ನಂಜನಗೂಡು: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ
ದನ ಮೇಯಿಸುತ್ತಿದ್ದ ಕೃಷಿಕರೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ನಂಜನಗೂಡಿನಲ್ಲಿ ವರದಿಯಾಗಿದೆ.
ನಂಜನಗೂಡು, ಜನವರಿ 27: : ಚಿರತೆ ದಾಳಿ ನಡೆಸಿದ ಪರಿಣಾಮ ದನ ಮೇಯಿಸುತ್ತಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಚಂದ್ರು ಎಂಬುವರೇ ಚಿರತೆ ದಾಳಿಯಿಂದ ಪಾರಾಗಿ ಬಂದವರು.
ಚಂದ್ರು ಎಂದಿನಂತೆ ತಮ್ಮ ದನಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ದನಗಳು ಜಮೀನಿನಲ್ಲಿ ಮೇಯುತ್ತಿದ್ದರೆ, ಚಂದ್ರು ಜಮೀನಿನ ಮೂಲೆಯೊಂದರಲ್ಲಿ ಕುಳಿತಿದ್ದರು. ಈ ಸಂದರ್ಭ ಹಾಡಹಗಲೇ ಬೆಳಿಗ್ಗೆ 11 ಗಂಡೆ ಸುಮಾರಿಗೆ ಪಕ್ಕದ ಪೊದೆಯಿಂದ ನೆಗೆದು ಬಂದ ಚಿರತೆಯೊಂದು ಇವರ ಮೇಲೆ ದಾಳಿ ಮಾಡಿದೆ.[ಬೀದಿನಾಯಿಗಳ ದಾಳಿಗೆ ಕುರಿಗಳು ಬಲಿ!]
ದಾಳಿಯಿಂದ ಬೆಚ್ಚಿ ಬಿದ್ದ ಅವರು ಪ್ರಾಣಭಯದಿಂದ ಜೋರಾಗಿ ಕಿರುಚಿದ್ದಾರೆ. ಅಷ್ಟರಲ್ಲಾಗಲೆ ಚಿರತೆ ದಾಳಿ ಮಾಡಿ ಎಡ ಕೈ ಮತ್ತು ಹೊಟ್ಟೆಯನ್ನು ಪರಚಿದೆ. ಒಮ್ಮೆಲೆ ಕಿರುಚಿದ ಶಬ್ದ ಕೇಳಿದ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನ ಓಡಿ ಬಂದಿದ್ದಾರೆ. ಜನರು ಬಂದಿದ್ದನ್ನು ಕಂಡ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.[ಬಂಡೀಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು]
ದಾಳಿಯಿಂದ ಗಾಯಗೊಂಡಿರುವ ಚಂದ್ರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿದ್ದು, ಜನರು ಭಯದಿಂದ ಜಮೀನಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ತಾ.ಪಂ ಸದಸ್ಯ ಎಸ್. ಬಸವರಾಜು, ಅರಣ್ಯಾಧಿಕಾರಿ ಸುದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದು, ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ.