ಅಪ್ಪು-ಅಪ್ಪು ಎಂದು ಕೂಗುತ್ತಿದ್ದ ಯುವಕನಿಗೆ ಶಿವಣ್ಣನಿಂದ ಬುದ್ದಿಮಾತು
ಚಾಮರಾಜನಗರ, ಜೂನ್ 26: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಬೈರಾಗಿ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್ಗೆ ಭರ್ಜರಿ ಸ್ವಾಗತ ನೀಡಲಾಗಿತ್ತು. ಆದರೆ ಕಾರ್ಯಕ್ರಮ ಆರಂಭದಿಂದಲೂ ಯುವಕನೊಬ್ಬ ಪದೇ ಪದೇ ಅಪ್ಪು-ಅಪ್ಪು ಎಂದು ಕೂಗುತ್ತಿದ್ದ ವೇಳೇ ಗರಂ ಆದ ಶಿವಣ್ಣ ಅಭಿಮಾನ ಮನಸ್ಸಿನಲ್ಲಿರಲಿ, ಬರಿ ಬಾಯಲ್ಲಲ್ಲ ಎಂದು ಬುದ್ದಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡುವ ವೇಳೆ ಅಭಿಮಾನಿಯೋರ್ವ ಒಂದೇ ಸಮನೇ ಅಪ್ಪು-ಅಪ್ಪು ಎಂದು ಘೋಷಣೆ ಕೂಗುತ್ತಿದ್ದ. ಇದರಿಂದ ತಾಳ್ಮೆ ಕಳೆದುಕೊಂಡು ಶಿವಣ್ಣ 'ಏಯ್ ಸುಮ್ಮನೆ ಕೂತ್ಕೊಳಪ್ಪ, ಅವನು ನನ್ನದು ಒಂದೇ ರಕ್ತ, ನೀನು ಈಗ ನೋಡಿದಿಯಾ, ನಾನು ಅವನನ್ನು ಕೂಸಿನಿಂದಲೂ ನೋಡಿದ್ದೀನಿ, ಪ್ರೀತಿ ಹೃದಯದಲ್ಲಿ ಇರಲಿ- ಕೇವಲ ಗಂಟಲಿನ ಹೊರಗೆ ಮಾತ್ರವಲ್ಲ' ಎಂದು ಬುದ್ಧಿವಾದ ಹೇಳಿದರು.
ನಗರದ ಸಂತೇಮರಹಳ್ಳಿ ವೃತ್ತಕ್ಕೆ ಶಿವಣ್ಣ ಬರುತ್ತಿದ್ದಂತೆ ಕ್ರೇನ್ ಸಹಾಯದಿಂದ ಬೃಹತ್ ಸೇಬಿನ ಹಾರ ಹಾಕಿ ಪುಷ್ಪವೃಷ್ಟಿ ಮೂಲಕ ಬರಮಾಡಿಕೊಳ್ಳಲಾಯಿತು. 'ಚಾಮರಾಜನಗರ ನಂದು, ಬರ್ಕಳಯ್ಯ' ಎಂದು ಜೋಗಯ್ಯ ಚಿತ್ರದ ಡೈಲಾಗ್ ಹೇಳಿ ಶಿವಣ್ಣ ಎರಡು ನಿಮಿಷ ನೃತ್ಯ ಮಾಡಿದರು.. ಶಿವಣ್ಣಗೆ ಡಾಲಿ ಧನಂಜಯ್ ಸಾಥ್ ಕೊಟ್ಟರು.

