ಮದುಮಲೈ: ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ಬೊಮ್ಮನ್-ಬೆಳ್ಳಿ ದಂಪತಿಯನ್ನು ಭೇಟಿ ಮಾಡಿದ ನರೇಂದ್ರ ಮೋದಿ
ಚಾಮರಾಜನಗರ, ಏಪ್ರಿಲ್, 09: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಏಪ್ರಿಲ್ 09) ಬಂಡೀಪುರದಲ್ಲಿ ಸಫಾರಿ ನಡೆಸಿದರು. ಬಳಿಕ ಮದುಮಲೈನಲ್ಲಿ ಭಾರತಕ್ಕೆ ಪ್ರತಿಷ್ಠಿತ ಆಸ್ಕರ್ ಗರಿ ತಂದುಕೊಟ್ಟ "ಎಲಿಫೆಂಟ್ ವಿಸ್ಪರರ್ಸ್" ಡಾಕ್ಯುಮೆಂಟರಿಯಲ್ಲಿ ಅಭಿನಯಿಸಿರುವ ಬೊಮ್ಮನ್ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ ದಂಪತಿಯನ್ನು ಭೇಟಿ ಮಾಡಿ, ಆನೆ ಶಿಬಿರದಲ್ಲಿ ವಿಹರಿಸಿ ಗಜಪಡೆಗೆ ಕಬ್ಬು ತಿನ್ನಿಸಿ ಗಮನ ಸೆಳೆದಿದ್ದಾರೆ. ನಂತರ T 23 ಹುಲಿ ಸೆರೆ ಹಿಡಿದ ಮೂವರು ಸಿಬ್ಬಂದಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಅರಣ್ಯ ಇಲಾಖೆ ಸಿಬ್ಬಂದಿಗೆ ಸನ್ಮಾನ ಮಾಡಲಿದ್ದಾರೆ.

ಬಂಡೀಪುರ ಗಡಿ ಭಾಗದಿಂದ ಮುದುಮಲೈ ಆನೆ ಶಿಬಿರಕ್ಕೆ 6 ಕಿಲೋ ಮೀಟರ್ ಇದ್ದು, ನರೇಂದ್ರ ಮೋದಿಯವರು ಬಂಡೀಪುರದಲ್ಲಿ ಸಾರಿ ಮುಗಿಸಿ ಇಲ್ಲಿ ಮಾವುತ ದಂಪತಿಯನ್ನು ಭೇಟಿ ಆಗಿದ್ದಾರೆ. ಅಲ್ಲದೆ ಅವರೊಂದಿಗೆ ಸಂವಾದ ನಡೆಸಿ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನೂ ತಿಳಿಸಿದ್ದಾರೆ.
ಬಂಡೀಪುರದಲ್ಲಿ ಮೊದಲ ಬಾರಿ ಸಫಾರಿ
ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ನಡೆಸಿ ಗಮನ ಸೆಳೆದಿದ್ದಾರೆ. ಬಂಡೀಪುರಕ್ಕೆ ಭೇಟಿ ಕೊಡುತ್ತಿರುವ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದು, ಅವರು ಸಫಾರಿಗೆ ಬಂಡೀಪುರವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಅನ್ನುವ ಮಾಹಿತಿ ಇಲ್ಲಿದೆ ತಿಳಿಯಿರಿ.
ಕಾರಣ- 1
ಅವನತಿಯತ್ತ ತಲುಪಿದ್ದ ಹುಲಿಯನ್ನು ಹೇಗಾದರೂ ಮಾಡಿ ಉಳಿಸಲೇಬೇಕೆಂದು 1973ರಲ್ಲಿ ಅಂದಿನ ಪಿಎಂ ಇಂದಿರಾಗಾಂಧಿ ಹುಲಿ ರಕ್ಷಿತಾರಣ್ಯಗಳನ್ನು ಘೋಷಣೆ ಮಾಡಿ ಪ್ರಾಜೆಕ್ಟ್ ಟೈಗರ್ ಯೋಜನೆಯನ್ನು ಆರಂಭಿಸಿದರು. ಅಂದು ಆರಂಭಗೊಂಡ ಹುಲಿ ರಕ್ಷಿತ ಅರಣ್ಯಗಳಲ್ಲಿ ಬಂಡೀಪುರವೂ ಒಂದಾಗಿದ್ದು, ಈಗ ಇದು ಸುವರ್ಣ ಸಂಭ್ರಮದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ.

ಕಾರಣ- 2
ಕೆಲ ತಿಂಗಳುಗಳ ಹಿಂದೆಯಷ್ಟೇ ವಿದ್ಯುತ್ ಶಾಕ್ನಿಂದ ಪ್ರಜ್ಞೆ ಕಳೆದುಕೊಂಡು ಸಾವಿನಂಚಿಗೆ ತಲುಪಿದ್ದ ಆನೆಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಉಳಿಸಿಕೊಂಡಿದ್ದರು. ಇದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ ಬಂಡೀಪುರಕ್ಕೆ ಅಂಟಿಕೊಂಡಂತೆ ಇರುವ ತೆಪ್ಪಕಾಡು ಅರಣ್ಯ ಪ್ರದೇಶಕ್ಕೆ ಭೇಟಿ ಕೊಟ್ಟು ಬೊಮ್ಮ-ಬೆಳ್ಳಿಯನ್ನು ಸನ್ಮಾನಿಸಬೇಕಾದ್ದರಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಕಾರಣ- 3
ಬಂಡೀಪುರ ಹುಲಿ ಸಂರಕ್ಷಿತ ಸುವರ್ಣ ಸಂಭ್ರಮದಲ್ಲಿದೆ. ಜೊತೆಗೆ ಇದು ಹುಲಿ ಸಂರಕ್ಷಿತ ಪ್ರದೇಶದಲ್ಲೇ 100ಕ್ಕೇ 97 ಅಂಕ ಪಡೆದಿದ್ದು, ದೇಶದಲ್ಲೇ ನಂ 1 ಇಲ್ಲವೇ ನಂ 2 ಹುಲಿ ಸಂರಕ್ಷಿತ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎನಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಬಂಡೀಪುರಕ್ಕೆ ಭೇಟಿ ಕೊಡಲಿದ್ದಾರೆ ಎನ್ನಬಹುದು.
ಕಾರಣ- 4
ಕೆಲವೇ ಕೆಲವು ಹುಲಿಗಳ ಅಂತರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಈ ಬಾರಿ ನಂ1 ಸ್ಥಾನಕ್ಕೇರುವ ನಿರೀಕ್ಷೆಯಲ್ಲಿದೆ. ಜೊತೆಗೆ ಕರ್ನಾಟಕದಲ್ಲಿ ಅತ್ಯಧಿಕ ಹುಲಿಗಳಿರುವ ಪ್ರದೇಶವೂ ಬಂಡೀಪುರವೇ ಆಗಿರುವುದರಿಂದ ಬಂಡೀಪುರಕ್ಕೆ ಮೋದಿ ಭೇಟಿ ಕೊಡುತ್ತಿದ್ದಾರೆ.












Click it and Unblock the Notifications