ಹನೂರು: ಉರಿ ಬಿಸಿಲಿನಲ್ಲೂ ಮಲೆ ಮಹದೇಶ್ವರನ ಬೆಟ್ಟಕ್ಕೆ ಹರಿದುಬಂತು ಭಕ್ತರ ದಂಡು
ಚಾಮರಾಜನಗರ, ಮೇ, 19: ಚುನಾವಣೆ ಕಾವು ಮುಗಿದಿದ್ದು, ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದು ಅಮಾವಾಸ್ಯೆ ಹಿನ್ನೆಲೆ ಭಕ್ತಸಾಗರವೇ ಹರಿದುಬಂದಿದೆ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯಿದ್ದ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರಲಿಲ್ಲ.ಇದೀಗ ಚುನಾವಣೆ ಮುಗಿದು ಫಲಿತಾಂಶ ಹೊರ ಬಿದ್ದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಸಾವಿರಾರು ಮಂದಿ ಭಕ್ತರು ಮಾದಪ್ಪನ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅಮಾವಾಸ್ಯೆಗೆ ಈ ಪರಿ ಭಕ್ತರು ಆಗಮಿಸುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

ಇನ್ನು, ಅಮಾವಾಸ್ಯೆ ಅಂಗವಾಗಿ ದೇಗುಲ ಗರ್ಭಗುಡಿ ಸೇರಿದಂತೆ ಸುತ್ತಮುತ್ತಲ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು, ದೇವರಿಗೆ ಬೆಳಗ್ಗೆಯಿಂದಲೇ ಅಭಿಷೇಕ, ಬಿಲ್ವಾರ್ಚನೆ ನೆರವೇರಿಸಿದ್ದಾರೆ. ಅಲ್ಲದೆ ಹುಲಿವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನ ಸೇವೆ ಮಾಡುತ್ತಿರುವ ಭಕ್ತರು ಬಿರು ಬಿಸಿಲಿನಲ್ಲೂ ಉತ್ಸಾಹದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉತ್ಸವದ ವೇಳೆ ಹರಕೆ ಹೊತ್ತ ಜನರು ದವಸ, ಧಾನ್ಯ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯುವುದರ ಮೂಲಕ ದಂಡಿನ ಕೋಲನ್ನು ಹೊತ್ತು ಪ್ರಾರ್ಥಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಹರಕೆ ಹೊತ್ತವರು ಮುಡಿ ಸೇವೆ, ಉರುಳು ಸೇವೆ, ಪಂಜಿನ ಸೇವೆ ಹಾಗೂ ರಜಾ ಒಡೆಯುವ ಸೇವೆಯನ್ನು ಕೈಗೊಳ್ಳುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು. ಪ್ರಾಧಿಕಾರದ ವತಿಯಿಂದ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ತಡೆಗೋಡೆ ಕುಸಿತ
ಇನ್ನು ಇತ್ತೀಚೆಗಷ್ಟೆ ಚಾಮರಾಜನಗರ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಕಾರಣ, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿತ್ತು. ವರುಣನ ಆರ್ಭಟಕ್ಕೆ ಈಗಾಗಲೇ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳೆ ಹಾಗೂ ಆಸ್ತಿಗಳಿಗೆ ಹಾನಿಯಾಗಿತ್ತು. ನಿರಂತರ ಮಳೆಯಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೂ ಹಾನಿಯಾಗಿದ್ದು, ರಾಜ್ಯದ ಪ್ರಮುಖ ಯಾತ್ರ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು ಎಂಬಲ್ಲಿ ನಿರ್ಮಾಣ ಮಾಡಿರುವ 108 ಅಡಿ ಮಲೆ ಮಹದೇಶ್ವರ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿತಗೊಂಡಿತ್ತು.
ಪ್ರತಿಮೆ ಸ್ಥಳದಲ್ಲಿ ಈಗಾಗಲೇ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಕ್ತರ ಪ್ರವೇಶ ನಿಷೇಧ ಮಾಡಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೆರಡು ದಿನಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ಪ್ರಾಧಿಕಾರದ ಮಾಹಿತಿ ನೀಡಿತ್ತು.
ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 108 ಅಡಿ ಮಲೆಮಹದೇಶ್ವರನ ಪ್ರತಿಮೆ ನಿರ್ಮಿಸಲಾಗಿದೆ. ಗದಗದ ಸಿಎಸ್ಎಪಿ ಆರ್ಕಿಟೆಕ್ಟ್ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎನ್ನುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರುಡೇಶ್ವರ ಶಿವನ ಮೂರ್ತಿ, ಬಸವ ಕಲ್ಯಾಣದದಲ್ಲಿ ಬೃಹತ್ ಬಸವಣ್ಣನ ಪ್ರತಿಮೆಗಳ ರೂವಾರಿ ಆಗಿದ್ದರು.
ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದಾಗಿದೆ. 108 ಅಡಿ ಎತ್ತರ ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ. ಈಗಾಗಲೇ ಪ್ರವಾಸಿಗರು ದಂಡು ಇಲ್ಲಿಗೆ ಆಗಮಿಸುತ್ತಿದ್ದು, ಪ್ರತಿಮೆ ಅನಾವರಣಗೊಂಡ ಕೆಲವೇ ತಿಂಗಳಲ್ಲಿ ಪ್ರತಿಮೆ ಮುಂಭಾಗ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿತಗೊಂಡಿತ್ತು.












Click it and Unblock the Notifications