾಜನಗರ, ಅಕ್ಟೋಬರ್ 11: ಹಾಲು ಕರೆಯುತ್ತಿದ್ದ ಹಸುಗಳೆರಡು ನಿಗೂಢವಾಗಿ ಸಾವನ್ನಪ್ಪಿರುವ ಕಾರಣ ಮಾಲೀಕರು ಆತಂಕಗೊಂಡಿರುವ ಘಟನೆ ತಾಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದಲ್ಲಿ ನಡೆದಿದೆ.
ರೈತ ರಾಜಪ್ಪ ಎಂಬುವರು ಎರಡು ಹಸುಗಳನ್ನು ಸಾಕಿದ್ದು ಇವು ಹಾಲು ನೀಡುತ್ತಿದ್ದರಿಂದ ಅದನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ ಇಂತಹ ಹಸುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದು ಸಂಶಯಕ್ಕೆಡೆ ಮಾಡಿದೆ. ಈ ಹಸುಗಳು ಎಚ್ಎಫ್ ತಳಿಯದ್ದಾಗಿದ್ದು ಸುಮಾರು 50 ಸಾವಿರ ಬೆಲೆಬಾಳುತ್ತಿದ್ದವು.
ಮೂರು ಹಸುಗಳನ್ನು ಎಂದಿನಂತೆ ಮೇಯಲು ಬಿಟ್ಟಿದ್ದರು. ಬೆಳಗ್ಗೆ ಮೇಯಲು ಹೋಗಿದ್ದ ಹಸುಗಳು ಸಂಜೆ ಮನೆಗೆ ಮರಳಿದ್ದವು. ಆ ನಂತರ ಹಾಲು ಕರೆದು ಮೇವು ಹಾಕಿದ್ದರು. ಮುಂಜಾನೆ ನೋಡಿದಾಗ ಎರಡು ಹಸುಗಳು ಮೃತಪಟ್ಟಿದ್ದರೆ, ಮತ್ತೊಂದು ಹಸು ಗಂಭೀರವಾಗಿತ್ತು.
ಈ ಎರಡು ಹಸುಗಳು ಗರ್ಭಧರಿಸಿದ್ದವಲ್ಲದೆ, ಇನ್ನು ಕೆಲವೇ ತಿಂಗಳಲ್ಲಿ ಕರು ಹಾಕುವಂತಿದ್ದವು. ಸ್ಥಳಕ್ಕೆ ತೆರಳಿರುವ ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದು ಇದರ ವರದಿ ಬಂದ ಬಳಿಕವಷ್ಟೆ ಸಾವಿಗೆ ಕಾರಣ ತಿಳಿಯಲಿದೆ.