ವಿಷವಿಕ್ಕಿದ ಆರೋಪಿಗಳಿಗೆ ಶೀಘ್ರ ಶಿಕ್ಷೆ ಪ್ರಕಟಿಸಿ : ಡಾ. ಎಸ್.ಎಲ್. ಭೈರಪ್ಪ
ಚಾಮರಾಜನಗರ, ಡಿಸೆಂಬರ್ 22 : ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಹಾಕಿ 17 ಜನರ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ವಿಳಂಬ ಮಾಡದೇ ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ ಶೀಘ್ರವೇ ಶಿಕ್ಷೆ ಪ್ರಕಟಿಸಬೇಕಾಗಿದೆ ಎಂದು ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಹೇಳಿದ್ದಾರೆ.
ಕೊಳ್ಳೇಗಾಲದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ, ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿ ಅಮಾಯಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಿಧ ಪ್ರಕರಣಗಳನ್ನು ಗಮನಿಸಿದಾಗ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಆರೋಪಿಗೆ ಶಿಕ್ಷೆ ಪ್ರಕಟಿಸಲು ವಿಳಂಬವಾಗಿರುವುದು ಕಂಡು ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಉದಾಹರಣೆಗೆ ಕಸಬ್ ಪ್ರಕರಣದಲ್ಲಿ 20 ವರ್ಷವಾದರೂ ಯಾವುದೇ ಶಿಕ್ಷೆಯಾಗಲಿಲ್ಲ. ಸುಮ್ಮನೆ ಆತನನ್ನು ಜೈಲಿನಲ್ಲಿಟ್ಟುಕೊಂಡು ಬಿರಿಯಾನಿ ನೀಡಲಾಯಿತು. ಜಿಂಕೆ ಕೊಂದ ಕೇಸ್ ಕೂಡ 22 ವರ್ಷ ನಡೆಯಿತು. ಈ ರೀತಿಯ ಹತ್ತು ಹಲವು ಪ್ರಕರಣಗಳಿವೆ ಅವುಗಳಂತೆ ಈ ಪ್ರಕರಣವೂ ಆಗದೆ ಆದಷ್ಟು ಬೇಗ ಶಿಕ್ಷೆ ಪ್ರಕಟಿಸುವಂತಾಗಬೇಕು. ವಿಳಂಬವಾದಲ್ಲಿ ಆರೋಪಿಗಳಿಗೆ ಕಾನೂನಿನ ಭಯವಿರುವುದಿಲ್ಲ ಹೀಗಾಗಿ ಸುಳ್ವಾಡಿ ದುರಂತ ಪ್ರಕರಣದ ಆರೋಪಿಗಳಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂದರು.

ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಆರೋಪಿಯಾದ ತಕ್ಷಣವೇ ಇತರೇ ಮಠ ಮಾನ್ಯಗಳ ಬಗ್ಗೆ ಹಾಗೂ ಮಠಾಧೀಶರ ಬಗ್ಗೆ ಕೆಟ್ಟ ಭಾವನೆ ತಾಳುವುದು ಸರಿಯಲ್ಲ. ಈ ಸಮಾಜಕ್ಕೆ ಒಳಿತು ಮಾಡುತ್ತಿರುವ ಹಲವಾರು ಮಠಗಳಿವೆ. ಪೂಜ್ಯ ಸ್ವಾಮೀಜಿಗಳಿದ್ದಾರೆ ಎಂದು ಹೇಳಿದರು.
ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರ 5 ಲಕ್ಷ ಪರಿಹಾರ ನೀಡಿದರೆ ಸಾಲದು. ಅವರ ಕುಟುಂಬ ಸೇರಿದಂತೆ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿ ಇದೀಗ ಚೇತರಿಕೆ ಕಂಡ ಕುಟುಂಬಕ್ಕೂ ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕು ಎಂದು ಮನವಿ ಮಾಡಿದರು.












Click it and Unblock the Notifications