ಇಂಟರ್ ನೆಟ್ ಸಮಸ್ಯೆ, ಬಂಡೀಪುರದ ಹುಲಿಯೋಜನೆ ಕಚೇರಿ ಸ್ಥಳಾಂತರ
ಚಾಮರಾಜನಗರ, ಸೆಪ್ಟೆಂಬರ್ 23: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿರುವ ಹುಲಿಯೋಜನೆಯ ನಿರ್ದೇಶಕರ ಕಚೇರಿಯನ್ನು ಸ್ಥಳಾಂತರಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.
ಅರಣ್ಯ ಇಲಾಖೆಯ ಎಲ್ಲ ಕಚೇರಿಗಳು ಈಗಾಗಲೇ ಗುಂಡ್ಲುಪೇಟೆ ಪಟ್ಟಣದಲ್ಲಿವೆ. ಇನ್ನು ಹುಲಿ ಯೋಜನೆಯ ನಿರ್ದೇಶಕರ ಕಚೇರಿ ಮಾತ್ರ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ಸಿಬ್ಬಂದಿಗೂ ತೊಂದರೆಯಾಗುತ್ತಿದೆ. ಜತೆಗೆ ವಿದ್ಯುತ್ ಸೇರಿದಂತೆ ಇನ್ನಿತರ ಕಾರಣಗಳಿಂದ ಅಲ್ಲಿ ಇಂಟರ್ ನೆಟ್ ಸಂಪರ್ಕಕ್ಕೆ ತೊಂದೆಯಾಗುತ್ತಿರುವುದರಿಂದ ಗುಂಡ್ಲುಪೇಟೆಗೆ ವರ್ಗಾಯಿಸುವ ಸಾಧ್ಯತೆಗಳಿವೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಬಂಡೀಪುರದಲ್ಲಿ ಕೇಂದ್ರೀಕರಿಸಿರುವ ಎಲ್ಲ ಚಟುವಟಿಕೆಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಈ ಹಿಂದೆಯೇ ಸೂಚನೆ ನೀಡಿತ್ತಾದರೂ ದಿಢೀರ್ ಆಗಿ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದ ಕಾರಣದಿಂದಾಗಿ ಹಂತ ಹಂತವಾಗಿ ಮಾಡಲಾಗುತ್ತಿದೆ.
ಅದರಂತೆ ಅರಣ್ಯ ಇಲಾಖೆಯು ಪಟ್ಟಣದಲ್ಲಿ ಹುಲಿ ಯೋಜನೆಯ ನಿರ್ದೇಶಕರ ಕಚೇರಿ ಪ್ರಾರಂಭಿಸಲು ಸಿದ್ದತೆ ನಡೆಸುತ್ತಿದೆ. ಈಗಾಗಲೇ ಗುಂಡ್ಲುಪೇಟೆ ಪಟ್ಟಣದಲ್ಲಿ ಸೂಕ್ತ ಕಚೇರಿಗಾಗಿ ಹುಡುಕಾಟವೂ ನಡೆದಿದೆ.
ಇನ್ನು ಸಫಾರಿ ಟಿಕೆಟ್ ಕೌಂಟರ್ ನ್ನು ಮೇಲುಕಾಮನಹಳ್ಳಿ ಬಳಿಯಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯ ಕಚೇರಿ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇವೆಲ್ಲವೂ ಶೀಘ್ರವೇ ಅನುಷ್ಠಾನಕ್ಕೆ ಬರುವ ಸಾಧ್ಯತೆಯೂ ಇದೆ.












Click it and Unblock the Notifications