ಅ.15 ರಂದು ಹಿಂದಿ ಹೇರಿಕೆ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ವಾಟಾಳ್ ನಾಗರಾಜ್
ಚಾಮರಾಜನಗರ, ಸೆಪ್ಟೆಂಬರ್ 19: ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ವಿರೋಧಿಸಿ ಅಕ್ಟೋಬರ್ 15 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಭಾಷೆ ಕಲಿಯುವುದೇ ಬೇರೆ- ಬಲವಂತವಾಗಿ ಹೇರುವುದೇ ಬೇರೆ, ಅಕ್ಟೋಬರ್ 15 ರಂದು ರಾಜ್ಯಾದ್ಯಂತ ಹಿಂದಿ ನಾಮಫಲಕಗಳಿಗೆ ಮಸಿ ಬಳಿದು, ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಮಿಳರು, ತೆಲುಗರು, ಮಲಯಾಳಿ, ಗುಜರಾತಿಗಳು, ಮಾರ್ವಾಡಿಗಳು, ಹಿಂದಿಗರು ಸೇರಿದಂತೆ ಅನ್ಯಭಾಷಿಕರೇ ತುಂಬಿದ್ದಾರೆ. ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಬೆಂಗಳೂರು ಪರಭಾಷಿಗರ ಕೈಗೆ ಹೋಗಿದೆ. ಇಡೀ ಬೆಂಗಳೂರು ಕನ್ನಡ ವಿರೋಧಿಯಾಗಿದೆ. ಇಡೀ ರಾಜ್ಯಕ್ಕೆ ಪರರಾಜ್ಯದ ಜನರು ಬಂದು ಸೇರುತ್ತಿದ್ದಾರೆ. ಕನ್ನಡವನ್ನು ಕೇಳುವವರೇ ಇಲ್ಲದಂತಾಗಿದ್ದು ಪ್ರಾದೇಶಿಕ ಭಾಷೆಗಳನ್ನು ತುಳಿಯುವುದು ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ಅವರ ಗುರಿಯಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿಷ್ ಶಾ ಅವರು ಹಿಂದಿ ಹೇರಲು ಹೊರಟಿದ್ದಾರೆ. ಬಿಜೆಪಿ, ಆರ್ ಎಸ್ಎಸ್ ಅವರಿಗೆ ಹಿಂದಿ ಬೇಕಾಗಿದೆ. ಕನ್ನಡ ಬೇಕಾಗಿಲ್ಲ, ಮಾತೃಭಾಷೆ ಬೇಕಾಗಿಲ್ಲ ಇವೆಲ್ಲದರ ವಿರುದ್ದವಾಗಿ ರಾಜ್ಯದಲ್ಲಿ ಕನ್ನಡ ಕಹಳೆ ಮೊಳಗಿಸುತ್ತೇವೆ ಎಂದರು.
ಚುನಾವಣೆಗೆ ತಯಾರಿ: ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಮುಂದಿನ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದು ಪ್ರತಿ ಭಾನುವಾರ 10 ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡುತ್ತಿದ್ದೇನೆ, ಈ ಬಾರಿ ಜಾತಿ- ಹಣ ಮುಖ್ಯವಲ್ಲ ಕೆಲಸ ಮಾಡುವವರು ಮುಖ್ಯ ಎಂದು ಜನರು ತೀರ್ಮಾನಿಸಿದ್ದು, ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಜತ ಮಹೋತ್ಸವ ಮಾಡಿಲ್ಲ
ಗಡಿ ಜಿಲ್ಲೆಯಾದ ಚಾಮರಾಜನಗರವನ್ನು ರಾಜ್ಯ ಸರಕಾರರ ಕಡೆಗಣಿಸುತ್ತಿದೆ. ಸರಕಾರಕ್ಕೆ ಚಾಮರಾಜನಗರ ಎಂಬ ಜಿಲ್ಲೆ ಇದೆ ಎಂಬುವುದೇ ಗೊತ್ತಿಲ್ಲ. ಬಜೆಟ್ನಲ್ಲಿ ಅನುದಾನ ನೀಡಿಲ್ಲ. ಸರಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುವವರು ಯಾರೂ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಜಿಲ್ಲಾಭಿವೃದ್ದಿ ಬಗ್ಗೆ ಚಿಂತನೆ ನಡೆಸಿಲ್ಲ. ಜಿಲ್ಲೆಯಾಗಿ 25 ವರ್ಷ ತುಂಬಿದೆ. ರಜತ ಮಹೋತ್ಸವ ಮಾಡಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications