ಬರದಿಂದ ತತ್ತರಿಸಿದ್ದ ಚಾಮರಾಜನಗರಕ್ಕೆ ವರವಾದ ಹಿಂಗಾರು
ಚಾಮರಾಜನಗರ, ಅಕ್ಟೋಬರ್ 15: ಜಿಲ್ಲೆಯಾದ್ಯಂತ ಹಿಂಗಾರು ಮಳೆ ಅಬ್ಬರಿಸಿದ್ದರಿಂದ ಒಂದಷ್ಟು ಸಂಕಷ್ಟಗಳ ನಡುವೆಯೂ ಬರಿದಾಗಿದ್ದ ಜಲಾಶಯ, ಕೆರೆಕಟ್ಟೆಗಳು ತುಂಬಿರುವುದು ಜನತೆಯಲ್ಲಿ ಹರ್ಷ ಮೂಡಿಸಿದೆ.
ಮುಳುಗುತ್ತಿದ್ದ ಮಹಿಳೆಯ ರಕ್ಷಣೆ ಮಾಡಿದ ವಿಡಿಯೋ ವೈರಲ್
ಇಲ್ಲಿನ ಬಹುತೇಕ ಜಲಾಶಯ, ಕೆರೆಕಟ್ಟೆಗಳು ಕಳೆದ ಕೆಲವು ವರ್ಷಗಳಿಂದ ಭರ್ತಿಯೇ ಆಗಿರಲಿಲ್ಲ. ಹೀಗಾಗಿ ಬೇಸಿಗೆ ಬಂತೆಂದರೆ ಕೃಷಿ ಮಾಡುವುದಿರಲಿ ಕುಡಿಯಲು ನೀರಿಲ್ಲದೆ ಜನ ಜಾನುವಾರು ಪರಿತಪಿಸುವಂತಾಗಿತ್ತು.
ರಾಜಾಕಾಲುವೆಗೆ ಕೊಚ್ಚಿ ಹೋಗಿದ್ದ ಅರ್ಚಕನ ಮೃತ ದೇಹ ಪತ್ತೆ
ಆದರೆ, ಈ ಬಾರಿ ಸುರಿದ ಮಳೆ ಜಿಲ್ಲೆಯಲ್ಲಿ ಜೀವಜಲವನ್ನು ವೃದ್ಧಿ ಮಾಡಿದೆ. ಕೆರೆಕಟ್ಟೆಗಳು ಭರ್ತಿಯಾಗಿದ್ದು ಮಾತ್ರವಲ್ಲದೆ ಕೋಡಿ ಹರಿದ ಪರಿಣಾಮ ಅಂತರ್ಜಲ ಹೆಚ್ಚಿದೆ. ಈಗಾಗಲೇ ನೂರಾರು ಅಡಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗದೆ ಅಂತರ್ಜಲ ಕುಸಿತಗೊಂಡಿತ್ತು. ಈಗ ಉತ್ತಮವಾಗಿ ಮಳೆ ಬಂದಿರುವುದರಿಂದ ಅಂತರ್ಜಲ ಹೆಚ್ಚಾಗಲಿದೆ ಎಂಬ ವಿಶ್ವಾಸ ರೈತರದ್ದಾಗಿದೆ.
ಜಾನುವಾರುಗಳಿಗೆ ಭರಪೂರ ಮೇವು
ಇನ್ನು ಮಳೆಯಿಲ್ಲದೆ ಬರಡಾದ ಕಾರಣ ಜಾನುವಾರುಗಳಿಗೆ ಮೇವು ಒದಗಿಸಲಾಗದೆ ಪರದಾಡುತ್ತಿದ್ದ ರೈತರು ಈಗ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಜಾನುವಾರುಗಳಿಗೆ ಭರಪೂರ ಮೇವು ಎಲ್ಲೆಲ್ಲೂ ಸಿಗುತ್ತಿದೆ.
ಪ್ರಾಣಿಗಳಿಲ್ಲ ನೀರಿನ ಸಮಸ್ಯೆ
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮಳೆಯಾಗಿದ್ದರಿಂದ ಅರಣ್ಯದೊಳಗೆ ಇರುವ ಕೆರೆಗಳು ಭರ್ತಿಯಾಗಿದ್ದು, ಪ್ರಾಣಿಗಳಿಗೆ ಸಮರ್ಪಕ ನೀರು ಸಿಗುವಂತಾಗಿದೆ. ಅಲ್ಲದೆ ಬೇಸಿಗೆಯಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ.
ಹೂಗ್ಯಂ ಜಲಾಶಯ ಭರ್ತಿ
ಕರ್ನಾಟಕ ತಮಿಳುನಾಡು ಗಡಿಯಲ್ಲಿರುವ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಹೂಗ್ಯಂ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು ಅಲ್ಲಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರತೊಡಗಿದೆ. ಇದರಿಂದ ರೈತರ ಜಮೀನಿಗೆ ನೀರು ನುಗ್ಗಿ ಬೆಳೆಗಳಿಗೆ ಒಂದಷ್ಟು ತೊಂದರೆಯಾಗಿದೆ.
7 ವರ್ಷಗಳ ಬಳಿಕ ತುಂಬಿದ ಸುವರ್ಣಾವತಿ
ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗ ಮಧ್ಯೆ ಬಂಡೆಗಳು ಉರುಳಿದ್ದು, ಭೂ ಕುಸಿತ ಉಂಟಾಗಿದೆ. ಹನೂರು ಸಮೀಪದ ಉಡುತೊರೆ ಹಳ್ಳ ಸಂಪೂರ್ಣವಾಗಿ ಭರ್ತಿಯಾಗಿದೆ. ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ಜಲಾಶಯ ಏಳು ವರ್ಷಗಳ ಬಳಿಕ ತುಂಬಿದೆ.
ಬೇಸಿಗೆಯಲ್ಲಿ ನೀರಿಗಿಲ್ಲ ಸಂಕಷ್ಟ
ಹಾಗೆಯೇ ಚಿಕ್ಕಹೊಳೆ ಜಲಾಶಯವೂ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಳೆಯಿಂದಾಗಿ ಇದೀಗ ಒಂದಷ್ಟು ತೊಂದರೆಯಾದರೂ ಮುಂದಿನ ಬೇಸಿಗೆಯಲ್ಲಿ ರೈತರು ಅನುಭವಿಸುತ್ತಿದ್ದ ನೀರಿನ ಸಂಕಷ್ಟ ನೀಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.