ಚಾಮರಾಜನಗರದಲ್ಲಿ ಕಾವೇರಿ ಕಿಚ್ಚು: ಖಾಲಿ ಕೊಡ ಪ್ರದರ್ಶಿಸಿ ಕನ್ನಡಪರ ಸಂಘಟನೆಗಳ ಆಕ್ರೋಶ
ಚಾಮರಾಜನಗರ, ಸೆಪ್ಟೆಂಬರ್ 19: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಕ್ರಮ ಖಂಡಿಸಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರ ಜಿಲ್ಲಾಡಳಿತ ಭವನ ಮುಂಭಾಗ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡಿ ತಮಿಳುನಾಡು,ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಕನ್ನಡಿಗರು, ರೈತರ ವಿರೋಧದ ನಡುವೆಯೂ ತಮಿಳುನಾಡಿಗೆ ಸರ್ಕಾರ ನೀರನ್ನು ಹರಿಸುತ್ತಿದೆ, ರಾಜ್ಯ ಸರ್ಕಾರ ತಮಿಳುನಾಡಿಗೆ ಬಕೆಟ್ ಹಿಡಿಯುತ್ತಿದೆ ಎಂದು ವ್ಯಂಗ್ಯ ಮಾಡಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಿಡಿಕಾರಿದರು.
ಕೂಡಲೇ, ತಮಿಳುನಾಡಿಗೆ ಹರಿಸುವ ನೀರನ್ನು ಬಂದ್ ಮಾಡಬೇಕು ಇಲ್ಲದಿದ್ದರೇ ಹೋರಾಟವನ್ನು ಉಗ್ರಗೊಳಿಸಲಾಗುವುದು,ಯಾವುದೇ ಕಾರಣಕ್ಕೂ ರಾಜ್ಯದ ರೈತರ ಹಿತವನ್ನು ಬಲಿ ಕೊಡಬಾರದು, ತಮಿಳುನಾಡು ಕಾವೇರಿ ಕ್ಯಾತೆಯನ್ನು ಮುಂದುವರೆಸುತ್ತಿದ್ದರೇ ಗಡಿ ಬಂದ್ ಮಾಡಿ, ತಮಿಳುನಾಡು ವಾಹನಗಳು ರಾಜ್ಯ ಪ್ರವೇಶ ಮಾಡದಂತೆ ಮಾಡುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ಕೊಟ್ಟರು.
ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಚಾಮರಾಜನಗರದಲ್ಲಿ ಆಕ್ರೋಶ
ಇನ್ನು ಈ ಹಿಂದೆ ಕೂಡ ಚಾಮರಾಜನಗರದಲ್ಲಿ ಕನ್ನಡಪರ ಹೋರಾಟಗಾರರು ಚಾಮರಾಜನಗರದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿರುವ ಕಾವೇರಿ ನಿರ್ವಹಣಾ ಮಂಡಳಿ ನಡೆ ಖಂಡಿಸಿ ಬಾಯಿ ಬಡಿದುಕೊಂಡು ಆಕ್ರೋಶ ಹೊರಹಾಕಿದ್ದರು.
ಕರ್ನಾಟಕದ ಪಾಲಿಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸತ್ತು ಹೋಗಿದೆ ಎಂದು ಘೋಷಣೆ ಕೂಗೂತ್ತ ಕಡ್ಲೆಪುರಿ ಎರಚಿ, ಬಾಯಿ ಬಡಿದುಕೊಂಡು ಕಿಡಿಕಾರಿದರು.ನಡು ರಸ್ತೆಯಲ್ಲೇ ಅರಿಸಿಣ-ಕುಂಕುಮ ಪೂಜೆ ಮಾಡಿ ಕಿಡಿಕಾರಿದರು.ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡಕೂಡದು, ಮುಂದಿನ ದಿನಗಳಲ್ಲಿ ತಮಿಳುನಾಡು ವಾಹನಗಳು ರಾಜ್ಯದಲ್ಲಿ ಓಡಾಡದಂತೆ ಗಡಿ ಬಂದ್ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದರು.












Click it and Unblock the Notifications