ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!
ಚಾಮರಾಜನಗರ, ಅಕ್ಟೋಬರ್.22: ಈ ಬಾರಿ ಸುರಿದ ಮಳೆಯಿಂದಾಗಿ ಬಂಡೀಪುರ ಹಸಿರು ಕಾನನಗಳಿಂದ ಕಂಗೊಳಿಸುತ್ತಿದ್ದರೆ, ಅದರೊಳಗೆ ವನ್ಯಪ್ರಾಣಿಗಳ ಚಿನ್ನಾಟ, ಪಕ್ಷಿಗಳ ಕಲರವ, ಹುಲಿ ಘರ್ಜನೆ, ಆನೆಗಳು ಘೀಳಿಡುವ ಸದ್ದು ರೋಮಾಂಚನಗೊಳಿಸುತ್ತಿದೆ.
ದಸರಾ ರಜೆಯಲ್ಲಿ ಬಂಡೀಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸಫಾರಿಗೆ ತೆರಳುವವರಿಗೆ ಹುಲಿ, ಚಿರತೆ, ಆನೆ, ಜಿಂಕೆ ಹೀಗೆ ಹಲವು ಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು ಮೈಪುಳಕಗೊಳಿಸುತ್ತಿವೆ. ಮೊದಲೆಲ್ಲ ಹುಲಿಗಳು ಕಾಣುವುದೇ ಅಪರೂಪವಾಗಿತ್ತು.
ಆದರೆ ಇದೀಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿ ಕಾಣಿಸುವುದು ಖುಷಿಯ ವಿಚಾರವಾಗಿದೆ. ಈ ನಡುವೆ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ಒಂದೇ ಕಡೆ ನಾಲ್ಕು ಹುಲಿಗಳು ನೀರು ಕುಡಿಯುತ್ತಿದ್ದ ದೃಶ್ಯ ಕಂಡು ಬಂದಿದ್ದು ಸಂತಸಗೊಂಡಿದ್ದಾರೆ. ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಅದೀಗ ವೈರಲ್ ಆಗಿದೆ.

ಬಂಡೀಪುರ ಸುತ್ತ ಮುತ್ತ ಉತ್ತಮ ಮಳೆಯಾಗಿರುವ ಹಿನ್ನಲೆಯಲ್ಲಿ ಕೆರೆಗಳೆಲ್ಲಾ ತುಂಬಿದ್ದು, ಪ್ರಾಣಿಗಳಿಗೆ ನೀರಿನ ಸಮಸ್ಯೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಕಾಡಿನೊಳಗೆ ಓಡಾಡುವ ಹುಲಿಗಳು ಕೆರೆಯಂಗಳಕ್ಕೆ ಬಂದು ನೀರು ಕುಡಿದು ಕುಟುಂಬ ಸಮೇತವಾಗಿ ಕಾಣಿಸಿಕೊಳ್ಳುವುದು ತೀರಾ ವಿರಳ.
ಆದರೆ ಇತ್ತೀಚೆಗೆ ಇಂತಹ ಅಪರೂಪದ ದೃಶ್ಯಕ್ಕೆ ನೂರಾರು ಪ್ರವಾಸಿಗರು ಸಾಕ್ಷಿಯಾಗಿದ್ದಾರೆ. ಬಂಡೀಪುರದಲ್ಲಿ ಸಫಾರಿಗೆ ತೆರಳುವವರಿಗೆ ಹುಲಿಗಳು ಕಾಣಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪ್ರಾಣಿಗಳನ್ನು ನೋಡುವ ಕುತೂಹಲದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಹಾಗೆಯೇ ಮೈಸೂರು ದಸರಾ ಮುಗಿಸಿಕೊಂಡು ಬಂಡೀಪುರಕ್ಕೆ ಭೇಟಿ ನೀಡಿ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಒಟ್ಟಾರೆ ವನ್ಯಪ್ರಾಣಿಗಳು ಎಲ್ಲೆಂದರಲ್ಲಿ ಕಾಣುತ್ತಿರುವುದು ಎಲ್ಲರಿಗೂ ಖುಷಿಕೊಡುತ್ತಿದೆ.












Click it and Unblock the Notifications