ನಕ್ಸಲರು ನುಸುಳುವ ಶಂಕೆ: ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರ
ಚಾಮರಾಜನಗರ, ಆಗಸ್ಟ್ 29: ಗಡಿಭಾಗದಿಂದ ಚಾಮರಾಜನಗರ ಜಿಲ್ಲೆಯ ಮೂಲಕ ರಾಜ್ಯಕ್ಕೆ ನಕ್ಸಲರು ನುಸುಳುವ ಸಾಧ್ಯತೆಯಿರುವ ಕಾರಣದಿಂದಾಗಿ ಗುಂಡ್ಲುಪೇಟೆ ವಾಪ್ತಿಯ ಗಡಿಗಳಲ್ಲಿ ಪೊಲೀಸರು ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದ್ದಾರೆ.
ಕೆಲವು ತಿಂಗಳ ಹಿಂದೆ ಗಡಿ ವ್ಯಾಪ್ತಿಯಲ್ಲಿ ನಕ್ಸಲರು ಕಾಣಿಸಿದ ವದಂತಿ ಹರಡಿತ್ತು. ಹೀಗಾಗಿ ಎಲ್ಲೆಡೆ ಪೊಲೀಸರು ಎಚ್ಚರ ವಹಿಸಿದ್ದರು. ಇದೀಗ ಕೇರಳ ಹಾಗೂ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳು ಕಂಡುಬಂದಿದ್ದು, ನಕ್ಸಲರು ಅರಣ್ಯ ಪ್ರದೇಶದ ಮೂಲಕ ಜಿಲ್ಲೆಯೊಳಗೆ ನುಸುಳುವ ಸಂಭವವಿದೆ ಎಂಬ ಶಂಕೆಯಿಂದ ಜಿಲ್ಲಾ ಪೊಲೀಸರು ಗಡಿಗಳಲ್ಲಿ ಎಚ್ಚರವಹಿಸಿದ್ದಾರೆ. ಅಲ್ಲದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಕೇರಳ ಹಾಗೂ ತಮಿಳುನಾಡಿನ ಗಡಿಯ ಬಂಡೀಪುರ ರಾಷ್ಟ್ರೀಯ ಉದ್ಯಾನ ದಟ್ಟ ಅರಣ್ಯದಿಂದ ಕೂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹುಲಿ, ಚಿರತೆ, ಕರಡಿ, ಕಾಟಿ ಹಾಗೂ ಆನೆಗಳಿವೆ. ಅಲ್ಲದೆ ಅಲ್ಲಲ್ಲಿ ಕಳ್ಳಬೇಟೆ ತಡೆ ಶಿಬಿರಗಳಿದ್ದು, ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿರುತ್ತಾರೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ನಕ್ಸಲರ ಸಂಚಾರ ಹಾಗೂ ನೆಲೆ ಸಾಧ್ಯವಾಗುವುದಿಲ್ಲ.
ಇನ್ನು ತಮಿಳುನಾಡಿಗೆ ಸೇರಿದ ಮಧುಮಲೈ ಹುಲಿಯೋಜನೆಯ ವ್ಯಾಪ್ತಿಯ ಮಸಣಿಗುಡಿಯಲ್ಲಿ ನಕ್ಸಲ್ ನಿಗ್ರಹ ಶಿಬಿರವಿದ್ದು, ನಿಗದಿತವಾಗಿ ಕೂಂಬಿಂಗ್ ನಡೆಸುವ ಮೂಲಕ ಸದಾ ಚಟುವಟಿಕೆಯಿಂದ ಇದ್ದರೂ, ಕೇರಳ ರಾಜ್ಯದ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇಲ್ಲ. ಹೀಗಾಗಿ ಆ ಮೂಲಕ ಒಳ ಪ್ರವೇಶಿಸುವ ಸಾಧ್ಯತೆಯಿದೆ. ಮೂಲೆಹೊಳೆಯಲ್ಲಿ ಕೇವಲ ಅರಣ್ಯ ತನಿಖಾ ಠಾಣೆಯಿದ್ದು ಅಲ್ಲಿ ಹೆಚ್ಚಿನ ತರಬೇತಿ ಹಾಗೂ ಶಸ್ತ್ರಾಸ್ತ್ರಗಳಿಲ್ಲದ ಕೆಲವೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂತರರಾಜ್ಯ ಗಡಿ ಗ್ರಾಮಗಳಲ್ಲಿ ಅಪರಿಚಿತ ಕೇರಳಿಗರು ಕಾಡಂಚಿನ ಹಾಗೂ ದೂರದ ಜಮೀನು ಗುತ್ತಿಗೆಗೆ ಪಡೆದುಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದು ಸ್ಥಳೀಯರನ್ನು ದೂರವಿರಿಸಿ ನಿಗೂಢ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇದರಿಂದ ಪೊಲೀಸರು ಗಡಿ ಭಾಗದತ್ತ ಹೆಚ್ಚಿನ ನಿಗಾವಹಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಧರ್ಮೇಂದ್ರಕುಮಾರ್ ಮೀನಾ, ಅವರು ತಮಿಳುನಾಡು ಗಡಿಯಲ್ಲಿನ ಅರಣ್ಯ ಪ್ರದೇಶದಲ್ಲಿ ನಿಗದಿತವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು ನಕ್ಸಲರ ಸಂಭಾವ್ಯ ದಾಳಿಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.












Click it and Unblock the Notifications