ಮಹದೇಶ್ವರಬೆಟ್ಟದಲ್ಲಿ ಬೆಳ್ಳಿ ರಥ ನಿರ್ಮಾಣ ಕಾರ್ಯ ಆರಂಭ
ಚಾಮರಾಜನಗರ, ಏಪ್ರಿಲ್ 12; ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನ ಬೆಳ್ಳಿ ರಥದ ನಿರ್ಮಾಣದ ಕಾರ್ಯವು ಅಧಿಕೃತವಾಗಿ ಭಾನುವಾರದಿಂದ ಬಿಗಿ ಬಂದೋಬಸ್ತ್ನಲ್ಲಿ ಆರಂಭಗೊಂಡಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳ್ಳಿರಥವನ್ನು ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಭಕ್ತರು ಒತ್ತಾಯ ಮಾಡುತ್ತಲೇ ಬಂದಿದ್ದರು. ಈ ನಡುವೆ ಭಕ್ತರು ರಥ ನಿರ್ಮಾಣಕ್ಕೆ ಅಗತ್ಯವಿರುವ ಬೆಳ್ಳಿ ಪದಾರ್ಥಗಳನ್ನು ನೀಡುವಂತೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದಿಂದ ಕೆಲವು ತಿಂಗಳ ಹಿಂದೆ ಭಕ್ತರಲ್ಲಿ ಮನವಿ ಮಾಡಲಾಗಿತ್ತು.
ಇದೀಗ ಮಹದೇಶ್ವರ ಬೆಟ್ಟದ ಖಜಾನೆಯಲ್ಲಿ ಸರಿ ಸುಮಾರು 400 ಕೆಜಿಗೂ ಅಧಿಕ ಅನುಪಯುಕ್ತ ಶುದ್ದ ಬೆಳ್ಳಿ ಪದಾರ್ಥಗಳು ಶೇಖರವಾಗಿದ್ದು, ಅದನ್ನು ಕರಗಿಸಿ ಆ ಬೆಳ್ಳಿಯನ್ನು ರಥ ನಿರ್ಮಾಣದ ಕಾರ್ಯಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ.

ಅದರಂತೆ ಬೆಳ್ಳಿ ಕರಗಿಸುವ ಕಾರ್ಯವನ್ನು ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿಗಳ ಬಿಗಿ ಭದ್ರತೆ ಹಾಗೂ ಕ್ಯಾಮರಾ ಕಣ್ಗಾವಲಲ್ಲಿ ಆರಂಭಿಸಲಾಗಿದೆ.
ಈಗಾಗಲೇ ಮಹದೇಶ್ವರ ಬೆಟ್ಟದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ ನೀಡಲಾಗಿರುವ ಬೆಳ್ಳಿ ಪದಾರ್ಥಗಳಲ್ಲಿ ಅಪರೂಪದ ನಾಣ್ಯಗಳು ಹಾಗೂ ವಸ್ತು ಸಂಗ್ರಹಾಲಯದಲ್ಲಿ ಇಡಬಹುದಾದ ಪದಾರ್ಥಗಳು ಸಿಗುತ್ತಿದ್ದು, ಅವುಗಳನ್ನು ಬೇರ್ಪಡಿಸಿ ಜೋಪಾನ ಮಾಡಲಾಗುತ್ತಿದೆ. ಉಳಿದ ಅನುಪಯುಕ್ತ ಬೆಳ್ಳಿ ಪದಾರ್ಥಗಳನ್ನು ಕರಗಿಸುವ ಕಾರ್ಯ ನಡೆಸಲಾಗುತ್ತಿದೆ.
"ಒಂದು ವೇಳೆ ಎಲ್ಲವೂ ಅಂದು ಕೊಂಡಂತೆ ಆದರೆ ಮುಂದಿನ ಜುಲೈ ಅಥವಾ ಆಗಷ್ಟ್ ತಿಂಗಳ ವೇಳೆಗೆ ನೂತನ ಬೆಳ್ಳಿ ರಥ ನಿರ್ಮಾಣವಾಗಬಹುದೆಂದು" ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಜಯ ವಿಭವ ಸ್ವಾಮಿ ತಿಳಿಸಿದ್ದಾರೆ.












Click it and Unblock the Notifications