ಬಿಳಿಗಿರಿರಂಗನಬೆಟ್ಟ ರಸ್ತೆ ಅವಘಡಗಳಿಗೆ ಕಾರಣ ಗೊತ್ತಾ?
ಚಾಮರಾಜನಗರ, ಅಕ್ಟೋಬರ್.01: ಚಾಮರಾಜನಗರದ ಪ್ರವಾಸಿ ತಾಣ, ಪವಿತ್ರ ಕ್ಷೇತ್ರವೂ ಆಗಿರುವ ಬಿಳಿಗಿರಿರಂಗನಬೆಟ್ಟಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಯಳಂದೂರು ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಆಗಾಗ್ಗೆ ರಸ್ತೆ ಅವಘಡಗಳಿ ಸಂಭವಿಸುತ್ತಲೇ ಇರುತ್ತದೆ.
ಇದಕ್ಕೆ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೂಚನಾಫಲಕ ಹಾಗೂ ತಡೆಗೋಡೆಗಳಿಲ್ಲದಿರುವುದು ಎಂಬುದಾಗಿ ಜನ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಬಿಳಿಗಿರಿರಂಗನಬೆಟ್ಟಕ್ಕೆ ಹೊರಗಿನಿಂದಲೇ ಹೆಚ್ಚಿನವರು ಭೇಟಿ ನೀಡುತ್ತಿರುತ್ತಾರೆ ಇವರಿಗೆ ಇಲ್ಲಿನ ರಸ್ತೆಯ ಅರಿವಿರುವುದಿಲ್ಲ. ಹೀಗಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುತ್ತದೆ.
ಹತ್ತಾರು ಜನರ ಜೀವ ಉಳಿಸಿದವ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ: ಕೇರಳದಲ್ಲಿ ನಡೆದ ದುರಂತ
ಇದರ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಇಲ್ಲಿನ ರಸ್ತೆಗೆ ಅಪಾಯದ ತಿರುವಿನಲ್ಲಿ ಸೂಚನಾ ಫಲಕ ಹಾಗೂ ತಡೆಗೋಡೆಗಳಿಲ್ಲದಿರುವುದು ಪ್ರಮುಖ ಕಾರಣ ಎಂದು ಹೇಳುತ್ತಿದ್ದಾರೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಸುಮಾರು 575 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ.
ಇಲ್ಲಿ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಪ್ರಮುಖ ಆಕರ್ಷಣೆಯಾಗಿದ್ದು, 2011ರಲ್ಲಿ ಈ ಅರಣ್ಯವನ್ನು ಹುಲಿ ಯೋಜನಾ ವ್ಯಾಪ್ತಿಗೆ ಸೇರಿಸಲಾಗಿದೆ.
ಬಿಳಿಗಿರಿರಂಗನಬೆಟ್ಟಕ್ಕೆ ಯಳಂದೂರಿನಿಂದ ಗುಂಬಳ್ಳಿ ಚೆಕ್ಪೋಸ್ಟ್ ಮಾರ್ಗವಾಗಿ ಹಾಗೂ ಚಾಮರಾಜನಗರದಿಂದ ಹೊಂಡರಬಾಳು ಚೆಕ್ಪೋಸ್ಟ್ ಮೂಲಕ ತೆರಳಲು ರಸ್ತೆಯಿದ್ದು ಈ ಎರಡು ರಸ್ತೆ ಕಡಿದಾಗಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ.
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್: ಸಣ್ಣ ಅಪಘಾತವಷ್ಟೆ, ಕಂಬಕ್ಕೆ ಗುದ್ದಿದ್ದು ನಾವಲ್ಲ
ಅದರಲ್ಲೂ ಪುರಾಣಿ ಪೋಡಿನ ಚೈನ್ ಗೇಟ್ ಬಳಿಯ ತಿರುವು ಮತ್ತು ಗವಿಬೋರೆ ತಿರುವುಗಳು ಅಪಘಾತಕ್ಕೆ ಆಹ್ವಾನ ನೀಡುವ ಸ್ಥಳಗಳಾಗಿವೆ. ಗವಿಬೋರೆ ಬಳಿ ಕಂದಕವಿದ್ದು, ಇಲ್ಲಿ ಬಹಳಷ್ಟು ಅಪಘಾತ ಸಂಭವಿಸಿದೆ.
ಬಿಳಿಗಿರಿರಂಗನಬೆಟ್ಟದ ರಸ್ತೆಗಳಲ್ಲಿ ಲಿಂಗಣ್ಣನಕಟ್ಟೆ, ಪುರಾಣಿ ಪೋಡು ಚೈನ್ ಗೇಟ್, ಗವಿಬೋರೆ ಸೇರಿದಂತೆ ಹಲವು ಕಡೆಗಳಲ್ಲಿನ ತಿರುವುಗಳಲ್ಲಿ ತಡೆಗೋಡೆಗಳ ಅಗತ್ಯವಿದೆ. ಜತೆಗೆ ಸೂಚನಾ ಫಲಕಗಳು ಬೇಕಾಗಿವೆ.
ಅಪಘಾತದಲ್ಲಿ ಸಂಗೀತಗಾರ ಬಾಲಭಾಸ್ಕರ್ ಅವರ ಮಗು ಸಾವು
ಈಗಾಗಲೇ ಬಿಳಿಗಿರಿರಂಗನಬೆಟ್ಟದಿಂದ ಕೆ.ಗುಡಿಗೆ ಹೋಗುವ ರಸ್ತೆ ಬದಿಯ ಅಪಾಯುದ ಸ್ಥಳಗಳು ಹಾಗೂ ತಿರುವುಗಳಲ್ಲಿ ಸ್ಟೀಲ್ ತಡೆಗೋಡೆ ಅಳವಡಿಸಲಾಗಿದೆ. ಇದೇ ರೀತಿ ಬಿಳಿಗಿರಿರಂಗನಬೆಟ್ಟದಿಂದ ಯಳಂದೂರು ಕಡೆಗೆ ಹೋಗುವ ರಸ್ತೆ ಬದಿಯ ತಿರುವುಗಳಲ್ಲೂ ತಡೆಗೋಡೆಗಳನ್ನು ಅಳವಡಿಸಿ ಎನ್ನುವುದು ಹಲವರ ಅಭಿಪ್ರಾಯವಾಗಿದೆ.
ಆದರೆ ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯದ ರಸ್ತೆ ಬದಿಗಳಲ್ಲಿ ತಡೆಗೋಡೆ ನಿರ್ವಿಸಲು ಅವಕಾಶವಿಲ್ಲ. ಒಂದು ವೇಳೆ ತಡೆಗೋಡೆ ನಿರ್ವಿಸಿದರೆ ಪ್ರಾಣಿಗಳು ರಸ್ತೆಗೆ ಬಂದ ವೇಳೆ ವಾಹನಗಳು ಬಂದಾಗ ಕಾಡಿನೊಳಗೆ ಹೋಗಲು ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ವನ್ಯಪ್ರಾಣಿಗಳಿಗೂ ತೊಂದರೆಯಾಗದೆ, ಜನಸಾಮಾನ್ಯರಿಗೂ ಸಮಸ್ಯೆಯಾಗದಂತೆ ಕ್ರಮಗಳನ್ನು ಇಲ್ಲಿ ಕೈಗೊಳ್ಳುವುದು ಅಗತ್ಯವಾಗಿದೆ.