ಕೊಳ್ಳೇಗಾಲದ ಮಾಟಳ್ಳಿಯಲ್ಲಿ ಕೇಳುವುದು ಬರೀ ಸಾವಿನ ಸದ್ದು!
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹಳ್ಳಿಯೊಂದರ ಹೆಸರು 'ಮಾಟಳ್ಳಿ'. ಈ ಹಳ್ಳಿಯಲ್ಲಿ ಮಾಟ-ಮಂತ್ರ ಜಾಸ್ತಿ ಎಂಬ ಕಾರಣಕ್ಕೆ ಇಂಥ ಹೆಸರು ಬಂದಿದೆಯಂತೆ. ಆ ಹಳ್ಳಿಯ ಬಗೆಗಿನ ಲೇಖನ ಇಲ್ಲಿದೆ
ಕೊಳ್ಳೇಗಾಲ, ಜನವರಿ 30: ವಾಮಾಚಾರ ಮತ್ತು ಅದರ ಪ್ರಭಾವಗಳ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸುದ್ದಿ ವಾಹಿನಿಗಳಲ್ಲಿ ಓದಿದ್ದೇವೆ, ನೋಡಿದ್ದೇವೆ. ವಾಮಾಚಾರವೆಲ್ಲ ಸುಳ್ಳು, ಅದರಲ್ಲೇನಿದೆ ಎನ್ನುವವರೂ ಇದ್ದಾರೆ. ಅಂಥಹವರು ವಾಮಾಚಾರದ ಬಗ್ಗೆ ಕಣ್ಣಾರೆ ನೋಡಬೇಕೆಂದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಾಟಳ್ಳಿ ಗ್ರಾಮಕ್ಕೆ ಬರಬೇಕು.
ಏಕೆಂದರೆ ಇಡೀ ರಾಜ್ಯದಲ್ಲಿ ಕೊಳ್ಳೇಗಾಲ ಎಂದರೆ ವಾಮಾಚಾರ ವಿಚಾರವಾಗಿ ಕೇಳಿಬರುವ ಪ್ರಮುಖ ಹೆಸರು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಇದೇ ರೀತಿ ಕೇರಳ ಮಾಂತ್ರಿಕ ವಿದ್ಯೆ ಪ್ರಯೋಗವೂ ಇಲ್ಲಿ ನಡೆಯುತ್ತದೆ. ಸಾಮಾನ್ಯವಾಗಿ ಗುರುವಾರ, ಭಾನುವಾರ ಮತ್ತು ಅಮಾವಾಸ್ಯೆ, ಹುಣ್ಣಿಮೆಗಳಂದು ಮಾಟಳ್ಳಿ ಗ್ರಾಮಕ್ಕೆ ರಾಜ್ಯದಾದ್ಯಂತ ಹಲವಾರು ಜನರು ಬರುತ್ತಾರೆ.[ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೇಲೆ ವಾಮಾಚಾರ?]
ಇಲ್ಲಿಗೆ ಬರುವವರು ಸಾಮಾನ್ಯವಾಗಿ ಕಾರು ಹೊಂದಿರುವ ಶ್ರೀಮಂತರು ಮತ್ತು ರಾಜಕಾರಣಿಗಳು, ಉದ್ಯಮಿಗಳು. ಬಡಬಗ್ಗರು ಮಾತ್ರ ಈ ಗ್ರಾಮಕ್ಕೆ ಬಂದು ವಾಮಾಚಾರದ ವಿಷಯ ಎತ್ತುವುದಿಲ್ಲ. ಅಂದ ಹಾಗೆ ವಾಮಾಚಾರ ಹೇಗೆ ಮಾಡುತ್ತಾರೆ ಎಂಬುದನ್ನು ತಿಳಿಯೋಣ. ಕೊಳ್ಳೇಗಾಲ ತಾಲೂಕಿನ ಹಲವಾರು ಚಿಕ್ಕ ಪುಟ್ಟ ಗ್ರಾಮಗಳಲ್ಲಿ ಸೋಲಿಗರು ವಾಮಾಚಾರ ಮಾಡುತ್ತಾರೆ ಎಂಬುದು ಜನಜನಿತ ನಂಬಿಕೆ.

