ಮಲೆಮಹದೇಶ್ವರ ಬೆಟ್ಟದಲ್ಲಿ ಕಣ್ಮನಸೆಳೆದ ಮಹಾರಥೋತ್ಸವ
ಚಾಮರಾಜನಗರ, ಫೆಬ್ರವರಿ 17 : ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಮಹಾರಥೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾದರು.
ಮಾದಪ್ಪನಿಗೆ ಉಘೇ.. ಉಘೇ ಎನ್ನುತ್ತಾ ಹಣ್ಣುಜವನ ಎಸೆದು ಕೆಲವು ಭಕ್ತರು ಕೃತಾರ್ಥರಾದರೆ, ಮತ್ತೆ ಕೆಲವರು ರಥ ಎಳೆದು ಹರಕೆ ತೀರಿಸಿಕೊಂಡರು. ಮಂಗಳವಾದ್ಯಗಳ ಸಮೇತ ಛತ್ರಿ ಚಾಮರ ಹಿಡಿದ ಬೇಡಗಂಪಣ ಸಮುದಾಯದ ಬಾಲೆಯರು ಬೆಲ್ಲದ ಆರತಿ ಎತ್ತಿ ಉಘೇ ಎಂದರು.
ರಥೋತ್ಸವಕ್ಕೆ ಮುನ್ನ ಬೇಡಗಂಪಣ ಸಮುದಾಯದ 101 ಬಾಲೆಯರು ಮುಂಜಾನೆಯಿಂದಲೇ ಉಪವಾಸವಿದ್ದು ದೇವರನ್ನು ಪೂಜಿಸಿ ತಟ್ಟೆಯಲ್ಲಿ ಬೆಲ್ಲ ಮತ್ತು ವೀಳ್ಯದ ಎಲೆಯನ್ನಿಟ್ಟು ದೇವಾಲಯದ ಗರ್ಭಗುಡಿಯ ಬಲಭಾಗ ಕಾಯುತ್ತಾ ಕುಳಿತಿದ್ದರು.

ಬೆಳಿಗ್ಗೆ ಮಲೆ ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಪೂಜೆ ಮಾಡಿ ದೇವಾಲಯದ ಹೊರಭಾಗದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಮುಂಭಾಗ ಬಂದು ಬೆಲ್ಲದ ಆರತಿ ಬೆಳಗಿದ ನಂತರ ಸಾಲೂರು ಬೃಹನ್ಮಠದ ಮಠಾಧೀಶರಾದ ಗುರುಸ್ವಾಮಿಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸಕ್ಕೆ ಚಾಲನೆ ನೀಡಲಾಯಿತು.
ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಉತ್ತಮ ಮ¼ಯಾದ ಹಿನ್ನಲೆಯಲ್ಲಿ ಕಳೆದ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಕಳೆದ ಒಂದೆರಡು ವಾರಗಳಿಂದ ಕಾಲ್ನಡಿಗೆ, ಸೈಕಲ್, ಬೈಕ್, ಬಸ್ಸು ಇನ್ನಿತರ ವಾಹನಗಳ ಮೂಲಕ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಮಹಾ ರಥೋತ್ಸವವನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡರು.

ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಟಿಎನ್ ಎಸ್ಟಿಸಿ ಬಸ್ ಗಳನ್ನು ವಾಪಸ್ ಕರೆಸಿಕೊಂಡ ಹಿನ್ನಲೆಯಲ್ಲಿ ರಥೋತ್ಸವ ಬಳಿಕ ಬಸ್ ನಿಲ್ದಾಣಕ್ಕೆ ಬಂದ ಭಕ್ತಾಧಿಗಳು ತಮ್ಮ ಊರುಗಳಿಗೆ ತೆರಳಲು ಹರ ಸಾಹಸ ಪಡಬೇಕಾಯಿತು.












Click it and Unblock the Notifications