ಮಲೆಮಹದೇಶ್ವರ ನೆಲೆ ನಿಂತ ಊರಿನಲ್ಲಿ ಹೆಚ್ಚುತ್ತಲೇ ಇದೆ ಗಾಂಜಾ ಮಾರಾಟ!
ಚಾಮರಾಜನಗರ, ನವೆಂಬರ್.01: ಮಲೆಮಹದೇಶ್ವರ ನೆಲೆ ನಿಂತ ಊರಿನಲ್ಲಿಯೇ ಗಾಂಜಾದ ಕಮಟು ವಾಸನೆ ಮೂಗಿಗೆ ಬಡಿಯತೊಡಗಿದೆ. ಕೊಳ್ಳೇಗಾಲ, ಹನೂರು ಸೇರಿದಂತೆ ಮಲೆಮಹದೇಶ್ವರನ ಬೆಟ್ಟದ ಆಸುಪಾಸಿನಲ್ಲಿ ಒಂದರ ಮೇಲೊಂದರಂತೆ ಗಾಂಜಾ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆತಂಕಕಾರಿಯಾಗಿದೆ.
ಕಳೆದ ಕೆಲ ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವಾಗ, ಮಾರಾಟ ಮಾಡುವಾಗ ಹೀಗೆ ಹಲವು ರೀತಿಯಲ್ಲಿ ಜನ ಸಿಕ್ಕಿ ಹಾಕಿಕೊಳ್ಳುತ್ತಿದ್ದು, ಬೆಳಕಿಗೆ ಬಾರದೆ ಹೋದ ಪ್ರಕರಣಗಳು ಏಷ್ಟಿವೆಯೋ ಆ ಮಹದೇಶ್ವರನಿಗಷ್ಟೆ ಗೊತ್ತಾಗಬೇಕಾಗಿದೆ.
ಎಗ್ಗಿಲ್ಲದೇ ರಸ್ತೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ
ಈಗೀಗ ಈ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವುದು, ಅಕ್ರಮ ಮಾರಾಟ ಹಾಗೂ ಸಾಗಾಣಿಕೆ ಪ್ರಕರಣಗಳು ಅಧಿಕವಾಗುತ್ತಿದ್ದು, ಇದನ್ನು ಹತ್ತಿಕ್ಕುವುದೇ ಕಷ್ಟವಾಗಿದೆ. ಯಾರೋ ರೈತರ ತಲೆಕೆಡಿಸಿ ಗಾಂಜಾ ಬೆಳೆ ಬೆಳೆಯಲು ಕುಮ್ಮಕ್ಕು ನೀಡುತ್ತಿರುವುದರಿಂದಲೇ ಇವತ್ತು ತರಕಾರಿ ಬೆಳೆಯಾದ ಟೊಮೆಟೋ, ಮೆಣಸಿನಕಾಯಿ ಇನ್ನಿತರ ಬೆಳೆಗಳ ನಡುವೆ ಗಾಂಜಾ ಬೆಳೆಯಲು ಮುಂದಾಗುತ್ತಿದ್ದಾರೆ.
ಕೆಲವರು ಗೌಪ್ಯವಾಗಿ ಬೆಳೆದು ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಂಡರೆ ಇನ್ನು ಬಡ ರೈತರು ಹಣದಾಸೆಗೆ ಗಾಂಜಾ ಬೆಳೆದು ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರುತ್ತಿದ್ದಾರೆ. ಇಷ್ಟಕ್ಕೂ ಗಾಂಜಾದ ರುಚಿಯನ್ನು ಇಲ್ಲಿನವರಿಗೆ ಹತ್ತಿಸಿದವರು ಯಾರು ಎಂಬುದೇ ಅಚ್ಚರಿಗೆ ಕಾರಣವಾಗಿದೆ.
ಕೊಡಗಿನಲ್ಲಿ ಕಡಿಮೆಯಾದ ಪ್ರಕರಣಗಳು
ಎರಡು ದಶಕಗಳ ಹಿಂದೆ ಕೊಡಗಿಗೆ ಶುಂಠಿ ಬೆಳೆಯಲು ಬಂದ ಕೇರಳದ ಕೆಲವು ಕೃಷಿಕರು ನೂರಾರು ಎಕರೆ ಶುಂಠಿ ಕೃಷಿಯೊಂದಿಗೆ ಗಾಂಜಾ ಬೆಳೆದು ಕೇರಳಕ್ಕೆ ಸಾಗಿಸಿದ್ದರು. ಜತೆಗೆ ಕೊಡಗಿನಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದ ಹತ್ತಾರು ಪ್ರಕರಣಗಳು ದಾಖಲಾಗಿದ್ದವು. ಕೋಟ್ಯಂತರ ಮೌಲ್ಯದ ಗಾಂಜಾವನ್ನು ನಾಶ ಮಾಡಲಾಗಿತ್ತು.
ಇದೀಗ ಕೊಡಗಿನಲ್ಲಿ ಇಂತಹ ಪ್ರಕರಣಗಳು ಕಡಿಮೆಯಾಗಿದ್ದು, ಸದ್ಯ ಕೇರಳ ಮತ್ತು ತಮಿಳುನಾಡಿನೊಂದಿಗೆ ಸಂಬಂಧ ಬೆಸೆದುಕೊಂಡಿರು ಚಾಮರಾಜನಗರ ಜಿಲ್ಲೆಯತ್ತ ಗಾಂಜಾದ ಕಮಟು ವಾಸನೆ ಹರಡಿದೆ.