ವೀರಪ್ಪನ್ ಗೆ ಇತ್ತಂತೆ ವಾಮಾಚಾರಿಗಳ ಬೆಂಬಲ
ನರಹಂತಕ, ದಂತಚೋರ ವೀರಪ್ಪನ್ ಸಹ ಕೊಳ್ಳೇಗಾಲದ ವಾಮಾಚಾರಿಗಳ ಕೃಪಾಕಟಾಕ್ಷ ಹೊಂದಿದ್ದ. ಹೀಗಾಗಿಯೇ ಅವನನ್ನು ಹಿಡಿಯಲು ಸರಕಾರ ಹರಸಾಹಸ ಪಡುತ್ತಿತ್ತು. ಅವನು ಹತ್ತಿರದಲ್ಲಿಯೇ ಹಾಯ್ದು ಹೋದರೂ ಪೊಲೀಸರ ಕಣ್ಣಿಗೆ ಕಾಣುತ್ತಿರಲಿಲ್ಲವಂತೆ. ಪೊಲೀಸರ ಗುಂಡಿಗೆ ಬಲಿಯಾದ ಬೆಂಗಳೂರಿನ ಕುಖ್ಯಾತ ಭೂಗತ ದೊರೆ ಜಯರಾಜ್ ಕೂಡ ವಾಮಾಚಾರ ಮಾಡಿಸದೇ ಯಾವುದೇ ಕೆಲಸ ಮಾಡುತ್ತಿರಲಿಲ್ಲ.

ಸೋಲಿಗರ ಹಿಂದೆ ರಾಜಕಾರಣಿಗಳು
ಇದೇ ರೀತಿ ಈಗ ಸಂಘಟನೆಯೊಂದರ ಮುಖ್ಯಸ್ಥರಾಗಿರುವ ವ್ಯಕ್ತಿಯೊಬ್ಬರು ಕೂಡ ವಾಮಾಚಾರದಿಂದಲೇ ತಮ್ಮ ಬದುಕು ಉಳಿದುಕೊಂಡಿದೆ ಎನ್ನುತ್ತಾರೆ. ಇನ್ನು ರಾಜಕೀಯ ಕ್ಷೇತ್ರದವರೂ ಸೋಲಿಗರ ವಾಮಾಚಾರಕ್ಕೆ ಹಿಂದೆ ಬಿದ್ದಿರುತ್ತಾರೆ ಎನ್ನುವುದು ಇಲ್ಲಿ ನಿತ್ಯ ಕಾಣುವ ದೃಶ್ಯ.

ಸಾವಿಗೆ ಮುನೇಶ್ವರನ ಸಾಥ್
ಇನ್ನು ಕೆಲ ಸೇಡಿನ ಬುದ್ಧಿಯಿದ್ದವರು ಮಾಟಳ್ಳಿಯ ಮುನೇಶ್ವರನಿಗೆ ಪೂಜೆ ಮಾಡಿಸಿದರೆ ಮುಗೀತು ಕಥೆ. ಈ ಬಗ್ಗೆ ಹೇಳುವ ಮುನೇಶ್ವರನ ಭಕ್ತರಾದ ಬಂಗಾರು, ನೋಡಿ ಇಲ್ಲಿ ಬಂದು ಮುನೇಶ್ವರನಿಗೆ ಪೂಜೆ ಮಾಡಿಸಿ ಇಂಥವರು ಸಾಯಬೇಕು ಎಂದು ಹರಕೆ ಹೊತ್ತುಕೊಂಡು ಕೋಳಿ ಕಟ್ಟಿದರೆ ಮುಗೀತು. ಅವರು ಯಾರ ಹೆಸರು ಹೇಳಿ ಹರಕೆ ಹೊತ್ತುಕೊಂಡು ಅವರು ಸಾಯಲಿ ಎಂದು ಪೂಜೆ ಮಾಡಿಸಿ, ಹುಂಜ ಅಥವಾ ಕೋಳಿ ಕಟ್ಟಿರುತ್ತಾರೆಯೋ ಅವರು ಒಂದು ವಾರದಲ್ಲಿ ಮರಣ ಹೊಂದುವುದು ಗ್ಯಾರಂಟಿ ಎನ್ನುತ್ತಾರೆ.

