ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿ: ಶ್ರೀನಿವಾಸ ಪ್ರಸಾದ್
ಚಾಮರಾಜನಗರ ನವೆಂಬರ್ 15: ಮಲ್ಲಿಕಾರ್ಜುನ ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ವಿ.ಶ್ರೀನಿವಾಸ ಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾಗಿ ಜೊತೆಗೆ ವಿಪಕ್ಷ ನಾಯಕರಾಗಿದ್ದ ಖರ್ಗೆ ರಾಜ್ಯ ರಾಜಕಾರಣದಲ್ಲಿ ತಮ್ಮದೇನು ನಡೆಯಲ್ಲ ಎಂದು ಗೊತ್ತಾದ ಬಳಿಕ ಸಂಸತ್ತಿಗೆ ಹಾರಿ ಕಾರ್ಮಿಕ ಸಚಿವರಾದರು. ಮಲ್ಲಿಕಾರ್ಜುನ ಖರ್ಗೆ ಓರ್ವ ಅವಕಾಶವಾದಿ ರಾಜಕಾರಣಿಯಷ್ಟೇ. ಅವರೇನೂ ಪಕ್ಷ ಕಟ್ಟಿದ್ದಾರಾ..? ಹೋರಾಟ ಮಾಡಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲ್ಲ; ಬಿಜೆಪಿ ನಾಯಕನ ಭವಿಷ್ಯ!
ಕಾಂಗ್ರೆಸ್ ಪಕ್ಷದವರು ಈಗ ಖರ್ಗೆಗೆ ಮರದ ಕತ್ತಿ ಹಾಗೂ ರಟ್ಟಿನ ಗುರಾಣಿ ಕೊಟ್ಟು ಯುದ್ಧಕ್ಕೆ ಕಳುಹಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು ಅರ್ಥ ಮಾಡಿಕೊಂಡಿದ್ದಾರೆ. ಅಭಿವೃದ್ಧಿಪರ ಸರ್ಕಾರವನ್ನು ಆರಿಸುತ್ತಾರೆ. ಬಿಜೆಪಿ ಪರ ಅಲೆ ಇದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್, ವಿಶ್ವಾಸ ಹೊರಹಾಕಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಸಿದ್ದರಾಮಯ್ಯ ಈ ಬಾರಿ ನಿಲ್ಲುವುದೇ ಕೋಲಾರದಲ್ಲಿ. ಹೈಕಮಾಂಡ್ ತೀರ್ಮಾನ ಎಂದು ಸುಮ್ಮನೆ ಹೇಳುತ್ತಿದ್ದು, ಕೊನೆಗೆ ಕೋಲಾರದಲ್ಲೇ ನಿಲ್ಲುತ್ತಾರೆ ಆದರೆ ಅದನ್ನು ಇನ್ನೂ ಸ್ಪಷ್ಟವಾಗಿ ಹೇಳಲ್ಲ. 224 ಕ್ಷೇತ್ರದಲ್ಲೂ ಕರೆಯುತ್ತಾರೆ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ನಿಲ್ಲಬಹುದಿತ್ತು, ವರುಣದಲ್ಲಿ ನಿಲ್ಲಬಹುದಿತ್ತು. ಕೋಲಾರದ ತನಕ ಓಡಬೇಕಿತ್ತಾ..? ವೀರಾವೇಶದ ಮಾತುಗಳು ಚುನಾವಣೆ ಬಂದಾಗ ಗೊತ್ತಾಗಲಿದೆ ಎಂದು ಶ್ರೀನಿವಾಸ ಪ್ರಸಾದ್ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಚಿವ ಹಾಲಪ್ಪ ಆಚಾರ್ಯ ಕಿಡಿ
ಇನ್ನು ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಧಾರವಾಡ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಗ ಅತಂತ್ರ ರಾಜಕಾರಣಿ ಆಗಿದ್ದಾರೆ. ಕಾಂಗ್ರೆಸ್ ನಾಯಕರು ಅಂತ ಹಾಗೆಯೇ ಹೇಳುತ್ತಾರೆ. ಅವರಿಗೆ ಕ್ಷೇತ್ರದ ನೆಲೆ ಇಲ್ಲ. ಕಾಂಗ್ರೆಸ್ ಪಕ್ಷದ ಎಲ್ಲರ ಪರಿಸ್ಥಿತಿ ಹೀಗೆಯೆ ಆಗಿದೆ ಅಂತಾ ನಾನು ಭಾವಿಸಿದ್ದೇನೆ. ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ವಾಪಸ್ ಬರುವುದು ಕಲ್ಪನೆಯಾಗಿದೆ. ಯಾರು ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಎಲ್ಲರೂ ಮಾಧ್ಯಮಕ್ಕೆ ಸ್ಪಷ್ಟನೆ ಕೂಡಾ ಕೊಟ್ಟಿದ್ದಾರೆ.
ಸಹಕಾರಿ ಸಚಿವ ಎಸ್ಟಿ ಸೋಮಶೇಖರ್ ಸಹಕಾರ ಸಪ್ತಾಹಕ್ಕೆ ಬಾರದೇ ಇರುವ ವಿಚಾರವಾಗಿ ಮಾತನಾಡಿದ ಅವರು, ಸೋಮಶೇಖರ್ ಅವರ ಮನೆಯಲ್ಲಿ ಒಬ್ಬರು ನಿಧನರಾಗಿದ್ದಾರೆ. ಅದಕ್ಕೆ ನಿನ್ನೆ ಕೂಡ ಅವರು ಬಂದಿಲ್ಲ. ಇವತ್ತು ಬರಲ್ಲ. ಉಳಿದವರು ಇವತ್ತು ಕಾರ್ಯಕ್ರಮದಲ್ಲಿ ಬಂದಿದ್ದಾರೆ. ಸಹಕಾರ ಸಪ್ತಾಹಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಚಾಲನೆ ಕೊಟ್ಟಿದ್ದಾರೆ. ಇವತ್ತು ಎರಡನೇ ದಿನದ ಕಾರ್ಯಕ್ರಮ ಧಾರವಾಡದಲ್ಲಿ ಮಾಡುತ್ತಿದ್ದೇವೆ ಎಂದ ಸಚಿವ ಹಾಲಪ್ಪ ಆಚಾರ್ಯ ಹೇಳಿದ್ದಾರೆ.