ಲೋಕಸಭಾ ಚುನಾವಣೆಗೆ ಚಾಮರಾಜನಗರದಲ್ಲಿ ಬಿಎಸ್ಪಿ ಎಂಟ್ರಿ ಕೊಟ್ರೆ ಕಾಂಗ್ರೆಸ್ ಗೆ ನಷ್ಟ!

ಮೈಸೂರು, ಅಕ್ಟೋಬರ್.21: ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದ್ಯತೆ ನೀಡಿದ್ದಾರೆ ಎಂಬ ಮಾತುಗಳು ಜನವಲಯದಲ್ಲಿ ಕೇಳಿ ಬಂದಿದ್ದವು.

ಆದರೆ ಚಾಮರಾಜನಗರದಲ್ಲಿ ಆಗಿದ್ದೇ ಬೇರೆ. ಇಷ್ಟಕ್ಕೂ ಒಮ್ಮತದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾದ ಸಚಿವರು ಎತ್ತು ಏರಿಗೆ ಕೋಣ ನೀರಿಗೆ ಎಳೆಯಿತು ಎಂಬಂತಾಗಿತ್ತು. ಹಾಗೆ ನೋಡಿದರೆ ರಾಜಕೀಯವಾಗಿ ಪುಟ್ಟರಂಗಶೆಟ್ಟಿ ಮತ್ತು ಎನ್.ಮಹೇಶ್ ಅವರ ನಡುವೆ ವೈಮನಸ್ಸು ಇದ್ದೇ ಇತ್ತು.

ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಅವರು ಕಾಂಗ್ರೆಸ್ಸನ್ನು ಮಣಿಸಿ ಗೆಲುವು ಪಡೆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿರುವಾಗ ಪ್ರತಿಸ್ಪರ್ಧಿಗಳು ಒಟ್ಟಾಗಿ ಹೋಗಿ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂಬ ಯಾವ ನಂಬಿಕೆಯೂ ಇಲ್ಲಿ ಇರಲಿಲ್ಲ.

ರಾಜಕೀಯವಾಗಿ ಬಿಎಸ್ ಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತ್ತೇ ವಿನಃ ಕಾಂಗ್ರೆಸ್ ಅಲ್ಲ, ಜತೆಗೆ ಅದರ ಋಣ ತೀರಿಸಲು ಸಿಎಂ ಕುಮಾರಸ್ವಾಮಿ ಅವರು ಖಾತೆಯನ್ನು ಎನ್.ಮಹೇಶ್ ಅವರಿಗೆ ಕರುಣಿಸಿದ್ದರು.

ಇಷ್ಟಕ್ಕೂ ಎನ್. ಮಹೇಶ್ ಅವರಿಗೆ ಸಚಿವಸ್ಥಾನ ನೀಡಿದ್ದು ಖುದ್ದು ಪುಟ್ಟರಂಗಶೆಟ್ಟಿ ಅವರಿಗೂ ಒಳಗೊಳಗೆ ಅಸಮಾಧಾನವನ್ನುಂಟು ಮಾಡಿತ್ತು. ಅದಕ್ಕೆ ಕಾರಣವೂ ಇತ್ತು. ಮೊದಲ ಬಾರಿಗೆ ಗೆದ್ದ ಕೂಡಲೇ ಸಚಿವಸ್ಥಾನ ನೀಡಲಾಗಿತ್ತು. ಪುಟ್ಟರಂಗಶೆಟ್ಟಿ ಅವರು ಹಲವು ದಶಕಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದು ಇದುವರೆಗೂ ಅವರಿಗೆ ಆ ಯೋಗ ಬಂದಿರಲಿಲ್ಲ.

ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿತ್ತಾದರೂ ಇಬ್ಬರು ಒಂದೇ ಜಿಲ್ಲೆಯಲ್ಲಿ ಸಚಿವರಾಗಿರುವುದು ಅಷ್ಟೊಂದಾಗಿ ಖುಷಿಕೊಟ್ಟಿರಲಿಲ್ಲ. ಪುಟ್ಟರಂಗಶೆಟ್ಟಿ ಅವರಿಗೂ ಈ ಬಾರಿ ಸಚಿವ ಸ್ಥಾನ ದೊರೆತಿದ್ದು ಕೂಡ ಆಕಸ್ಮಿಕವೇ.

ಒಂದು ವೇಳೆ ಗುಂಡ್ಲುಪೇಟೆಯಿಂದ ಗೀತಾಮಹದೇವಪ್ರಸಾದ್ ಅವರು ಗೆಲುವು ಕಂಡಿದ್ದರೆ ಸಚಿವ ಸ್ಥಾನ ಅವರ ಪಾಲಾಗುತ್ತಿತ್ತು. ಪುಟ್ಟರಂಗಶೆಟ್ಟಿ ಅವರು ಕೇವಲ ಶಾಸಕರಾಗಿಯೇ ಉಳಿಯಬೇಕಾಗಿತ್ತು. ಮುಂದೆ ಓದಿ...

 ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎನ್.ಮಹೇಶ್ ಸ್ಪರ್ಧೆ?

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎನ್.ಮಹೇಶ್ ಸ್ಪರ್ಧೆ?

ಈ ನಡುವೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಲ್ಲೇ ಎನ್.ಮಹೇಶ್ ಮತ್ತು ಪುಟ್ಟರಂಗಶೆಟ್ಟಿ ಅವರ ನಡುವೆ ವಾಗ್ವಾದಗಳು ಬಹಿರಂಗವಾಗಿಯೇ ನಡೆದಿದ್ದವು. ಅದರ ಜೊತೆಯಲ್ಲಿಯೇ ಎನ್.ಮಹೇಶ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪುಟ್ಟರಂಗಶೆಟ್ಟಿ ನೆಮ್ಮದಿಯುಸಿರು ಬಿಡುವಂತಾಗಿದೆ.

