ಸಂಸದ ಪ್ರತಾಪ್ ಸಿಂಹ ಮಾತಿಗೆ ತೂಕ, ಮಾನ್ಯತೆ ಇಲ್ಲ: ಎಚ್.ಸಿ.ಮಹದೇವಪ್ಪ ಹೀಗೆ ಅಂದಿದ್ದೇಕೆ?
ಚಾಮರಾಜನಗರ, ಜೂನ್, 13: ಕೆಲವರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಸಂಸದ ಪ್ರತಾಪ್ ಸಿಂಹ ಅವರ ಮಾತಿಗೆ ತೂಕ, ಮಾನ್ಯತೆ, ಗಂಭೀರತೆ ಇಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ಚಾಮರಾಜನಗರದಲ್ಲಿ ಹೇಳಿದ್ದಾರೆ. ಹಾಗೆಯೇ ನಾವು ನೀಡಿರುವ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಬಗ್ಗೆ ಪ್ರತಾಪ್ ಸಿಂಹ ಅವರ ಬಳಿ ತಿಳಿದುಕೊಳ್ಳುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ, ಮಾಡಿದ್ದಾರೆ ಎಂದು ಹೇಳಲಿ, ಹೊಂದಾಣಿಕೆ ರಾಜಕಾರಣ ಮಾಡುವವರು ಯಾರೆಂದು ಕಾಂಗ್ರೆಸ್ಗೆ ಗೊತ್ತಿಲ್ಲ ಎಂದು ಹೆಳುವ ಮೂಲಕ ಮೈಸೂರು, ಕೊಡಗು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.

ಇನ್ನು ಹಣದ ಕ್ರೋಢಿಕರಣ ಹಣಕಾಸು ಇಲಾಖೆಗೆ ಸಂಬದಿಸಿದ್ದು, ಸಿದ್ದರಾಮಯ್ಯ ಓರ್ವ ಮೇಧಾವಿ ಆರ್ಥಿಕ ತಜ್ಞರು. ಅವರು ಯೋಜನೆ ಮಾಡುತ್ತಾರೆ. ಆದರೆ ನಾವು ಹೇಗೆ ಹಣವನ್ನು ಹೊಂದಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹಗೆ ಹೇಳುವ ಅಗತ್ಯವಿಲ್ಲ ಎಂದು ತಿರುಗೇಟು ಕೊಟ್ಟರು.
ನಂತರ ವಿದ್ಯುತ್ ದರ ಏರಿಕೆ ಸಂಬಂಧ ಪ್ರತಿಕ್ರಿಯಿಸಿ, ವಿದ್ಯುತ್ ದರವನ್ನು ಏರಿಕೆ ಮಾಡಿದ್ದು ಬಿಜೆಪಿಯವರು. ಈಗ ಅವರಿಗೆ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಬೇಕಾದಾಗ ಒಂದು, ಬೇಡದಿದ್ದಾಗ ಒಂದು ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ. ಅವರೇ ವಿದ್ಯುತ್ ದರ ಏರಿಕೆ ಮಾಡಿ ಈಗ ಅವರೇ ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಯಾವ ಸಮಸ್ಯೆಯೂ ಇಲ್ಲ
ಫಾಸ್ಟ್ ಟ್ಯಾಗ್ ವರ್ಕ್ ಆಗುತ್ತಿದೆ ಯಾವ ಸಮಸ್ಯೆಯೂ ಇಲ್ಲ. ಸಿಸ್ಟಮ್ ಸಮಸ್ಯೆ ಇಲ್ಲ, ಟೋಲ್ ಸಂಗ್ರಹದ ಆರಂಭದಲ್ಲಿ ಇತ್ತು, ಈಗ ಈ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದೇ ಇದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ ಎಂದು ಬೆಂಗಳೂರು-ಮೈಸೂರು ರಸ್ತೆಯ ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ಸಮಸ್ಯೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಮಾಡುವುದು ಸಹಜ. ಈ ಹೈವೇಗೆ ಏಪ್ರಿಲ್ನಲ್ಲೇ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಹೀಗಾಗಿ ಈಗ 22% ಏರಿಕೆ ಆಗಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಬಿಲ್ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿಗರೇ ರಾಜ್ಯದ ಜನರ ದಾರಿ ತಪ್ಪಿಸಬೇಡಿ. ಸ್ವಾಯತ್ತ ಸಂಸ್ಥೆಯಾಗಿರುವ ಕೆಇಆರ್ಸಿ ದರ ಏರಿಕೆಗೆ ಶಿಫಾರಸ್ಸು ಮಾಡಿದೆ. ಅದನ್ನು ತಡೆಯುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಕಳೆದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ. ಆದರೆ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವ ಆದೇಶಕ್ಕೆ ಯಾಕೆ ತಡೆ ಹಾಕುವುದಿಲ್ಲ? ಎಂದು ಪ್ರಶ್ನಿಸಿದರು.
ಎಲ್ಲಿಂದ ನಿಮಗೆ ಕಮಾಯಿ ಆಗುತ್ತೋ, ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತೋ? ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ? ಕಾಂಗ್ರೆಸ್ ನವರು ಲೂಟಿ ಮಾಡಲು ಬಂದಿದ್ದಾರೆ. ನಿಮ್ಮ ಜನ ವಿರೋಧಿ ಮುಖ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಈ ಸರ್ಕಾರ ಒಂದಷ್ಟು ಜನರ ಸುಲಿಗೆ, ಲೂಟಿ ಮಾಡಲು ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.












Click it and Unblock the Notifications