ಬರಡಾದ ಬಂಡೀಪುರದಲ್ಲಿ ಹಸಿರೀಕರಣದ ಕಾರ್ಯ ಆರಂಭ
ಬರಡಾದ ಬಂಡೀಪುರದಲ್ಲಿ ಹಸಿರೀಕರಣದ ಕಾರ್ಯ ಆರಂಭ
ಚಾಮರಾಜನಗರ: ಬೇಸಿಗೆಯ ದಿನದಲ್ಲಿ ದ್ವೇಷದ ಕಿಚ್ಚಿನಿಂದ ಬಂಡೀಪುರ ಅರಣ್ಯಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಸಾವಿರಾರು ಎಕರೆ ಪ್ರದೇಶ ಸುಟ್ಟು ಕರಕಲಾಗುವಂತೆ ಮಾಡಿದ್ದರು.
ಇದೀಗ ಬೆಂಕಿಯಿಂದ ಗಿಡಮರಗಳು ಸುಟ್ಟು ಕರಕಲಾಗಿ ಬೋಳಾದ ಪ್ರದೇಶದಲ್ಲಿ ಪಾರ್ಥೇನಿಯಂ ಬೆಳೆದಿದ್ದು ಇವುಗಳನ್ನು ಹಾಗೆಯೇ ಬಿಟ್ಟರೆ ಇವುಗಳ ನಡುವೆ ಹುಲ್ಲು ಹಾಗೂ ಇತರೆ ಗಿಡಗಳು ಬೆಳೆಯುವುದು ಕಷ್ಟ ಹೀಗಾಗಿ ಪಾರ್ಥೇನಿಯಂ ಗಿಡಗಳನ್ನು ತೆರವುಗೊಳಿಸಿ ಬೀಜದುಂಡೆಯನ್ನು ಎಸೆದು ಹಸಿರೀಕರಣಗೊಳಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಈ ಕಾರ್ಯಕ್ಕೆ ಅರಣ್ಯ ಇಲಾಖಾಧಿಕಾರಿಗಳಿಗೆ ನ್ಯಾಯಾಧೀಶರಾದ ಮೋಹನ್ ಕುಮಾರ್ ಮತ್ತು ನಾಗರಾಜ್
ಅವರು ಸಾಥ್ ನೀಡಿದ್ದಾರೆ. ತಮ್ಮ ಕೈನಿಂದಲೇ ನ್ಯಾಯಾಧೀಶರು ಪಾರ್ಥೇನೀಯ ಕಿತ್ತು ಹಾಕಿ, ಕಾಡು ಮರಗಿಡಗಳ ಪುನಶ್ಚೇತನಕ್ಕೆ ಬೀಜ ಎರಚಿ ಹಸಿರೀಕರಣಕ್ಕೆ ಚಾಲ ನೀಡಿದ್ದು ವಿಶೇಷವಾಗಿತ್ತು.

ಒಂದು ಕಡೆ ಅರಣ್ಯ ಇಲಾಖೆಯ ಸಿಬ್ಬಂದಿ ಅಭಯಾರಣ್ಯದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕುತ್ತಿದ್ದರೆ, ಮತ್ತೊಂದೆಡೆ ನ್ಯಾಯಾಧೀಶರು ಪಾರ್ಥೇನಿಯಂ ಗಿಡಗಳನ್ನು ಕಿತ್ತು ಹಾಕಿದರಲ್ಲದೆ, ಜೋಳಿಗೆಯಂತೆ ಬ್ಯಾಗ್ ನೇತು ಹಾಕಿಕೊಂಡು ಸುಟ್ಟು ಕರಕಲಾದ ಕಾಡಿನಲ್ಲಿ ಬೀಜಗಳನ್ನು ಎರಚಿ ಹಸರೀಕರಣಕ್ಕೆ ಮುಂದಾದರು. ಇವರ ಕಾರ್ಯ ಇತರರಿಗೂ ಮಾದರಿಯಾಯಿತು ಎಂದರೆ ಅತಿಶಯೋಕ್ತಿಯಾಗಲಾರದು.
ಕಳೆದ ಫೆಬ್ರವರಿ ತಿಂಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು ೨೦ ಸಾವಿರ ಎಕರೆ ಅಮೂಲ್ಯವಾದ ಕಾಡು ಸುಟ್ಟು ಕರಕಲಾಗಿತ್ತು. ಇದರಿಂದ ಇಡೀ ಅರಣ್ಯ ಬೋಳಾಗಿ ಕಾಣುತ್ತಿತ್ತು. ಗಿಡಮರಗಳು ಸುಟ್ಟು ಹೋಗಿದ್ದವು. ಹೀಗಾಗಿ ಬರಡಾದ ಅಭಯಾರಣ್ಯದ ಪುನಶ್ಚೇತನಕ್ಕೆ ಅರಣ್ಯ ಇಲಾಖೆಯು ಮುಂದಾಗಿದ್ದು ವಿಶ್ವ ಪರಿಸರ ದಿನಾಚರಣೆಯಂದೇ ಕಾಡು ಮರದ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದು, ಪಾರ್ಥೇನಿಯಂ ಕಿತ್ತು, ಬೀಜ ಎರಚುವ ಕಾರ್ಯವನ್ನು ಆರಂಭಿಸಲಾಗಿದೆ.
ಇದೇ ವೇಳೆ ಬಂಡೀಪುರದ ಹುಲಿ ಯೋಜನೆಯ ನಿರ್ದೇಶಕ ಬಾಲಚಂದ್ರ ಮಾತನಾಡಿ, ಅರಣ್ಯ ಬೆಳೆಸಿ, ಸಂರಕ್ಷಿಸುವ ಕೆಲಸ ಕೇವಲ ಅರಣ್ಯ ಇಲಾಖೆಗೆ ಸೇರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೀಮಿತವಾಗಿದ್ದಲ್ಲ, ಇದು ಎಲ್ಲರಿಗೂ ಸೇರಿದ ಹೊಣೆಗಾರಿಕೆಯಾಗಿದ್ದು, ಕಾಡು ಬೆಳೆಸಿ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಮಾನವನ ದ್ವೇಷದ ಕಿಚ್ಚಿಗೆ ಸುಟ್ಟು ಕರಕಲಾದ ಬಂಡೀಪುರ ಅಭಯಾರಣ್ಯಕ್ಕೆ ಹಸಿರೀಕರಣಕ್ಕೆ ಪಣ ತೊಟ್ಟಿರುವ ಅರಣ್ಯ ಇಲಾಖೆಯ ಜೊತೆ ನ್ಯಾಯಾಧೀಶರು ಕೈ ಜೋಡಿಸುವ ಮೂಲಕ ಬಂಡೀಪುರ ಪುನಶ್ಚೇತನಕ್ಕೆ ಮುಂದಾಗಿದ್ದು, ಇವರೊಂದಿಗೆ ಸಾರ್ವಜನಿಕರು ಸಹಕರಿಸಿದರೆ ಮತ್ತಷ್ಟು ಹಸಿರೀಕರಣ ಗೊಳಿಸಲು ಸಾಧ್ಯವಾಗಬಹುದು.












Click it and Unblock the Notifications