ಬಂಡೀಪುರದಲ್ಲಿ ಜನರು ಹೀಗೆ ಮಾಡೋದು ಎಷ್ಟು ಸರಿ? ಇದಕ್ಕೆ ಹೊಣೆ ಯಾರು?
ಚಾಮರಾಜನಗರ, ಫೆಬ್ರವರಿ 26: ಬಂಡೀಪುರದ ಹುಲಿ ಸಂರಕ್ಷಿತಾರಣ್ಯದೊಳಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಈ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ದಾರಿಯಲ್ಲಿ ವಾಹನಗಳಲ್ಲಿ ಸಾಗುವವರು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಬೇಕೆಂಬ ಸೂಚನೆಯಿದ್ದರೂ ಅದನ್ನು ಗಾಳಿಗೆ ತೂರುತ್ತಿರುವುದು ಕಂಡು ಬರುತ್ತಿದೆ.
ಹೀಗೆ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆಗಳೂ ಹೆಚ್ಚೇ ಇವೆ. ಅರಣ್ಯದೊಳಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸಾಗುವ ವಾಹನ ಚಾಲಕರು ವಾಹನವನ್ನು ದಾರಿಯಲ್ಲಿ ನಿಲ್ಲಿಸುವುದಾಗಲೀ ವನ್ಯ ಪ್ರಾಣಿಗಳಿಗೆ ಆಹಾರಗಳನ್ನು ನೀಡುವುದಾಗಲೀ ಮಾಡುವಂತಿಲ್ಲ. ಆದರೆ ಇಲ್ಲಿ ಯಾವ ನಿಯಮಗಳೂ ಪಾಲನೆಯಾಗುತ್ತಲೇ ಇಲ್ಲ.

ವಾಹನ ನಿಲ್ಲಿಸಿ ಫೋಟೊ ತೆಗೆದುಕೊಳ್ಳುವ ಜನ
ಈ ದಾರಿಯಲ್ಲಿ ಗಾಡಿ ನಿಲ್ಲಿಸಬಾರದು ಎಂಬ ನಿಯಮವಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಪರಿಣಾಮ ದಾರಿಯುದ್ದಕ್ಕೂ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಫೋಟೊ ತೆಗೆಯುವವರೇ ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ಇದಕ್ಕೆ ಕಾರಣ ಅರಣ್ಯ ಇಲಾಖೆ ಸಮರ್ಪಕವಾಗಿ ಗಸ್ತನ್ನು ಅಳವಡಿಸದಿರುವುದು ಎಂಬುದರಲ್ಲಿ ಎರಡು ಮಾತಿಲ್ಲ. ಹೆದ್ದಾರಿಯುದ್ದಕ್ಕೂ ಗಸ್ತು ವ್ಯವಸ್ಥೆ ಮಾಡುವುದು ಸುಲಭದ ಕೆಲಸವಲ್ಲ. ಹಾಗಾಗಿ ಸಾರ್ವಜನಿಕರು ಅದನ್ನು ಅರಿತು ಅರಣ್ಯ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆದರೆ ಹೆಚ್ಚಿನ ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಕಂಡು ಬರುತ್ತಿದೆ.

ಈ ನಡವಳಿಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ
ಬಂಡೀಪುರ ಹುಲಿ ಸಂರಕ್ಷಿತಾರಣ್ಯದೊಳಗೆ ಹಾದುಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನಗಳಲ್ಲಿ ಪ್ರಯಾಣಿಸುವವರು ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ವನ್ಯಜೀವಿಗಳಿಗೆ ಆಹಾರ ಪದಾರ್ಥಗಳನ್ನು ನೀಡುತ್ತಾ ಪ್ರ್ರಾಣಿಗಳ ಮುಂದೆ ಸೆಲ್ಫೀ ತೆಗೆದುಕೊಳ್ಳುವುದು, ಅರಣ್ಯದೊಳಕ್ಕೆ ತೆರಳಿ ಫೋಟೋ ತೆಗೆಯುವುದು, ಊಟ ಮಾಡೋದು, ಕಿರುಚಾಡುವುದು ಹೀಗೆ ಏನಾದರೊಂದು ಕೀಟಲೆ ಮಾಡುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ ನಿರ್ಜನ ಪ್ರದೇಶಗಳಲ್ಲಿ ಕೆಳಗಿಳಿದು ಮೂತ್ರ ವಿಸರ್ಜನೆ ಮಾಡುವುದು, ಮದ್ಯಪಾನ ಮಾಡಿ ಖಾಲಿ ಬಾಟಲನ್ನು ಅರಣ್ಯಕ್ಕೆ ಎಸೆಯುವುದು ಹೀಗೆ ಸಾಕಷ್ಟು ತೊಂದರೆಗಳನ್ನು ನೀಡುತ್ತಾರೆ.

ಸಮರ್ಪಕ ಗಸ್ತಿಲ್ಲ ಎಂಬುದು ಪ್ರಾಣಿಪ್ರಿಯರ ಆರೋಪ
ಇದೆಲ್ಲ ನಡೆಯಲು ಸಮರ್ಪಕವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಮಾಡದಿರುವುದೇ ಕಾರಣ ಎಂಬ ಆರೋಪವನ್ನು ಪ್ರಾಣಿಪ್ರಿಯರು ಮಾಡುತ್ತಾರೆ. ರಾಷ್ಟ್ರೀಯ ಹೆದ್ದಾರಿ 67ರ ಮೇಲುಕಾಮನಹಳ್ಳಿಯಿಂದ ಕೆಕ್ಕನಹಳ್ಳ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ವರೆಗೆ 20 ಕಿ.ಮೀ ಹಾಗೂ ರಾಷ್ಟ್ರೀಯ ಹೆದ್ದಾರಿ 766ರ ಮದ್ದೂರಿನಿಂದ ಮೂಲೆಹೊಳೆವರೆಗೆ 20 ಕಿ.ಮೀ.ವರೆಗೆ ವಾಹನಗಳು ಅರಣ್ಯದೊಳಗೆ ಸಂಚರಿಸುತ್ತವೆ. ಹೀಗಿದ್ದರೂ ಅರಣ್ಯ ಇಲಾಖೆ ಆಗಾಗ್ಗೆ ಗಸ್ತು ತಿರುಗುತ್ತಾ ಇಲ್ಲಿ ನಡೆಯುವ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು.

ಅವಘಡಗಳು ನಡೆಯುತ್ತಲೇ ಇವೆ
ಆದರೆ ಗಸ್ತು ಸಮರ್ಪಕವಾಗಿ ನಡೆಯದ ಕಾರಣ ಇಲ್ಲಿ ಆಗಿಂದಾಗ್ಗೆ ಅವಘಡಗಳು ನಡೆಯುತ್ತಲೇ ಇರುತ್ತವೆ. ಸದ್ಯ ಎರಡು ಬೈಕ್ ಮತ್ತು ಒಂದು ಜೀಪ್ ನಲ್ಲಿ ಐದರಿಂದ ಆರು ಜನ ಸಿಬ್ಬಂದಿ ಮೇಲುಕಾಮನಹಳ್ಳಿ ಗೇಟ್ ನಿಂದ ಕೆಕ್ಕನಹಳ್ಳ ಗೇಟ್ ವರೆಗೂ ಗಸ್ತು ಮಾಡಿ ಹೆದ್ದಾರಿಯಲ್ಲಿ ವಾಹನ ನಿಲ್ಲಿಸುವವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೂ ಏನೂ ಪ್ರಯೋಜನವಾಗುತ್ತಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅವಶ್ಯಕವಾಗಿದೆ












Click it and Unblock the Notifications