ಮಣ್ಣಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ; ಬೆಳೆಗಾರರು ಸಂಕಷ್ಟದಲ್ಲಿ
ಚಾಮರಾಜನಗರ, ಜೂನ್ 07; ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನಲ್ಲಿ ದರ ಕುಸಿತಕ್ಕೆ ಸೆಡ್ಡು ಹೊಡೆದಿದ್ದ ಪ್ರಗತಿಪರ ರೈತರೊಬ್ಬರು ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿ ನೂತನ ಅವಿಷ್ಕಾರಕ್ಕೆ ಸಾಕ್ಷಿಯಾಗಿದ್ದರು. ಆದರೆ ನಮ್ಮ ರಾಜ್ಯದಲ್ಲಿ ಸಾವಿರಾರು ರೈತರು ಕಲ್ಲಂಗಡಿ ಬೆಳೆದು ಈಗಲೂ ಕೈ ಸುಟ್ಟುಕೊಳ್ಳುತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಚಾಮರಾಜನಗರ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆದಿರುವ ರೈತರದ್ದು. ಲಾಕ್ಡೌನ್ನಿಂದಾಗಿ ಬೇಡಿಕೆ ಕುಸಿದು ಕಲ್ಲಂಗಡಿ ಹಣ್ಣನ್ನು ಕೆಜಿಗೆ 1 ರೂಪಾಯಿನಂತೆಯೂ ಕೊಳ್ಳುವವರು ಇಲ್ಲದೆ ಹೊಲದಲ್ಲೇ ಹಣ್ಣು ಮಣ್ಣಾಗುತ್ತಿದೆ. ಹನೂರು ತಾಲ್ಲೂಕಿನ ಚೆನ್ನಲಿಂಗನಹಳ್ಳಿಯ ರೈತ ಪ್ರಸನ್ನ ತಮ್ಮ ಏಳು ಎಕರೆ ಜಮೀನಿನ ಪೈಕಿ 4 ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದರೆ ದರ ಇಲ್ಲದೆ ಇರುವ ಕಾರಣದಿಂದ ಕಟಾವು ಮಾಡಲೇ ಹೋಗಿಲ್ಲ.
"ಲಕ್ಷಾಂತರ ಖರ್ಚು ಮಾಡಿ ಬೆಳೆದ ಹಣ್ಣು ಇಂದು ಮಣ್ಣು ಪಾಲಾಗುತ್ತಿದೆ. ಒಂದು ವರ್ಷ ಫಸಲು ನಷ್ಟವಾದರೆ ಸರಿದೂಗಿಸಬಹುದು. ಆದರೆ ಪ್ರತಿ ವರ್ಷ ಇದೇ ರೀತಿ ನಷ್ಟವಾಗುತ್ತಾ ಹೋದರೆ ರೈತರು ಬದುಕುವುದಾದರೂ ಹೇಗೆ?" ಎಂದು ಅವರು ಕೇಳುತ್ತಾರೆ.

ಖರೀದಿಸುವವರಿಲ್ಲದೆ ನಿತ್ಯ ನೂರಾರು ಹಣ್ಣುಗಳು ಉದುರಿ ಕೊಳೆಯುತ್ತಿವೆ. ಕಳೆದ ವರ್ಷವೂ ಲಾಕ್ಡೌನ್ನಿಂದಾಗಿ ನಷ್ಟ ಅನುಭವಿಸಿದ್ದ ಇವರು ಈ ಬಾರಿಯಾದರೂ ಉತ್ತಮ ಆದಾಯ ಬರಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಈ ಬಾರಿಯೂ ಸಾರಿಗೆ ಮುಷ್ಕರ, ಜನತಾ ಕರ್ಫ್ಯೂ, ಕೋವಿಡ್ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋವಿಡ್ ನಿರ್ಬಂಧ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಎರಡು ತಿಂಗಳ ಹಿಂದೆ ಕಲ್ಲಂಗಡಿ ಬೆಳೆದರೆ ಉತ್ತಮ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಿಂದ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆಸೆಯನ್ನು ನಿರಾಶೆಗೊಳಿಸಿದೆ. ತಮಿಳುನಾಡು ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆಯಿದ್ದರೂ ವಾಹನ ಸಂಚಾರ ನಿಷೇಧವಾಗಿದ್ದರಿಂದ ಇವರ ಹಣ್ಣು ಖರೀದಿಗೆ ಯಾರು ಮುಂದಾಗಲಿಲ್ಲ. ಅಂತರರಾಜ್ಯ ಹಾಗೂ ಅಂತರ ಜಿಲ್ಲೆ ವಾಹನಗಳ ಸಂಚಾರ ನಿಷೇಧವಾಗಿತ್ತು. ಆದರೆ ಸರಕು ವಾಹನಗಳಿಗೆ ಅವಕಾಶ ಇದ್ದರೂ ಇವರು ಬೆಳೆದಿದ್ದ ಹಣ್ಣು ಖರೀದಿಸಲು ಮುಂದಾಗಲಿಲ್ಲ.
"ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಇದಕ್ಕಾಗಿ ಮೂರು ಲಕ್ಷ ಬಂಡವಾಳವೂ ಹಾಕಿದ್ದೆ. ಕನಿಷ್ಠ ಕೆ. ಜಿ.ಗೆ 10 ರೂ.ಗೆ ಹೋಗಿದ್ದರೂ ಬಂಡವಾಳವಲ್ಲದೇ 2 ಲಕ್ಷ ಲಾಭ ಬರುತ್ತಿತ್ತು. ಆದರೆ, ಈ ಲಾಕ್ಡೌನ್ನಿಂದಾಗಿ ಹಣ್ಣನ್ನು ಕೇಳುವವರೇ ಗತಿಯಿಲ್ಲದಂತಾಗಿದೆ. ಹೀಗಾದರೆ ನಾವು ಕೃಷಿ ಮಾಡುವುದಾದರೂ ಹೇಗೆ ಎಂಬುದೇ ಚಿಂತೆಯಾಗಿದೆ" ಎಂದು ಪ್ರಸನ್ನ ಹೇಳಿದರು.
ಇವರು ಕೈ ಸುಟ್ಟುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ನಾಲ್ಕು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಬಿರುಗಾಳಿಗೆ ಸಿಕ್ಕಿ ಮರಗಳೆಲ್ಲವೂ ನೆಲಕಚ್ಚಿದ್ದವು. ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಂದ ವರದಿ ತಯಾರಿಸಿ ತಹಶೀಲ್ದಾರ್ ಮೂಲಕ ತೋಟಗಾರಿಕೆ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರು. ಆದರೆ, ಆರು ತಿಂಗಳಾದರೂ ಪರಿಹಾರ ಬಂದಿಲ್ಲ. ಇದು ಇವರೊಬ್ಬರದೇ ಕಥೆಯಲ್ಲ. ಕಲ್ಲಂಗಡಿ ಬೆಳೆದ ಪ್ರತಿಯೊಬ್ಬ ರೈತರದ್ದು ಇದೇ ಸ್ಥಿತಿ.












Click it and Unblock the Notifications