ಇದು ನಮ್ಮೂರು, ಪ್ರೀತಿ ಜಾಸ್ತಿ
ನಂತರ ಮಾತು ಮುಂದುವರಿಸಿ " ಚಾಮರಾಜನಗರ ನನ್ನ ತವರುಮನೆ ಇದ್ದಂತೆ, ನಮ್ಮ ಊರು, ಇಲ್ಲಿ ಯಾವಾಗಲೂ ಹೆಚ್ಚು ಪ್ರೀತಿ ಸಿಗಲಿದೆ, ಒಂದು ವಿಭಿನ್ಮ ಕತೆಯ ಸಿನಿಮಾ ಬರುತ್ತಿದ್ದು, ಎಲ್ಲರೂ ನೋಡಬೇಕು, ನಮ್ಮ ತಂಡವನ್ನು ಬೆಂಬಲಿಸಬೇಕು" ಎಂದು ಮನವಿ ಮಾಡಿದರು.

25ನೇ ದಿನದ ಸೆಲೆಬ್ರೇಷನ್ಗೆ ಮತ್ತೆ ಬರುವ ಭರವಸೆ
ಸಿನಿಮಾದಲ್ಲಿ ಒಳ್ಳೆಯ ಆ್ಯಕ್ಷನ್ ಇದೆ. ಅದ್ಭುತವಾದ ಡ್ಯಾನ್ಸ್ಗಳಿವೆ. ಒಳ್ಳೆಯ ಸಂದೇಶ ಸಾರುವ ಇರುವ ಸಿನಿಮಾ ಇದಾಗಿದ್ದು ಖಂಡಿತಾ, ನಿಮ್ಮೆಲ್ಲರಿಗೂ ಇಷ್ಟವಾಗಲಿದೆ ಎಂದು ಭಾವಿಸುತ್ತೇನೆ. ಬೈರಾಗಿಯ 25 ನೇ ದಿನ ಸೆಲೆಬ್ರೇಷನ್ ಗೆ ಮತ್ತೆ ಚಾಮರಾಜನಗರಕ್ಕೆ ಬರುತ್ತೇನೆ, ನಿಮ್ಮೆಲ್ಲರನ್ನೂ ನೋಡುತ್ತೇನೆ ಎಂದು ಶಿವಣ್ಣ ತಿಳಿಸಿದ್ದಾರೆ.

ಪುನೀತ್ ಅಗಲಿದ ಬಳಿಕ ಮೊದಲ ಭೇಟಿ
ಬೈರಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ಶಿವರಾಜ್ ಕುಮಾರ್ ತಮ್ಮ ತವರಿನ ನೆಲವಾದ ತಮಿಳುನಾಡಿನ ಗಾಜನೂರಿಗೂ ಭೇಟಿ ನೀಡಿದರು. ಪುನೀತ್ ಅಗಲಿದ ಬಳಿಕ ತವರಿಗೆ ಶಿವರಾಜ್ ಕುಮಾರ್ ಅವರ ಮೊದಲ ಭೇಟಿ ಇದಾಗಿದೆ. ಕಳೆದ ಬಾರಿ ಪುನೀತ್ ಕುಟುಂಬ ಹಾಗೂ ಶಿವರಾಜ್ ಕುಮಾರ್ ಎರಡೂ ಕುಟುಂಬವೂ ಒಟ್ಟಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದರು.

ಅಣ್ಣಾವ್ರ ಮನೆಯಲ್ಲಿ ಬಾಡೂಟ ಸವಿದ ಶಿವಣ್ಣ
ತುಂಬಾ ದಿನಗಳ ಬಳಿಕ ಗಾಜನೂರಿಗೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಬಳಿಕ ರಾಜ್ಕುಮಾರ್ ಹಳೇ ಮನೆ, ಅವರು ಧ್ಯಾನ ಮಾಡುತ್ತಿದ್ದ ದೊಡ್ಡ ಆಲದಮರ ಸ್ಥಳಗಳಿಗೆ ಭೇಟಿಕೊಟ್ಟು ಸಂಜೆವರೆಗೂ ಕಾಲ ಕಳೆದರು. ಡಾಲಿ ಧನಂಜಯ ಕೂಡ ಜೊತೆಯಲ್ಲಿದ್ದರು.












Click it and Unblock the Notifications