ಹುಂಜ ಅಥವಾ ಕೋಳಿ ಸ್ಥಿತಿಯೇ ಶತ್ರುವಿಗೂ
ಭಕ್ತಿಯಿಂದ ಮುನೇಶ್ವರನಿಗೆ ಕೊಟ್ಟಿರುವ ಹುಂಜ ಅಥವಾ ಕೋಳಿಗೆ ತಿನ್ನಲು ಮತ್ತು ಕುಡಿಯಲು ಏನನ್ನೂ ಕೊಡುವುದಿಲ್ಲವಂತೆ. ಆಹಾರವಿಲ್ಲದೇ ಹುಂಜ/ಕೋಳಿ ಯಾವ ರೀತಿ ನರಳಿ ನರಳಿ ಸಾಯುತ್ತದೆಯೋ ಅದೇ ರೀತಿ ಹರಕೆ ಹೊತ್ತವರ ಶತ್ರು ಕೂಡ ನರಳಿ ನರಳಿ ಸಾಯುತ್ತಾರೆ ಎಂಬುದು ಇಲ್ಲಿಗೆ ಬರುವವರ ನಂಬಿಕೆ.

ಜನ ಬರುವುದು ಹೆಚ್ಚಾಗಿದೆ
ಮಾಟಳ್ಳಿಗೆ ಅನೇಕ ಭಕ್ತರು ಬಂದು ಹುಂಜ ಅಥವಾ ಕೋಳಿ ಕಟ್ಟಿ ಹೋಗುತ್ತಾರೆ. ಇದರಲ್ಲಿ ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಮಾಟಳ್ಳಿಯ ಮುನೇಶ್ವರನ ಬಗ್ಗೆ ಸುದ್ದಿ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರವಾದಾಗಿನಿಂದ ಜನರು ಬರುವುದು ಹೆಚ್ಚಾಗಿದೆ.

ಮಾಟಳ್ಳಿ ಎಂಬ ಹೆಸರು ಬಂದಿದೆ
ಮಾಟ, ಮಂತ್ರ ಜಾಸ್ತಿ ಮಾಡುವುದರಿಂದ ಈ ಗ್ರಾಮಕ್ಕೆ ಮಾಟಳ್ಳಿ ಎಂಬ ಹೆಸರಿದೆ. ಈ ಬಗ್ಗೆ ಸರಕಾರಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅಕಸ್ಮಾತ್ ಮುನೇಶ್ವರನ ಸುದ್ದಿಗೆ ಬಂದರೆ ಮುಗೀತು ಅವರ ಕಥೆ. ಇಂಥ ಹಲವಾರು ನಿದರ್ಶನಗಳು ಜರುಗಿವೆ.

ಸಿದ್ದರಾಮಯ್ಯ ಹೆಸರೇ ತಳಕು ಹಾಕಿಕೊಂಡಿದೆ
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕೊಳ್ಳೇಗಾಲದ ವಾಮಾಚಾರಿಗಳ ಬೆಂಬಲ ಇರುವುದರಿಂದಲೇ ಅವರನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತು ಕೊಳ್ಳೇಗಾಲದ ಸುತ್ತಮುತ್ತ ಚಾಲ್ತಿಯಲ್ಲಿದೆ ಎನ್ನುತ್ತಾರೆ ಸ್ಥಳೀಯರು.

ತರ್ಕಕ್ಕೆ ನಿಲುಕದ ವಿಚಾರ
ಇಲ್ಲಿಗೆ ಬರುವವರು ಅನೇಕ ರೀತಿ ಬೇಡಿಕೆಗಳನ್ನು ಹೊತ್ತು ತರುತ್ತಾರೆ. ಮುನೇಶ್ವರನ ಶಕ್ತಿಯಿಂದಲೇ ಎಲ್ಲ ನೆರವೇರುತ್ತಿದೆ ಎಂಬ ನಂಬಿಕೆ ಅವರದು. ಇಂದಿನ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ವಾಮಾಚಾರ ಎಂಬುದು ಇದೆಯೋ ಇಲ್ಲವೋ ಎಂಬುದು ತರ್ಕಕ್ಕೆ ನಿಲುಕದ ವಿಚಾರ.












Click it and Unblock the Notifications