ಮೈಸೂರಿಗೂ ಗಾಂಜಾ ಸರಬರಾಜು
ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಸಾಗಣೆ ಮತ್ತು ಕೃಷಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಲೇ ಇದ್ದಾರೆ. ಹನೂರು ಭಾಗದ ಮೂರು ಪೊಲೀಸ್ ಠಾಣೆಗಳ ವ್ಯಾಪಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 32 ಪ್ರಕರಣಗಳು ಪತ್ತೆಯಾಗಿವೆ. ಇನ್ನು ಯಾರ ಗಮನಕ್ಕೂ ಬಾರದೆ ಹೋದ ಅದೆಷ್ಟು ಪ್ರಕರಣಗಳು ಇವೆಯೋ ಗೊತ್ತಿಲ್ಲ.
ಗಾಂಜಾ ಬೆಳೆಯುವುದು ಹಾಗೂ ಗಾಂಜಾ ಸಾಗಣೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಹನೂರು ಭಾಗದಲ್ಲೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊರಗಿನವರು ಬಂದು ಹಣದ ಆಸೆ ತೋರಿಸಿ ಗಾಂಜಾ ಬೆಳೆಯಲು ಉತ್ತೇಜನ ನೀಡುತ್ತಿದ್ದಾರಾ? ಎಂಬ ಅನುಮಾನವೂ ಕಾಡತೊಡಗಿದೆ. ಇಲ್ಲಿಂದ ತಮಿಳುನಾಡು, ಕೇರಳ, ಮೈಸೂರಿಗೂ ಗಾಂಜಾ ಸರಬರಾಜಾಗುತ್ತಿದೆ.
ಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿ
ಬೈಲುಕುಪ್ಪೆಯಲ್ಲಿ ಹೆಚ್ಚಿದ್ದಾರೆ ಗ್ರಾಹಕರು
ಮೈಸೂರು ನಗರದಲ್ಲಿ ಗಾಂಜಾ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ. ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಇದಕ್ಕೆ ಸಾಕಷ್ಟು ಗ್ರಾಹಕರಿದ್ದು, ಇಲ್ಲಿಗೆ ಗೌಪ್ಯವಾಗಿ ಸರಬರಾಜು ಮಾಡಲಾಗುತ್ತದೆ. ಹೀಗೆ ಸಾಗಾಟ ಮಾಡುವಾಗ ಸಿಕ್ಕಿ ಬಿದ್ದ ಪ್ರಕರಣಗಳೂ ಬೇಕಾದಷ್ಟಿವೆ.
ಈಗಾಗಲೇ ಆಹಾರ ಬೆಳೆದು ಕೈಸುಟ್ಟುಕೊಂಡು ನಷ್ಟ ಅನುಭವಿಸಿರುವ ರೈತರನ್ನೇ ಕೆಲವರು ಟಾರ್ಗೆಟ್ ಮಾಡಿಕೊಂಡು ಅವರ ತಲೆಕೆಡಿಸಿ ಗಾಂಜಾ ಬೆಳೆಯುವಂತೆ ಪ್ರೇರೆಪಿಸುವುದಲ್ಲದೆ, ತಾವೇ ಖರೀದಿ ಮಾಡುವ ವಾಗ್ದಾನ ನೀಡಿ ಗಾಂಜಾವನ್ನು ಬೆಳೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಬೆಳೆದ ಗಾಂಜಾ ಸಣ್ಣಪೊಟ್ಟಣಗಳಾಗಿ ಮಾರ್ಪಾಡಾಗಿ ವ್ಯಸನಿಗಳನ್ನು ತಲುಪುತ್ತಿದೆ.
ಗಾಂಜಾ ಮಾರಾಟಗಾರರ ಮೇಲೆ ನಿಗಾ
ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರ ಪೈಕಿ ಗಾಂಜಾ ವ್ಯಸನಿಗಳು ಕೂಡ ಇದ್ದು, ಇಂತಹವರಿಗೆ ತಲುಪಿಸುವ ಜಾಲವೂ ಇಲ್ಲಿದೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರದಲ್ಲಿ ಗಾಂಜಾದ ಕಮಟು ವಾಸನೆ ಯಾವ ರೀತಿಯಲ್ಲಿ ಹಬ್ಬಿದೆ ಎನ್ನುವುದನ್ನು ನೋಡುವುದಾದರೆ ಹನೂರು ತಾಲೂಕಿನ ಮೂರು ಪೊಲೀಸ್ ಠಾಣೆ ವ್ಯಾಪಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 32 ಗಾಂಜಾ ಪ್ರಕರಣಗಳು ಬೆಳಕಿಗೆ ಬಂದಿವೆ.
2016ರಿಂದ ಈಚೆಗೆ ಇದರ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಮಲೆಮಹದೇಶ್ವರನ ಬೆಟ್ಟಕ್ಕೆ ಬಂದು ಹೋಗುವ ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳ ಮೇಲೆ ನಿಗಾವಹಿಸಿರುವ ಪೊಲೀಸರು ಗಸ್ತನ್ನು ಚುರುಕುಗೊಳಿಸಿದ್ದು, ಗಾಂಜಾ ಮಾರಾಟಗಾರರ ಮೇಲೆ ನಿಗಾವಹಿಸಿರುವುದನ್ನು ಕಾಣಬಹುದಾಗಿದೆ.