ಚಾಮರಾಜನಗರದಲ್ಲಿ ಕೊನೆಗೂ ಸೆರೆ ಸಿಕ್ಕ ಹುಲಿ
ಚಾಮರಾಜನಗರ, ಮೇ 19: ಬಂಡೀಪುರ ಕಾಡಂಚಿನ ಗ್ರಾಮಗಳ ಜನರ ನಿದ್ದೆಗೆಡಿಸುವುದರೊಂದಿಗೆ ಜಾನುವಾರುಗಳನ್ನೇ ಟಾರ್ಗೆಟ್ ಮಾಡಿ ಬಲಿ ತೆಗೆದುಕೊಳ್ಳುತ್ತಿದ್ದ ಹುಲಿ ಕೊನೆಗೂ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.
ಕಳೆದ ಒಂದೂವರೆ ತಿಂಗಳಿಂದ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಾದ ಚಿರಕನಹಳ್ಳಿ, ಕುಂದಕೆರೆ, ರಾಮ್ಯನಪುರ ಕಡಬೂರು ಹಾಗೂ ಉಪಕಾರ ಕಾಲೋನಿಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಾ ಜಾನುವಾರು, ಮೇಕೆ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಪ್ರಾಣಿಗಳನ್ನು ಬಲಿಪಡೆದಿತ್ತು.
ಹುಲಿ ಸೆರೆಯ ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಯಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಜತೆಗೆ ಹುಲಿ ದಾಳಿಯೂ ಮುಂದುವರೆದಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಅರಣ್ಯ ಸಚಿವ ಆನಂದ್ ಸಿಂಗ್ ಬಂಡೀಪುರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವುದರೊಂದಿಗೆ ಹುಲಿ ಸೆರೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅವರೂ ಹುಲಿ ಸೆರೆಗೆ ಅನುಮತಿ ನೀಡಿದ್ದರು. ಅದರಂತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಮತ್ತೆ ಇಂದು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಸಾಕಾನೆ ಅಭಿಮನ್ಯು ಮೂಲಕ ಎಸಿಎಫ್ ಗಳಾದ ಎಂ.ಎಸ್.ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಕುಂದಕೆರೆ ಸಮೀಪದ ಪರಮೇಶ್ವರಪ್ಪ ಎಂಬುವರ ಜಮೀನಿನಲ್ಲಿ ಹುಲಿ ಅಡಗಿರುವುದು ಪತ್ತೆಯಾಗಿತ್ತು.
ಕೂಡಲೇ ಪಶುವೈದ್ಯ ಡಾ.ನಾಗರಾಜು ಅರಿವಳಿಕೆ ನೀಡಿದ್ದು, ಎಸ್ ಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.












Click it and Unblock the Notifications