ಗೋಶಾಲೆಯಲ್ಲಿ ನಾಯಿಗಳ ಪಾಲಾದ ನವಜಾತ ಕರು
ಚಾಮರಾಜನಗರ, ಜನವರಿ 13: ಬರದ ಹಿನ್ನಲೆಯಲ್ಲಿ ರೈತರ ಜಾನುವಾರುಗಳಿಗೆ ಅನುಕೂಲವಾಗಲೆಂದು ಗುಂಡ್ಲುಪೇಟೆ ತಾಲೂಕಿನ ಹುತ್ತೂರು ಕೆರೆಯ ಸಮೀಪ ತೆರೆದ ಗೋಶಾಲೆ ಸಮಸ್ಯೆಗಳ ಆಗರವಾಗಿದ್ದು, ಸಮರ್ಪಕವಾಗಿ ಮೇವು ಸಿಗದೆ ಜಾನುವಾರುಗಳು ಸೊರಗುತ್ತಿದ್ದರೆ, ರಕ್ಷಣೆಯಿಲ್ಲದೆ ನವಜಾತ ಕರು ಬೀದಿನಾಯಿಗಳ ಪಾಲಾಗಿದೆ.
ಈ ನಡುವೆ ಹಸುವೊಂದು ಕರು ಹಾಕಿತ್ತು. ಗೋಶಾಲೆಯಲ್ಲಿ ರಕ್ಷಣೆಯ ಕೊರತೆಯುಂಟಾದ ಕಾರಣ ಕರುವನ್ನು ಬೀದಿ ನಾಯಿಗಳು ತಿಂದು ಹಾಕಿವೆ. ಇದರಿಂದ ಮಾಲಿಕ ರಾಮಯ್ಯ ಅವರು ಕಂಗಾಲಾಗಿದ್ದಾರೆ. ಸಮಸ್ಯೆಯನ್ನು ಹತ್ತಿರದಿಂದ ಗಮನಿಸಿದ ರೈತರು ಗೋಶಾಲೆ ವಿರುದ್ಧ ಪ್ರತಿಭಟನೆ ನಡೆಸಿ ಕಾಟಾಚಾರಕ್ಕೆ ನಡೆಸುವಂತಿದ್ದರೆ ಮುಚ್ಚಿಬಿಡಿ ರೈತರಿಗೆ ತೊಂದರೆ ನೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಹುತ್ತೂರಿನ ಗೋಶಾಲೆಯಲ್ಲಿ ಹತ್ತಾರು ಸಮಸ್ಯೆಗಳು!]

ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಗೋಶಾಲೆಯಲ್ಲಿ ಜಾನುವಾರುಗಳು ಇರಬೇಕೆಂದು ಹೇಳುತ್ತಿದ್ದಾರೆ. ಇದು ಸರಿಯಲ್ಲ. ಅಕ್ಕಪಕ್ಕದ ಗ್ರಾಮಗಳವರು ಸಂಜೆ ತಮ್ಮ ಮನೆಗೆ ಕರೆದೊಯ್ಯಬಹುದಾಗಿದ್ದರೂ ದೂರದೂರಿನ ಜಾನುವಾರುಗಳಿಗೆ ರಾತ್ರಿ ವೇಳೆಯಲ್ಲಿ ತಂಗಲು ಅವಕಾಶ ನೀಡಲಾಗಿದೆ. ಎಲ್ಲವನ್ನೂ ಇಲ್ಲಿಯೇ ಉಳಿಸುವಂತಾಗಬೇಕು. ಎಲ್ಲ ಜಾನುವಾರುಗಳಿಗೂ ನಿಗದಿತ ಪ್ರಮಾಣದ ಮೇವು ವಿತರಣೆ ಮಾಡಬೇಕು. ಪ್ರಸ್ತುತ ನವಜಾತ ಕರುವೊಂದು ರಕ್ಷಣೆಯಿಲ್ಲದೆ ಸಾವಿಗೀಡಾಗಿದೆ ಸುರಕ್ಷತಾ ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಟಿ.ಎಸ್.ಶಾಂತಮಲ್ಲಪ್ಪ ಕಿಡಿಕಾರಿದರು.

ನಿಯಮದಂತೆ ಒಂದು ಜಾನುವಾರಿಗೆ ಪ್ರತಿ ದಿನವೂ 5 ಕೆಜಿ ಮೇವು ನೀಡಬೇಕಿದೆ. ಆದರೆ ಮೇವಿನ ಅಳತೆ ಮಾಡಲು ಯಾವುದೇ ಸ್ಕೇಲ್ ಇಟ್ಟಿಲ್ಲ. ಅಂದಾಜಿನ ಪ್ರಕಾರ ಒಂದು ಹಿಡಿ ಮೇವನ್ನು ಮಾತ್ರ ವಿತರಣೆ ಮಾಡಲಾಗುತ್ತಿದ್ದು ಭಾರೀ ಪ್ರಮಾಣದ ಅವ್ಯವಹಾರ ನಡೆಸಲಾಗುತ್ತಿದೆ. ರೈತರು ತಾವೇ ಕೊಂಡೊಯ್ದಿದ್ದ ಅಳತೆಯಲ್ಲಿ 4 ಜಾನುವಾರುಗಳಿಗೆ ನೀಡಿದ್ದ ಮೇವನ್ನು ತೂಕ ಹಾಕಿದಾಗ ಕೇವಲ 8 ಕೆ.ಜಿ ತೂಗಿದೆ ಎಂದು ದೂರಿದರು.

ನಿರ್ದೇಶಕರ ಸ್ಪಷ್ಟನೆ
ಗೋಶಾಲೆಯಲ್ಲಿ ಕೇವಲ 1 ಸಾವಿರ ಜಾನುವಾರುಗಳ ನಿರ್ವಹಣೆ ಸಾಧ್ಯವಾಗಲಿದೆ. ಆದರೆ ಇಲ್ಲಿ 1400 ಜಾನುವಾರುಗಳಿದ್ದು ಸಮರ್ಪಕ ನಿರ್ವಹಣೆ ಕಷ್ಟಕರವಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications