ಮಲೆಮಹದೇಶ್ವರ ವನ್ಯಧಾಮ ಪರಿಸರ ಸೂಕ್ಷ್ಮ ವಲಯವಾಗಿ ಘೋಷಣೆ
ಚಾಮರಾಜನಗರ, ಜುಲೈ 30 : ಮಲೆಮಹದೇಶ್ವರ ವನ್ಯಧಾಮದ 143.12 ಚದರ ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಘೋಷಣೆ ಮಾಡಿದೆ.
ವಿಭಿನ್ನ ಸಸ್ಯ ಸಂಪತ್ತು ಹಾಗೂ ವೈವಿಧ್ಯಮಯ ಜೀವ ಸಂಕುಲಗಳಿಗೆ ಮಲೆಮಹದೇಶ್ವರ ವನ್ಯಧಾಮ ಆಶ್ರಯತಾಣವಾಗಿದೆ. ವನ್ಯಧಾಮದ 8 ಕಂದಾಯ ಗ್ರಾಮಗಳು, 18 ಅರಣ್ಯ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ.
ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾದ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಅಧಿಕ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುವಂತಿಲ್ಲ. ಪರಿಸರ ಸೂಕ್ಷ್ಮ ವಲಯವನ್ನು ರಕ್ಷಣೆ ಮಾಡಲು ಮತ್ತು ಈ ಪ್ರದೇಶದ ಮೇಲೆ ಗಮನವಿಡಲು 11 ಸದಸ್ಯರ ಮೇಲುಸ್ತುವಾರಿ ಸಮಿತಿ ರಚನೆ ಮಾಡಲು ಸೂಚನೆ ನೀಡಲಾಗಿದೆ.

ಪರಿಸರ ಸೂಕ್ಷ್ಮ ವಲಯದಲ್ಲಿ ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಹಸಿರು ತಂತ್ರಜ್ಞಾನ ಆಳವಡಿಕೆ, ಗುಡಿ ಕೈಗಾರಿಕೆ, ಕಾಡು ಕೃಷಿ, ಪರಿಸರ ಸ್ನೇಹಿ ಸಾರಿಗೆ, ಪರಿಸರ ಜಾಗೃತಿ ಸೇರಿದಂತೆ ಪರಿಸರ ಸ್ನೇಹಿ ಚಟುವಟಿಕೆ ಪ್ರೋತ್ಸಾಹಿಸಬೇಕು ಎಂದು ಸಚಿವಾಲಯ ನಿರ್ದೇಶನ ನೀಡಿದೆ.
2007ರಲ್ಲಿ ಮಲೆಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಂತಿರುವ ಕಾವೇರಿ ವನ್ಯಧಾಮವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿತ್ತು.
ಕಂದಾಯ ಗ್ರಾಮಗಳು : ವನ್ಯಧಾಮದ ರಾಮಾಪುರ, ಅಜ್ಜಿಪುರ, ಗಂಗನದೊಡ್ಡಿ, ಸೂಳೇರಿಪಾಳ್ಯ, ಡಿ.ಎಂ.ಸಮುದ್ರ, ಹನೂರು, ಬೆಳತ್ತೂರು ಮತ್ತು ಶಿರಗೋಡು ಗ್ರಾಮಗಳು ಕಂದಾಯ ಗ್ರಾಮಗಳ ವ್ಯಾಪ್ತಿಗೆ ಒಳಪಡುತ್ತವೆ.
ಯಾವುದು ನಿಷೇಧ? : ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆಯಾದ ಪ್ರದೇಶದಲ್ಲಿ ವಾಣಿಜ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುವಂತಿಲ್ಲ. ಯಾವುದಕ್ಕೆ ನಿಷೇಧವಿದೆ ಇಲ್ಲಿದೆ ನೋಡಿ ಮಾಹಿತಿ...
* ವಾಣಿಜ್ಯ ಗಣಿಗಾರಿಕೆ, ಕಲ್ಲು ಕ್ವಾರಿ ಹಾಗೂ ಕ್ರಶಿಂಗ್ ಘಟಕ
* ದೊಡ್ಡ ಜಲವಿದ್ಯುತ್ ಘಟಕಗಳ ನಿರ್ಮಾಣ
* ಹಾನಿಕಾರಕ ವಸ್ತುಗಳ ಬಳಕ ಅಥವ ಉತ್ಪಾದನೆ
* ಮರದ ಮಿಲ್, ಇಟ್ಟಿಗೆ ಗೂಡು
* ಮರಗಳ ತೆರವು
* ವಿದ್ಯುತ್, ದೂರವಾಣಿ ಹಾಗೂ ಇತರ ಸಂಪರ್ಕ ಮಾಧ್ಯಮಗಳ ಕಂಬಗಳ ಅಳವಡಿಕೆ
* ರಾತ್ರಿ ರಸ್ತೆ ಸಂಚಾರ
* ಪಾಲಿಥೀನ್ ಬ್ಯಾಕ್ ಬಳಕೆ
* ವಾಣಿಝ್ಯ ಫಲಕಗಳ ಅಳವಡಿಕೆ












Click it and Unblock the Notifications