ಪಾಳುಬಿದ್ದ ಪರವಾಶು ದೇಗುಲದ ಅಭಿವೃದ್ಧಿ ಕಾರ್ಯ ಯಾವಾಗ?
ಚಾಮರಾಜನಗರ, ಆಗಸ್ಟ್ 26: ಇವತ್ತಿಗೂ ಬಹುತೇಕ ಕಡೆಗಳಲ್ಲಿ ಐತಿಹಾಸಿಕ ದೇವಾಲಯಗಳು ಹಲವು ಕಾರಣಗಳಿಗೆ ಪಾಳು ಬಿದ್ದಿರುವುದನ್ನು ಕಾಣಬಹುದು. ಇಂತಹ ದೇವಾಲಯಗಳ ಪೈಕಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಳಿಯಿರುವ ಪರವಾಶು ದೇವಾಲಯವೂ ಒಂದು.
Recommended Video
ಪರವಾಶು ದೇವಾಲಯ ಐದಾರು ಶತಮಾನಗಳಷ್ಟು ಹಳೆಯದಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಪಾಳು ಬಿದ್ದಿದೆ. ಇದರ ಬಗ್ಗೆ ಪ್ರಾಚೀನ ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಕೂಡ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ದೇವಾಲಯವು ಊರ ಹೊರಗೆ ಇರುವುದಲ್ಲದೆ, ಪಾಳು ಬಿದ್ದಿರುವ ಕಾರಣದಿಂದ ಕೆಲವರು ಈ ದೇವಾಲಯದಲ್ಲಿ ಏನಾದರೂ ನಿಧಿ ಇರಬಹುದೆಂಬ ಅನುಮಾನದಿಂದ ಅಗೆದು ನೋಡುವ ಕಾರ್ಯಕ್ಕೂ ಮುಂದಾಗಿದ್ದಾರೆ.
ಮತ್ತೊಂದು ಮಳೆಗಾಲ ಬಂದರೂ ಹೀಗೇ ಇದೆಯಲ್ಲ ಮಡಿಕೇರಿ ಅರಮನೆ
ಇದು ಹೀಗೆಯೇ ಮುಂದುವರೆದರೆ ದೇವಾಲಯದ ಅಸ್ತಿತ್ವವೇ ಇಲ್ಲದಂತಾದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ದೇವಾಲಯದ ಸುತ್ತಲೂ ಕುರುಚಲು ಕಾಡು ಬೆಳೆದಿದ್ದು, ಕೆಲವೆಡೆ ದೇಗುಲದ ಭಾಗ ಕುಸಿದು ಬಿದ್ದಿದೆ. ಆದರೆ ಇದರತ್ತ ಗಮನ ಕೊಡುವವರು ಇಲ್ಲವಾಗಿದ್ದಾರೆ. ಒಂದು ವೇಳೆ ಈ ದೇವಾಲಯವನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡಿದ್ದೇ ಆದರೆ ಪ್ರವಾಸೋದ್ಯಮದ ದೃಷ್ಠಿಯಿಂದಲೂ ದೇಗುಲ ಹೆಸರುವಾಸಿಯಾಗಲಿದೆ. ದೇವಾಲಯದ ಸುತ್ತಲೂ ಬಹಳಷ್ಟು ಜಾಗವಿರುವುದರಿಂದ ಉದ್ಯಾನ ನಿರ್ಮಾಣ ಮಾಡಿದರೆ ದೇಗುಲಕ್ಕೆ ಮತ್ತಷ್ಟು ಆಕರ್ಷಣೆ ಬರಲಿದೆ.
2013ರಲ್ಲಿ ಅಂದಿನ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಅಮರನಾರಾಯಣ ಎಂಬುವರು ಖುದ್ದು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಸ್ಸಂಜೆ ಕಾರ್ಯಕ್ರಮ ನಡೆಸಿ ಜಿರ್ಣೋದ್ಧಾರದ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಅವರು ವರ್ಗಾವಣೆ ಆಗಿ ಹೋದ ನಂತರ ಅದು ಮೂಲೆಗುಂಪಾಗಿ ದೇವಸ್ಥಾನ ಪಾಳು ಬಿದ್ದಿತು.
ಕಳೆದ ಜನವರಿಯಲ್ಲಿ ಗುಂಡ್ಲುಪೇಟೆ ತಹಶೀಲ್ದಾರ್ ನಂಜುಂಡಯ್ಯ ಅವರು ದೇವಾಲಯಕ್ಕೆ ಭೇಟಿ ನೀಡಿ ದೇಗುಲಕ್ಕೆ ಪುನರ್ಜೀವ ನೀಡುವತ್ತ ಗಮನಹರಿಸಿದ್ದರು. ಆದರೆ ಕೊರೊನಾ ಸೋಂಕು ಇನ್ನಿತರ ಒತ್ತಡಗಳಿಂದಾಗಿ ಸದ್ಯಕ್ಕೆ ಕಾರ್ಯ ನನೆಗುದಿಗೆ ಬಿದ್ದಿದೆ. ಈ ದೇಗುಲ ತನ್ನ ಅಸ್ತಿತ್ವ ಕಳೆದುಕೊಳ್ಳುವ ಮುನ್ನ ಸಂಬಂಧಿಸಿದ ಪ್ರಾಚೀನ ಮತ್ತು ಪುರಾತತ್ವ ಇಲಾಖೆ ಇತ್ತ ಗಮನಹರಿಸಿ ದೇಗುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವ ಕೆಲಸವನ್ನು ಮಾಡಬೇಕಿದೆ.