ಗುಂಡ್ಲುಪೇಟೆ ವ್ಯಾಪ್ತಿಯಲ್ಲಿಲ್ಲ ನೀರು, ತಪ್ಪುತ್ತಿಲ್ಲ ಜನರ ಗೋಳು
ಚಾಮರಾಜನಗರ, ಫೆಬ್ರವರಿ 12:ಬೇಸಿಗೆ ಬರುತ್ತಿದ್ದಂತೆಯೇ ಗುಂಡ್ಲುಪೇಟೆ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತಾತ್ವಾರವುಂಟಾಗುವುದು ಹೊಸತೇನಲ್ಲ. ಆದರೆ ಈ ಬಾರಿ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿಯುವ ನೀರಿಗಾಗಿ ಜನ ಪರದಾಡುವುದು ಕಂಡು ಬರುತ್ತಿದೆ.
ಇಲ್ಲಿನ ಬೇಗೂರು ಸುತ್ತಮುತ್ತಲ ಗ್ರಾಮಗಳ ಜನ ಪ್ರತಿವರ್ಷವೂ ಒಂದಲ್ಲ ಒಂದು ಕಾರಣಕ್ಕೆ ಪರದಾಡುತ್ತಲೇ ಇರುತ್ತಾರೆ. ನೀರಿಗಾಗಿ ಕಿ.ಮೀ.ಗಟ್ಟಲೆ ಬಿಂದಿಗೆ, ಬಕೆಟ್ ಹಿಡಿದುಕೊಂಡು ಹೋಗುತ್ತಾರೆ. ಪ್ರತಿ ಮನೆಯಲ್ಲೂ ನೀರು ತರುವುದೇ ಒಂದು ಸಾಹಸದ ಕೆಲಸವಾಗಿ ಪರಿಣಮಿಸುತ್ತದೆ.
ಉಪ ಚುನಾವಣೆ ವೇಳೆ ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆ ರೂಪಿಸುವ ಭರವಸೆಗಳು ಬಂದಿದ್ದರೂ ಅದು ಕಾರ್ಯಗತವಾದಂತೆ ಕಾಣುತ್ತಿಲ್ಲ. ಇಲ್ಲಿಗೆ ಕಬಿನಿ ನೀರು ಸರಬರಾಜಾಗುತ್ತದೆಯಾದರೂ ಪೈಪ್ ಒಡೆಯುವುದು ಇನ್ನೇನಾದರೂ ತೊಂದರೆಯಾಗಿ ನೀರು ಬಾರದೆ ಪರದಾಡುವುದು ಮಾಮೂಲಿಯಾಗಿದೆ.
ಈ ಸಂದರ್ಭದಲ್ಲಿ ಹತ್ತಿರದ ರೈತರ ಕೊಳವೆ ಬಾವಿಯ ನೀರೇ ಗತಿಯಾಗುತ್ತದೆ. ಜತೆಗೆ ನೀರಿಗಾಗಿ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಬಂದೊದಗುತ್ತದೆ. ಇಲ್ಲಿ ನೀರಿನ ಸಮಸ್ಯೆ ಆಗಿಂದಾಗ್ಗೆ ತಲೆದೋರುತ್ತಲೇ ಇದ್ದರೂ ಚುನಾಯಿತ ಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಶಾಶ್ವತವಾಗಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಕ್ರಮ ಕೈಗೊಂಡಿಲ್ಲ.
ಹೀಗಾಗಿ ಆಗಿಂದಾಗ್ಗೆ ನೀರಿನ ಸಮಸ್ಯೆಯಿಂದ ಜನ ಪರದಾಡುವುದು ಮಾತ್ರ ತಪ್ಪಿಲ್ಲ.

ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಲ್ಲ
ಇನ್ನು ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಕೆಲಸಕ್ಕೆ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಮುಂದಾಗಿಲ್ಲ. ಇದರಿಂದ ಸಮಸ್ಯೆಗೆ ಪರಿಹಾರ ಸಿಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಕೇವಲ ಕಬಿನಿ ನೀರಿನ ಸರಬರಾಜನ್ನೇ ನೆಚ್ಚಿಕೊಂಡಿರುವ ಅಧಿಕಾರಿಗಳು ಹೊಸದಾಗಿ ಬೋರ್ವೆಲ್ ಕೊರೆಯಿಸಿ ಸಮರ್ಪಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿಲ್ಲ.

ರಾಟೆ ಬಾವಿಗಳನ್ನು ಆಶ್ರಯಿಸುವಂತಾಗಿದೆ
ಇದರಿಂದಾಗಿ ಕೂಲಿ ಕಾರ್ಮಿಕ ಮಹಿಳೆಯರು ಜೀವನ ನಿರ್ವಹಣೆಗಾಗಿ ಕೆಲಸಕ್ಕೆ ಹೋಗುವುದೋ ಅಥವಾ ನೀರಿಗೆ ಬಿಂದಿಗೆ ಹಿಡಿದು ಕಿ.ಮೀ.ಗಟ್ಟಲೆ ಅಲೆಯುವುದೋ ಎಂಬ ಗೊಂದಲದಲ್ಲಿದ್ದಾರೆ. ಬೇಗೂರು ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಎರಡು ಕೈ ಬೋರ್ವೆಲ್, ಎರಡು ರಾಟೆ ಬಾವಿಗಳನ್ನು ಆಶ್ರಯಿಸುವಂತಾಗಿದೆ.

ಬಾವಿಯಲ್ಲಿನ ನೀರೇ ಗತಿ
ಈ ಹಿಂದೆ ಗ್ರಾಮದಲ್ಲಿ ಅಂತರ್ಜಲ ಬತ್ತಿ ಹೋಗಿದ್ದ ಕಾರಣದಿಂದಾಗಿ ಬೋರ್ವೆಲ್ ಗಳು ಸ್ಥಗಿತಗೊಂಡಿದ್ದವು. ಆದರೆ ಈ ಬಾರಿ ಉತ್ತಮ ಮಳೆಯಾಗಿದ್ದು, ಅಂತರ್ಜಲದಲ್ಲಿ ಸ್ವಲ್ಪ ಸುಧಾರಣೆಗೊಂಡಿದ್ದು. ಬಾವಿಯಲ್ಲಿನ ನೀರನ್ನೇ ಗ್ರಾಮದ ಜನರು ನೆಚ್ಚಿಕೊಂಡಿದ್ದಾರೆ.

ಇನ್ನಷ್ಟು ತೊಂದರೆ ಖಚಿತ
ಗ್ರಾಮದ ಹೊಸ ಬಡಾವಣೆಯಲ್ಲಿ ನೀರಿಗಾಗಿ ತಾ.ಪಂ ವತಿಯಿಂದ ಹೊಸದಾಗಿ ಬೋರ್ ಕೊರೆಯಿಸಿ ವರ್ಷಗಳೇ ಸಂದಿವೆ, ಆದರೆ ಇದಕ್ಕೆ ಕೈಪಂಪ್ ಆಗಲೀ ಅಥವಾ ಮೋಟಾರ್ನ್ನಾಗಲೀ ಅಳವಡಿಸದೇ ಇರುವುದರಿಂದ ಗ್ರಾಮಸ್ಥರ ಉಪಯೋಗಕ್ಕೆ ಬಾರದಂತಾಗಿದೆ. ಈಗಿನಿಂದಲೇ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಇಲ್ಲಿನ ಜನ ಕುಡಿಯುವ ನೀರಿಗಾಗಿ ಇನ್ನಷ್ಟು ತೊಂದರೆಪಡುವುದಂತು ಖಚಿತವಾಗಿದೆ.












Click it and Unblock the Notifications