ಚಾಮರಾಜನಗರ ಕಾಡಂಚಿನ ಶಾಲಾ ಮಕ್ಕಳಿಗೆ ಪಾದಯಾತ್ರೆ ತಪ್ಪಿಲ್ಲ!
ಚಾಮರಾಜನಗರ, ಸೆಪ್ಟೆಂಬರ್.26: ಕಾಡಂಚಿನ ಗ್ರಾಮಗಳಲ್ಲಿ ವಾಸಮಾಡುವ ವಿದ್ಯಾರ್ಥಿಗಳು ಇಂದಿಗೂ ಬಸ್ಸಿನ ಸೌಲಭ್ಯವಿಲ್ಲದೆ ನಾಲ್ಕೈದು ಕಿ.ಮೀ. ತನಕ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ.
ಹೀಗಾಗಿ ಪೋಷಕರು ಭಯದಲ್ಲೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಿದೆ. ಬಡವರೇ ಹೆಚ್ಚಾಗಿ ವಾಸವಾಗಿರುವ ಕಾಡಂಚಿನ ಗ್ರಾಮಗಳಲ್ಲಿ ಪೋಷಕರು ತಾವು ಓದಿಲ್ಲ, ಮಕ್ಕಳಾದರೂ ವಿದ್ಯಾಭ್ಯಾಸ ಮಾಡಲಿ ಎಂಬ ಉದ್ದೇಶದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.
ಕಾಡಾನೆ, ವನ್ಯಪ್ರಾಣಿಗಳ ಭಯದಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ಹೋಗಿ ಬರುವ ದೃಶ್ಯಗಳು ಕಂಡು ಬರುತ್ತವೆ. ಎಲ್ಲರೂ ವಿದ್ಯಾಭ್ಯಾಸ ಮಾಡಬೇಕು ಶಿಕ್ಷಿತರಾಗಬೇಕು ಎನ್ನುವ ಸರ್ಕಾರ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ಬಸ್ಸಿನ ವ್ಯವಸ್ಥೆಗಳನ್ನು ಹಲವು ಗ್ರಾಮಗಳಿಗೆ ಒದಗಿಸದ ಕಾರಣದಿಂದಾಗಿ ಹೆಣ್ಣು ಮಕ್ಕಳನ್ನು ದೂರದ ಶಾಲೆಗೆ ಕಳುಹಿಸಲು ಹೆದರಿ ಶಾಲೆ ಬಿಡಿಸುತ್ತಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿನಿಯರು ಸುಮಾರು ನಾಲ್ಕೈದು ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಿ ಬರುತ್ತಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ನಾಗಪಟ್ಟಣಂ ಕಾಡಂಚಿನಲ್ಲಿದ್ದು ಇಲ್ಲಿ ಯಾವುದೇ ಶಾಲೆಗಳಿಲ್ಲದ ಕಾರಣ ವಿದ್ಯಾರ್ಥಿಗಳು ಸುಮಾರು ಐದು ಕಿಲೋಮೀಟರ್ ದೂರದ ಬರಗಿ ಗ್ರಾಮದಲ್ಲಿರುವ ಶಾಲೆಗೆ ಹೋಗಬೇಕಾಗಿದೆ.
ಬೆಳಗ್ಗೆ ಹೆತ್ತವರು ಕೂಲಿ ಕೆಲಸಕ್ಕೆ ಹೋದರೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಾರೆ. ಈ ಗ್ರಾಮದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಕಾಡು ದಾರಿಯ ಮೂಲಕ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ ನಡೆದುಕೊಂಡು ಹೋಗುವ ಬಗ್ಗೆ ಚಿಂತೆಯಿಲ್ಲ ಆದರೆ ಅವರಿಗೆ ಕಾಡು ಪ್ರಾಣಿಗಳ ಭಯ.
ಯಾವಾಗ ಯಾವ ಪ್ರಾಣಿಗಳು ಪ್ರತ್ಯಕ್ಷವಾಗಿ ಬಿಡಬಹುದೋ ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಭಯದಲ್ಲೇ ಹೆಜ್ಜೆ ಹಾಕುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ನಡೆದುಕೊಂಡೇ ಹೋಗುತ್ತಾರೆ. ಈ ವ್ಯಾಪ್ತಿಗೆ ಬಸ್ಸಿನ ವ್ಯವಸ್ಥೆ ಮಾಡಬಹುದು. ಆದರೆ ಯಾರಿಗೂ ಆ ಬಗ್ಗೆ ಕಾಳಜಿಯಿಲ್ಲ. ಇನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಗ್ರಾಮಸ್ಥರು, ಜನಪ್ರತಿನಿಧಿಗಳು ಏನಾದರೊಂದು ವ್ಯವಸ್ಥೆ ಮಾಡಬಹುದು ಎಂದು ನಂಬಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳಿಗೆ ಶಾಲೆಗೆ ನಡೆಯುವುದು ತಪ್ಪಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಅವರು ಚಾಮರಾಜನಗರದವರು.
ಅವರ ತವರು ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳ ಮಕ್ಕಳು ವಿದ್ಯಾಭ್ಯಾಸ ಮಾಡಲು ಪಡುತ್ತಿರುವ ಕಷ್ಟಗಳು ಅರ್ಥವಾಗಿದೆಯೋ ಗೊತ್ತಿಲ್ಲ. ಅವರು ಮುತುವರ್ಜಿ ವಹಿಸಿ ಈ ವ್ಯಾಪ್ತಿಯ ಗ್ರಾಮಗಳಿಗೆ ಮಿನಿಬಸ್ ನ ವ್ಯವಸ್ಥೆ ಮಾಡಿಕೊಟ್ಟಿದ್ದೇ ಆದಲ್ಲಿ ಮಕ್ಕಳು ಶಾಲೆಗೆ ಹೋಗಿ ಕಲಿಯಲು ಮತ್ತು ಗ್ರಾಮಸ್ಥರಿಗೆ ಬೇರೆ ಕಡೆಗಳಿಗೆ ಹೋಗಿ ಬರಲು ಅನುಕೂಲವಾಗಲಿದೆ.












Click it and Unblock the Notifications