ಬಿಳಿಗಿರಿರಂಗನಾಥ ಸ್ವಾಮಿ ಹುಂಡಿಯಲ್ಲಿ 37 ಲಕ್ಷ ರೂ. ಸಂಗ್ರಹ, ಅಮೆರಿಕನ್ ಡಾಲರ್ಗಳು ಪತ್ತೆ
ಚಾಮರಾಜನಗರ, ನವೆಂಬರ್, 08: ಯಳಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆಯು 3 ತಿಂಗಳ ಬಳಿಕ ನಡೆದಿದೆ. ಹುಂಡಿಯಲ್ಲಿ ಒಟ್ಟು 37 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಇನ್ನು ಇದಲ್ಲಿರುವ ಡಾಲರ್ಗಳನ್ನೂ ವಿದೇಶಿ ಭಕ್ತರು ಅರ್ಪಿಸಿದ್ದಾರೆ.
ಕಳೆದ 3 ತಿಂಗಳ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 37,74,562 ರೂಪಾಯಿ ಹಣ ಸಂಗ್ರಹವಾಗಿದೆ. 200 ಅಮೆರಿಕನ್ ಡಾಲರ್, 10 ಕೆನಡಾ ಡಾಲರ್ಗಳನ್ನೂ ಕೂಡ ಭಕ್ತರು ರಂಗನಾಥನಿಗೆ ಅರ್ಪಿಸಿದ್ದಾರೆ.
ವಿದೇಶಿಗರು ಇಲ್ಲಿನ ಬೆಟ್ಟಕ್ಕೆ ಭೇಟಿ ಕೊಡುವುದರಿಂದ ಹುಂಡಿಯಲ್ಲಿ ಡಾಲರ್ ಪತ್ತೆಯಾಗಿದೆ. 11 ಸಣ್ಣ ಮಾಂಗಲ್ಯ, 1 ಬೆಳ್ಳಿ ಮುಖವಾಡ, 1 ಪುಟಾಣಿ ಘಂಟೆ- ಆರತಿ, 2 ಬೆಳ್ಳಿ ಕೊಳಲು, 2 ದೇವರ ಮೂರ್ತಿಯನ್ನು ಹರಕೆ ಹೊತ್ತ ಭಕ್ತರು ಕಾಣಿಕೆ ರೂಪದಲ್ಲಿ ಸ್ವಾಮಿಗೆ ಅರ್ಪಿಸಿದ್ದಾರೆ ಎಂದು ಇ.ಒ ಮೋಹನ್ ತಿಳಿಸಿದ್ದಾರೆ.
ಸತತ ಮಳೆ ಸುರಿದ ಪರಿಣಾಮ ಬಿಳಿಗಿರಿರಂಗನ ಬೆಟ್ಟ ಹಸಿರಿನಿಂದ ಕಂಗೊಳಿಸುತ್ತಿದ್ದು ಭಕ್ತರು, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ. ವಾರಾಂತ್ಯದಲ್ಲಿ ಇಲ್ಲಿನ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಬರುತ್ತಲೇ ಇರುತ್ತಾರೆ.

ರಥೋತ್ಸವಕ್ಕೆ ನೆರೆದಿದ್ದ ಜನಸಾಗರ
ಏಪ್ರಿಲ್ ತಿಂಗಳಿನಲ್ಲಿ ನಡೆದ ರಥೋತ್ಸವಕ್ಕೆ ಸಹಸ್ರಾರು ಜನ ಆಗಮಿಸಿದ್ದರು. ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡದ ಕಾರಣ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನ ಗುಂಬಳ್ಳಿ ಚೆಕ್ ಪೋಸ್ಟ್ ಬಳಿ ವಾಹನ ದಟ್ಟಣೆ ಉಂಟಾಗಿ ಸಾವಿರಾರು ಭಕ್ತರು ರಥೋತ್ಸವದಿಂದ ವಂಚಿತರಾಗಬೇಕಾಯಿತು. ಚಂಪಕಾರಣ್ಯ ಕ್ಷೇತ್ರ ಎಂದು ಹೆಸರಾದ ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೊಡ್ಡ ರಥೋತ್ಸವ ಆರು ವರ್ಷಗಳ ನಂತರ ಇಂದು ವಿಜೃಂಭಣೆಯಿಂದ ನಡೆದಿತ್ತು.
ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಉದ್ಘೋಷ, ಶಂಖ ಹಾಗೂ ಜಾಗಟೆಯ ನಿನಾದಗಳ ನಡುವೆ ಬಿಳಿಗಿರಿ ರಂಗನಾಥಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ರಥೋತ್ಸವಕ್ಕೂ ಮುನ್ನ ವಿಷ್ಣುವಿನ ವಾಹನವೆಂದೇ ಹೇಳಲಾಗುವ ಗರುಡ ಪಕ್ಷಿ ರಥದ ಮೇಲೆ ಆಗಸದಲ್ಲಿ ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ.