ಆದರೆ ಮತ್ತೆ ಪುಟ್ಟರಂಗಶೆಟ್ಟಿ ಮಾತ್ರವಲ್ಲ ಕಾಂಗ್ರೆಸ್‌ಗೆ ಎನ್.ಮಹೇಶ್ ಅವರು ಸಿಂಹಸ್ವಪ್ನವಾಗಿ ಕಾಡುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಏಕೆಂದರೆ ಎನ್.ಮಹೇಶ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

 ಕಾಂಗ್ರೆಸ್‌'ಗೆ ಸ್ವಲ್ಪ ಮಟ್ಟಿಗೆ ತೊಂದರೆ

ಕಾಂಗ್ರೆಸ್‌'ಗೆ ಸ್ವಲ್ಪ ಮಟ್ಟಿಗೆ ತೊಂದರೆ

ಕೇಂದ್ರದಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಅವರು ಪ್ರಧಾನಿ ಖುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದಿಂದ ಬಿಎಸ್ಪಿ ಪಕ್ಷವನ್ನು ಸಂಘಟಿಸುವುದರೊಂದಿಗೆ ತಾವು ಸ್ಪರ್ಧಿಸಿ ಪಕ್ಷಕ್ಕೆ ಬಲತುಂಬುವ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನದಲ್ಲಿದ್ದರೆ ಪಕ್ಷ ಸಂಘಟನೆ ಮಾಡುವುದು ಕಷ್ಟ ಎಂದರಿತ ಎನ್.ಮಹೇಶ್ ಅವರು ಇದೀಗ ರಾಜೀನಾಮೆ ನೀಡಿದ್ದು, ಅದು ಅಂಗೀಕಾರವೂ ಆಗಿರುವುದರಿಂದ ಮುಂದೆ ಅವರು ಬಿಎಸ್ಪಿಯನ್ನು ಸಂಘಟಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೆ, ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ.

 ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿದೆ

ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿದೆ

ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‌ನ ಆರ್.ಧ್ರುವನಾರಾಯಣ್ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ಪೈಪೋಟಿ ನೀಡುತ್ತಿದ್ದ ಅವತ್ತಿನ ಬಿಜೆಪಿಯ ಮುಖಂಡ ಎ.ಆರ್.ಕೃಷ್ಣಮೂರ್ತಿ ಅವರು ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಸದ್ಯ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಗೆ ಹೊಸ ಅಭ್ಯರ್ಥಿಯ ಅವಶ್ಯಕತೆಯಿದೆ.

ಹೀಗಾಗಿ ಆಕಾಂಕ್ಷಿಗಳು ಅತ್ತ ಮುಖ ಮಾಡಿದ್ದು, ಅವರ ಪೈಕಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು ಒಬ್ಬರಾಗಿದ್ದಾರೆ. ಈಗಾಗಲೇ ನಾನು ಕೂಡ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿರುವ ಕೆ.ಶಿವರಾಮು ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ಹಲವು ಬಿಜೆಪಿ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ ಎನ್ನಲಾಗಿದೆ.

ಇದರಿಂದ ಮೀಸಲು ಕ್ಷೇತ್ರವಾಗಿರುವ ಚಾಮರಾಜನಗರದಲ್ಲಿ ಇದೀಗ ಲೋಕಸಭಾ ಚುನಾವಣೆಯ ಕಾವು ನಿಧಾನವಾಗಿ ಏರತೊಡಗಿರುವುದು ಸ್ಪಷ್ಟವಾಗುತ್ತಿದೆ.

 ಕಾಂಗ್ರೆಸ್ ನಾಯಕರಿಗೆ ತಲೆನೋವಾದ ಬಿಎಸ್ಪಿ

ಕಾಂಗ್ರೆಸ್ ನಾಯಕರಿಗೆ ತಲೆನೋವಾದ ಬಿಎಸ್ಪಿ

ಈಗಿರುವ ಮಾಹಿತಿಯಂತೆ ಬಿಜೆಪಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು, ಬಿಎಸ್ಪಿಯಿಂದ ಎನ್.ಮಹೇಶ್ ಮತ್ತು ಕಾಂಗ್ರೆಸ್‌ನಿಂದ ಹಾಲಿ ಸಂಸದ ಆರ್.ಧ್ರುವನಾರಾಯಣ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಆದರೆ ಚುನಾವಣೆಗೆ ಆರೇಳು ತಿಂಗಳು ಇರುವುದರಿಂದ ಕೊನೆ ಗಳಿಗೆಯಲ್ಲಿ ಕೆಲವು ಬದಲಾವಣೆಯಾದರೂ ಅಚ್ಚರಿಪಡಬೇಕಾಗಿಲ್ಲ.

ಆದರೆ ಬಿಎಸ್ಪಿ ಈಗಿನಿಂದಲೇ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿ ಪಕ್ಷದ ಸಂಘಟನೆಯಲ್ಲಿ ಎನ್.ಮಹೇಶ್ ತೊಡಗಿಸಿಕೊಳ್ಳಲಿದ್ದು, ಒಂದು ವೇಳೆ ಹೆಚ್ಚಿನ ಕ್ಷೇತ್ರದಲ್ಲಿ ಬಿಎಸ್ಪಿಯಿಂದ ಅಭ್ಯರ್ಥಿಗಳು ಕಣಕ್ಕಿಳಿದರೆ ಅದರ ಪರಿಣಾಮ ಕಾಂಗ್ರೆಸ್ ಮೇಲಾಗುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಬಿಎಸ್ಪಿ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+