ಚಾಮರಾಜನಗರ: ಶೌಚಾಲಯವಿದ್ದರೂ ಬಯಲೇ ಶೌಚಾಲಯ!
ಚಾಮರಾಜನಗರ, ಜೂನ್ 12: ದೇಶದಾದ್ಯಂತ ಬಯಲು ಶೌಚಾಲಯ ಮುಕ್ತ ಗ್ರಾಮ, ಪಟ್ಟಣಗಳನ್ನಾಗಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಂತೂ ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಪಂಗಳು ಅವಿರತವಾಗಿ ಶ್ರಮಿಸುತ್ತಿವೆ.
ಹೀಗಿರುವಾಗ ಯಳಂದೂರು ಪಟ್ಟಣದಲ್ಲಿ ನಿರ್ಮಿಸಿರುವ ಶೌಚಾಲಯ ಸೂಕ್ತ ನಿರ್ವಹಣೆಯಿಲ್ಲದೆ, ನಾಗರಿಕರು ಉಪಯೋಗಿಸಲು ಸಾಧ್ಯವಾಗದೆ ಬಯಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅಚ್ಚರಿಯಾಗಬಹುದು. ಯಳಂದೂರು ಪಟ್ಟಣದ ಬಳೇಪೇಟೆಯ ಕೆಇಬಿ ಕಚೇರಿ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯ ಮಾತ್ರ ಸೂಕ್ತ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ.

ಈಗಾಗಲೇ ಈ ಶೌಚಾಲಯದ ಸುತ್ತಲೂ ಗಿಡ-ಗಂಟಿಗಳು ಬೆಳೆದಿದ್ದು, ಉಪಯೋಗಕ್ಕೆ ಬಾರದಂತಾಗಿದೆ. ಶೌಚಾಲಯದ ಸುತ್ತಮುತ್ತ ಮದ್ಯದ ಬಾಟಲಿಗಳು, ಬೀಡಿ-ಸಿಗರೇಟಿನ ತುಂಡುಗಳು ಕಂಡು ಬರುತ್ತಿವೆ. ಈ ಶೌಚಾಲಯದಲ್ಲಿ ನೀರಿನ ನಿರ್ವಹಣೆಯಿಲ್ಲದೆ, ಯಾರೂ ಉಪಯೋಗಿಸಲು ಸಾಧ್ಯವಾಗದ್ದರಿಂದ ಅದರತ್ತ ಹೋಗದೆ ಸಾರ್ವಜನಿಕರು ಬಯಲಿಗೆ ಹೋಗಲು ಆರಂಭಿಸಿದ್ದರಿಂದ ಕಟ್ಟಡ ಪಾಳುಬಿದ್ದು ಕ್ರಿಮಿ-ಕೀಟ ವಿಷಜಂತುಗಳು ಆವಾಸ ಸ್ಥಾನವಾಗಿ ಮಾರ್ಪಾಡುಗೊಂಡಿವೆ.
ಇನ್ನು ಈ ಶೌಚಾಲಯದ ಪಕ್ಕವೇ ಬಾಲಕಿಯರ ವಿದ್ಯಾರ್ಥಿನಿಲಯವಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಸಾಂಕ್ರಾಮಿಕ ರೋಗದ ಭಯವಲ್ಲದೆ, ದುರ್ವಾಸನೆಯನ್ನು ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬುನಾತ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ.
ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಶೌಚಾಲಯವನ್ನು ದುರಸ್ತಿ ಪಡಿಸಿ ಎಲ್ಲರೂ ಶೌಚಾಲಯದಲ್ಲಿಯೇ ಮೂತ್ರ ವಿಸರ್ಜನೆ ಮಾಡುವಂತ ಕೆಲಸ ಮಾಡಬೇಕಾಗಿದೆ. ಇಲ್ಲದೆ ಹೋದರೆ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಕನಸು ಕನಸಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ.












Click it and Unblock the Notifications