ಚಾಮರಾಜನಗರ: ವಿದ್ಯುತ್, ರೈಲ್ವೆ ಖಾಸಗೀಕರಣ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತ
ಚಾಮರಾಜನಗರ, ನವೆಂಬರ್, 03: ವಿದ್ಯುತ್ ಮತ್ತು ರೈಲ್ವೆ ಇಲಾಖೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ದೇಗುಲದ ಎದುರು ಜಮಾಯಿಸಿದ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಮೆರವಣಿಗೆ ಹೊರಟು ಸಂಪಿಗೆ ರಸ್ತೆಯ ಮೂಲಕ ರೈಲ್ವೆ ನಿಲ್ದಾಣ ತಲುಪಿದರು. ಅಲ್ಲಿಯೂ ಕೂಡ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಎಲ್ಲಾ ಇಲಾಖೆಗಳನ್ನು ಲೂಟಿಕೋರರಿಗೆ ಮಾರಾಟ ಮಾಡಲು ಮುಂದಾಗಿದೆ. ವಿದ್ಯುತ್ನಿಂದ ವರ್ಷಕ್ಕೆ 10 ಸಾವಿರ ಕೋಟಿ ಆದಾಯ ಬರುತ್ತಿದೆ. ಅದನ್ನು ಬಂಡವಾಳದಾರರಿಗೆ ಮಾರಾಟ ಮಾಡಲು ಹೊರಟಿದೆ. ದೇಶದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಸಮಸ್ಯೆ ಎದ್ದುಕಾಣುತ್ತಿದೆ.
ಇಂತಹ ಸಮಯದಲ್ಲಿ ರೈಲು ಮತ್ತು ಬಸ್ ಸಂಖ್ಯೆಗಳನ್ನು ಹೆಚ್ಚು ಮಾಡಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಅದನ್ನು ಮಾಡಲು ಸಾಧ್ಯವಾಗದ ಸರ್ಕಾರ, ಬಂಡವಾಳದಾರನಿಗೆ ಈ ಎರಡು ಇಲಾಖೆಯನ್ನು ಮಾರಾಟ ಮಾಡಲು ಹೊರಟಿದೆ. ಎಲ್ಲಾ ರಾಷ್ಟ್ರೀಕೃತ ಇಲಾಖೆಗಳನ್ನು ಖಾಸಗಿಕರಣ ಮಾಡುವ ಮೂಲಕ ದೇಶದ ಮಾನ ಹರಾಜು ಮಾಡಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗಿಕರಣದಿಂದಾಗಿ ರೈತರ ಪಂಪ್ಸೆಟ್ಗಳಿಗೆ 10 ಎಚ್ಪಿವರೆಗೆ ಸಿಗುತ್ತಿರುವ ಉಚಿತ ವಿದ್ಯುತ್ ಸಿಗುವುದಿಲ್ಲ. ನಗದು ವರ್ಗಾವಣೆ ಹೆಸರಲ್ಲಿ ರೈತರ ಪಂಪ್ಸೆಟ್, ಗೃಹಬಳಕೆ, ನೇಕಾರಿಕೆ ಇನ್ನಿತರೆ ಬಳಕೆಗೆ ಸಿಗುತ್ತಿರುವ ಸಬ್ಸಿಡಿ ಸಿಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಖಾಲಿ ಇರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ಹುದ್ದೆಗಳನ್ನು ಭರ್ತಿ ಮಾಡಬೇಕು. ರೈಲ್ವೆ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ರೂಪಿಸಬೇಕು. ಜನತೆಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇನನ್ನು ರೈಲ್ವೆ ಮತ್ತು ವಿದ್ಯುತ್ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಇದೇ ತಿಂಗಳು 26, 27, 28ರಂದು ರಾಜಭವನ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಮಕೃಷ್ಣ, ಸಿದ್ದರಾಜು, ಸುರೇಶ್, ಸುಜಾತ, ನಾಗಮಣಿ,ಶಾಹಿದಾಬಾನು, ತುಳಸಮ್ಮ, ಪಾರ್ವತಮ್ಮ, ಮೀನಾ, ಮೀನಾಕ್ಷಿ, ಸೂಜಿಯ, ದೇವಮ್ಮ, ಗೌರಿ ಸೇರಿದಂತೆ ಇತರರು ಇದ್ದರು.












Click it and Unblock the Notifications