ಯರಿಯೂರು ಗ್ರಾಮದಲ್ಲಿ ಹುಲಿಹೆಜ್ಜೆ: ಭಯದಲ್ಲಿ ಗ್ರಾಮಸ್ಥರು
ಚಾಮರಾಜನಗರ, ಮೇ.26: ಹುಲಿಯೊಂದು ನೆಮ್ಮದಿಯಾಗಿದ್ದ ಗ್ರಾಮದ ಜನರ ನಿದ್ದೆಗೆಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕು ಯರಿಯೂರ್ ಹಾಗೂ ನೇನೆಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಹುಲಿಯೊಂದರ ಹೆಜ್ಜೆ ಕಂಡುಬಂದಿದ್ದು, ಇದನ್ನು ನೋಡಿದ ಗ್ರಾಮಸ್ಥರು ಈಗ ತಮ್ಮ ಗ್ರಾಮದಲ್ಲಿಯೇ ಹುಲಿ ಓಡಾಡುತ್ತಿದೆ ಎಂದು ತಿಳಿದು ಭಯಭೀತರಾಗಿದ್ದಾರೆ.
ಸದ್ಯ ಯರಿಯೂರು ಗ್ರಾಮದ ಮಹೇಶ್ ಎಂಬುವರು ಜಮೀನಿನಿಂದ ಮನೆಯತ್ತ ತೆರಳುವಾಗ ಭಾರೀ ಗಾತ್ರದ ಹುಲಿಯನ್ನು ನೋಡಿದ್ದಾರೆ. ಇನ್ನು ನೇನೆಕಟ್ಟೆ ಗ್ರಾಮದ ಸುಬ್ಬಪ್ಪ ಎಂಬುವರ ಜಮೀನಿನಲ್ಲಿ ಕಟ್ಟಿಹಾಕಿದ್ದ ಮೇಕೆಯನ್ನು ಹುಲಿಯೊಂದು ಎತ್ತಿಕೊಂಡು ಹೋದ ಘಟನೆಯೂ ನಡೆದಿದೆ.
ಮೇಕೆ ಕಾಣದಿದ್ದಾಗ ಅದನ್ನು ಹುಡುಕಿಕೊಂಡು ಹೋದವರಿಗೆ ಈಗ ಹುಲಿ ಅಡ್ಡಾಡಿದ ಹೆಜ್ಜೆಗುರುತುಗಳು ಕಂಡು ಬಂದಿದ್ದು, ಇದನ್ನು ನೋಡಿದ ಮೇಲೆ ರೈತರು ಜಮೀನಿಗೆ ಹೋಗಲು, ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.