ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್ಗಾಗಿ ಹುಡುಕಾಟ!
ಚಾಮರಾಜನಗರ, ಜೂನ್ 27; ಜಿಲ್ಲೆಯಲ್ಲಿ ಕಾಡಂಚಿನಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ಬೆಳಕಿಗೆ ಬಂದಿದ್ದು, ಇಷ್ಟಕ್ಕೂ ಇದನ್ನು ಬಳಸಿದವರು ಯಾರು? ನಕ್ಸಲರು ಇರಬಹುದಾ? ಎಂಬಿತ್ಯಾದಿ ಸಂಶಯಗಳನ್ನು ಹೊತ್ತುಕೊಂಡು ನಕ್ಸಲ್ ನಿಗ್ರಹದಳ ಅರಣ್ಯವನ್ನು ಜಾಲಾಡುತ್ತಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನಲ್ಲಿ ಆಗಾಗ್ಗೆ ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವುದು ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಫೋನ್ ಬಳಕೆಯ ಜಾಡನ್ನು ಹಿಡಿದುಕೊಂಡು ನಕ್ಸಲ್ ನಿಗ್ರಹದಳ ಎಲ್ಲೆಡೆ ಶೋಧನೆ ಆರಂಭಿಸಿದೆ.
ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಸ್ಯಾಟಲೈಟ್ ಫೋನ್ ಬಳಕೆ ಸಂಬಂಧ ಮಾಹಿತಿ ದೊರೆತಿದ್ದು, ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ-ಕೆಬ್ಬೇಪುರ ನಡುವೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ದೃಢವಾಗಿತ್ತು. ಈ ಸಂಬಂಧ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಮಿಳುನಾಡು, ಕೇರಳ ಗಡಿಭಾಗಕ್ಕೆ ಹೊಂದಿಕೊಂಡಂತೆ ಚಾಮರಾಜನಗರ ಜಿಲ್ಲೆಯಿರುವುದರಿಂದ ಮತ್ತು ಗಡಿಭಾಗವು ಅರಣ್ಯದಿಂದ ಕೂಡಿರುವುದರಿಂದ ಅರಣ್ಯದಲ್ಲಿ ನಕ್ಸಲರು ಅಡಗಿ ಕುಳಿತಿರುವ ಸಾಧ್ಯತೆ ಇರುವುದರಿಂದ ಅವರೇನಾದರೂ ಇದನ್ನು ಬಳಸಿರಬಹುದೇ? ಎಂಬ ಸಂಶಯವೂ ಕಾಡುತ್ತಿದೆ.
ಕಳೆದ ತಿಂಗಳು ಕೇರಳ ಹಾಗೂ ತಮಿಳುನಾಡಿನ ರಾಜ್ಯದ ಟ್ರೈಜಂಕ್ಷನ್ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿದ್ದು ನಂತರ ನಕ್ಸಲ್ ಚಲನವಲನಗಳು ಪತ್ತೆಯಾಗಿತ್ತು. ಹೀಗಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಪೊಲೀಸರು ತಮ್ಮ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ ಅರಣ್ಯ ಪ್ರದೇಶಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಅಲ್ಲದೆ ಬರಗಿಯ ನಕ್ಸಲ್ ನಿಗ್ರಹದಳದ ಸಿಬ್ಬಂದಿ ಕೇರಳ ಗಡಿಯ ಮಾವಿನಹಳ್ಳಿ, ಕಲ್ಕೆರೆ ಮುಂತಾದ ಪ್ರದೇಶಗಳಲ್ಲಿ ತಮಿಳುನಾಡಿನ ಪೊಲೀಸರು ಮಾಯಾರ್ ಕಣಿವೆಯಲ್ಲಿ, ಕೇರಳ ಪೊಲೀಸರು ವೈನಾಡು ಹಾಗೂ ರಾಜ್ಯ ಮಡಕೇರಿ ಗಡಿಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಹಾಗೆನೋಡಿದರೆ ಚಾಮರಾಜನಗರ ಗಡಿವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ತಾಲೂಕಿನ ತೆರಕಣಾಂಬಿ ಸಮೀಪದ ಕಿಲಗೆರೆ ಜಮೀನಿನಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದಾಗ ಮೂಲೆಹೊಳೆ ಅರಣ್ಯ ಪ್ರದೇಶದಲ್ಲಿ ಕೇರಳದಿಂದ ಬಂದಿದ್ದ ವ್ಯಾಪಾರಿಯೊಬ್ಬರು ಫೋನ್ ಬಳಕೆ ಮಾಡಿರುವುದು ಪತ್ತೆಯಾಗಿತ್ತು. ಇದೀಗ ಸ್ಯಾಟಲೈಟ್ ಫೋನ್ ಯಾರು ಬಳಸಿದ್ದಾರೆ? ಎಂಬುದು ತಿಳಿಯುವ ತನಕ ಆತಂಕ ತಪ್ಪಿದಲ್ಲ.












Click it and Unblock the Notifications