ಗರುಡ ಪಕ್ಷಿಯ ವಿಶೇಷತೆ ಏನು?
ದೇವಸ್ಥಾನದ ಜೀರ್ಣೋದ್ಧಾರ, ಹೊಸ ರಥ ನಿರ್ಮಾಣ ಹಾಗೂ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿಯ ದೊಡ್ಡ ಜಾತ್ರೆ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇಲ್ಲಿ ಪ್ರತಿವರ್ಷ ಚೈತ್ರ ಮಾಸದ ಹುಣ್ಣಿಮೆಯ ದಿನ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕೂ ಮುನ್ನ ವಿಷ್ಣವಿನ ವಾಹನ ಎಂದು ಹೇಳಲಾಗುವ ಗರುಡ ಪಕ್ಷಿ ರಥದ ಮೇಲೆ ಆಗಸದಲ್ಲಿ ಪ್ರದಕ್ಷಿಣೆ ಹಾಕುವುದು ಇಲ್ಲಿನ ವಿಶೇಷವಾಗಿದೆ.
ಸ್ವತಃ ವಿಷ್ಣುವೇ ಗರುಡನ ಮೇಲೆ ಕುಳಿತು ಬಂದು ಭಕ್ತರನ್ನು ಹರಸಿ ಹೋಗುತ್ತಾನೆ, ಆದರೆ ವಿಷ್ಣು ನಮ್ಮ ಕಣ್ಣಿಗೆ ಕಾಣುವುದಿಲ್ಲ, ಆತನ ವಾಹನ ಗರುಡ ಪಕ್ಷಿಯ ದರ್ಶನ ಆಗುತ್ತದೆ ಎನ್ನುವು ಭಕ್ತ ನಂಬಿಕೆ ಆಗಿದೆ. ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಭಕ್ತರ ಉದ್ಘೋಷ, ಜಾಗಟೆಯ ಸದ್ದು ಹಾಗು ಶಂಖನಾದ ಮುಗಿಲು ಮುಟ್ಟಿತ್ತು.
ಪ್ರತಿ ವರ್ಷ ರಥೋತ್ಸವಕ್ಕೆ ಯಳಂದೂರು ತಾಲೂಕು ಬೂದಿತಿಟ್ಟು ಗ್ರಾಮಸ್ಥರು ಬಿಳಿಗಿರಿರಂಗನಾಥ ಸ್ವಾಮಿಗೆ ಪಾದುಕೆಗಳನ್ನು ತಯಾರಿಸಿ ಕೊಡುತ್ತಾರೆ. ಬಿಳಿಗಿರಿರಂಗನಾಥ ಸ್ವಾಮಿ ಈ ಪಾದುಕೆಗಳನ್ನು ಮೆಟ್ಟಿ ರಾತ್ರಿ ವೇಳೆ ಅರಣ್ಯದಲ್ಲಿ ಸಂಚಾರ ಮಾಡುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಹಾಗಾಗಿ ಈ ಪಾದುಕೆಗಳನ್ನು ರಥೋತ್ಸವದಲ್ಲಿ ಮೆರವಣಿಗೆ ಮಾಡಲಾಗುತ್ತದೆ.












Click it and Unblock the Notifications